ಒಂದೂ ರಜೆ ಪಡೆಯದ ಪ್ರಧಾನ ಸೇವಕ ಮೋದಿ: ಚಕ್ರವರ್ತಿ ಸೂಲಿಬೆಲೆ

KannadaprabhaNewsNetwork |  
Published : Mar 22, 2024, 01:00 AM IST
ಚಿಕ್ಕೋಡಿ ನಗರದ ಕಿವಡ ಮೈದಾನದಲ್ಲಿ ಆಯೋಜಿಸಿದ್ದ ಸಭೆಯನ್ನುದ್ದೇಶಿಸಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆಮಾತನಾಡಿದರು. | Kannada Prabha

ಸಾರಾಂಶ

ಚಿಕ್ಕೋಡಿ ನಗರದ ಕಿವಡ ಮೈದಾನದಲ್ಲಿ ಆಯೋಜಿಸಿದ್ದ ಬಿಜೆಪಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ವಾಗ್ಮಿ, ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ಒಂದು ದಿನವೂ ರಜೆ ಪಡೆಯದೆ ಕೆಲಸ ಮಾಡಿದ ಅಪರೂಪದ ಪ್ರಧಾನ ಸೇವಕ ನರೇಂದ್ರ ಮೋದಿ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಕಳೆದ ಹತ್ತು ವರ್ಷಗಳಲ್ಲಿ ಒಂದು ದಿನವೂ ರಜೆ ಪಡೆಯದೆ ಕೆಲಸ ಮಾಡಿದ ಅಪರೂಪದ ಪ್ರಧಾನ ಸೇವಕ ನರೇಂದ್ರ ಮೋದಿ ಎಂದು ವಾಗ್ಮಿ, ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಚಿಕ್ಕೋಡಿ ನಗರದ ಕಿವಡ ಮೈದಾನದಲ್ಲಿ ಆಯೋಜಿಸಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಪ್ರಧಾನಿ ಆಗುವ ಮೊದಲೇ ನಮೋ ಬ್ರಿಗೇಡ್ ಕಟ್ಟಿದ್ದೆವು. ನಮ್ಮ ಗುರಿ ಉದ್ದೇಶ ಒಂದೇ. ನರೇಂದ್ರ ಮೋದಿಯವರನ್ನು ಈ ದೇಶದ ಪ್ರಧಾನಿಯನ್ನಾಗಿ ಮಾಡುವುದಾಗಿತ್ತು. ಪ್ರಧಾನಿಯಾಗುತ್ತಲೆ ಸಾರ್ಕ್ ದೇಶಗಳ ಪ್ರಮುಖರನ್ನು ಕರೆದು ಪ್ರಮಾಣ ವಚನ ಸ್ವೀಕರಿಸಿದರು. ಮನ್ ಕೀ ಬಾತ್ ಮೂಲಕ ದೇಶದ ಜನರನ್ನು ತಲುಪಿದರು. ಮೋದಿ ಅವರು ವಿಶ್ವದ ಯಾವುದೇ ಮೂಲೆಗೆ ಹೋದರೂ ಹಿಂದುತ್ವ ಬಿಡಲಿಲ್ಲ. ಶ್ವೇತಭವನಕ್ಕೆ ಹೋದರೂ ನವರಾತ್ರಿ ಉಪವಾಸ ಬಿಡಲಿಲ್ಲ. ಮುಸಲ್ಮಾನರ ಮನಸನ್ನು ಕೂಡ ಮೋದಿ ಗೆದ್ದಿದ್ದಾರೆ. ದೀಪಾವಳಿಯನ್ನು ಸೈನಿಕರೊಂದಿಗೆ ಆಚರಿಸುತ್ತಾರೆ. ಪೌರ ಕಾರ್ಮಿಕರ ಕಾಲು ತೊಳೆದು ಗೌರವಿಸಿದ ಮೊದಲ ಪ್ರಧಾನಿ ಮೋದಿ ಎಂದು ಬಣ್ಣಿಸಿದರು.

ದೇಶದ ಆರ್ಥಿಕತೆಗೆ ಟಾನಿಕ್‌ ನೀಡಲು ನೋಟು ಅಮಾನ್ಯದಂಥ ದಿಟ್ಟ ಕ್ರಮ ಕೈಗೊಂಡರು. ಇದರ ಪರಿಣಾಮ ಈಗ ಭಾರತ ವಿಶ್ವದ 5ನೇ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಖೋಟಾನೋಟು ಪ್ರಿಂಟ್ ಮಾಡಿ ಭಾರತದ ಅರ್ಥ ವ್ಯವಸ್ಥೆ ಹಾಳು ಮಾಡಲು ಸಂಚು ಹಾಕಿದ್ದ ಪಾಕಿಸ್ತಾನ ಮೋದಿಯವರ ಈ ಏಟಿನಿಂದ ಇದೀಗ ಬಿಕ್ಷೆ ಬೇಡುವ ಪರಿಸ್ಥಿತಿಗೆ ಬಂದಿದೆ. ಪಾಕಿಸ್ತಾನಕ್ಕೆ ಯಾಕೆ ಈ ಸ್ಥಿತಿ ಬಂದಿದೆ ಎಂದು ಕಾಂಗ್ರೆಸ್ ನವರನ್ನು ಕೇಳಬೇಕು.ಆರ್ಟಿಕಲ್ 370 ಕಿತ್ತು ಬಿಸಾಡುವ ಸಾಹಸ ತೋರಿದ್ದು ಪ್ರಧಾನಿ ಮೋದಿ ಎಂದು ಗುಣಗಾಣ ಮಾಡಿದರು.

ಕಾಂಗ್ರೆಸ್‌ನವರು ಚಕ್ರವರ್ತಿ ಸುಳ್ಳು ಹೇಳುತ್ತಾರೆ ಎಂದು ಅಪಪ್ರಚಾರ ಮಾಡುತ್ತಾರೆ. ನನ್ನ ಭಾಷಣದ ಒಂದು ತುಣುಕನ್ನು ತೆಗೆದು ಅಪಪ್ರಚಾರ ಮಾಡಿದ್ದಾರೆ. ವಿಕೃತ ಪ್ರಚಾರ ಮಾಡಿ ಕಲ್ಲು ಹೊಡೆದರು. ಎರಡು ವರ್ಷ ನಾನು ಕಾಂಗ್ರೆಸ್‌ನವರಿಗೆ ಉತ್ತರ ಕೊಡಲಿಲ್ಲ. ಆದರೆ ಇತ್ತೀಚೆಗೆ ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ್ದಾರೆ. ಬಿಜೆಪಿ 400 ಸ್ಥಾನ ಗೆಲ್ಲುತ್ತದೆ ಎಂದು. ಹೀಗಾಗಿ ಅವರೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಮೋದಿ ಅಲೆ ಹೇಗಿದೆ ಅಂದರೆ ರಾಜ್ಯದಲ್ಲಿ ಸಚಿವರೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಹೆದರುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಇವತ್ತು ಕಾಶ್ಮೀರದಲ್ಲಿ ನಿರ್ಭಯವಾಗಿ ಗಲ್ಲಿ ಗಲ್ಲಿಯಲ್ಲಿ ಕ್ರಿಕೆಟ್ ಆಡಬಹುದು. ಅದಕ್ಕೆ ಕಾರಣ ನರೇಂದ್ರ ಮೋದಿ. ಕಳೆದ 500 ವರ್ಷಗಳಲ್ಲಿ ಇಂತಹ ರಾಜ ಬರಲಿಲ್ಲ. ರಾಮಮಂದಿರಕ್ಕೆ ಬರಲು ಸೋನಿಯಾ ಗಾಂಧಿ, ಖರ್ಗೆ ಅವರಿಗೆ ಅಹ್ವಾನ ಕೊಟ್ಟರೂ ಮುಸ್ಲಿಮರ ತುಷ್ಟೀಕರಣಕ್ಕಾಗಿ ಬರಲಿಲ್ಲ. ರಾಮಮಂದಿರ ನಮ್ಮ ಪ್ರೇರಣೆ. ಕಾಂಗ್ರೆಸ್‌ನವರು ಅಂಬೇಡ್ಕರ್ ಅವರಿಗೆ ಯಾಕೆ ಭಾರತ ರತ್ನ ಕೊಡಲಿಲ್ಲ. ಬಾಬಾಸಾಹೇಬರಿಗೆ ಪಂಚತೀರ್ಥ ಅರ್ಪಿಸಿದ್ದು ಮೋದಿ ಅವರು. ಆದರೆ ಡಾ.ಅಂಬೇಡ್ಕರ್ ಅವರಿಗೆ ಮೋದಿ ಏನು ಮಾಡಿದರು ಎಂದು ಕಾಂಗ್ರೆಸ್ ನವರು ಪ್ರಶ್ನೆ ಮಾಡುತ್ತಾರೆ. ಮೋದಿಯವರ 22 ವರ್ಷಗಳ ಅಧಿಕಾರದ ಅವಧಿಯಲ್ಲಿ ಒಂದು ಭ್ರಷ್ಟಾಚಾರದ ಆರೋಪ ಇಲ್ಲ. ಕಾಂಗ್ರೆಸ್ ಭಾರತವನ್ನು ಸ್ಕ್ಯಾಮ್‌ಗಳ ದೇಶವನ್ನಾಗಿ ಮಾಡಿದ್ದರು ಎಂದು ವಾಗ್ದಾಳಿ ನಡೆಸಿದರು.

ವಾಜಪೇಯಿ ಅವರು ಸುವರ್ಣ ಚತುಷ್ಪಥ ರಸ್ತೆ ಮಾಡಿದರು. ಸುವರ್ಣ ಚತುಷ್ಪಥ ರಸ್ತೆ ಅಂದರೆ ಚಿನ್ನದ ರಸ್ತೆಯಿದ್ದಂತೆ. ವಾಜಪೇಯಿಗೂ ಮುಂಚೆ ಕಾಂಗ್ರೆಸ್ ನಾಯಕರಿಗೆ ಇಂತಹ ಕಲ್ಪನೆಯೇ ಇರಲಿಲ್ಲ.

ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಪ್ರವೀಣ ಕಾಂಬಳೆ, ಸಂಜಯ ಕವಟಗಿಮಠ, ಮಲ್ಲಿಕಾರ್ಜುನ ಕವಟಗಿಮಠ, ಶಾಂಭವಿ ಅಶ್ವಥಪೂರ, ಮಾಜಿ ಶಾಸಕ ಬಾಳಾಸಾಹೇಬ ವಡ್ಡರ, ಜಯಾನಂದ ಜಾಧವ, ಅಪ್ಪಾಸಾಹೇಬ ಚೌಗಲಾ ಉಪಸ್ಥಿತರಿದ್ದರು.ತೆರಿಗೆಯಿಂದ ಬಂದ ಹಣದಲ್ಲಿ ಜನರ ಜೀವನ ಸುಧಾರಣೆಗೆ ಮೂಲಸೌಕರ್ಯ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಬೇಕು. ಆದರೆ, ರಾಜ್ಯದಲ್ಲಿ ಸಂಗ್ರಹಿಸಿದ ತೆರಿಗೆ ಹಣವನ್ನು ಜನರಿಗೆ ಹಂಚಿಕೆ ಮಾಡುವ ಕೆಲಸ ಮಾಡುತ್ತಿದೆ. ಮುಂದೆಯೂ ಇಂತಹ ಬಿಟ್ಟಿ ಭಾಗ್ಯಗಳು ಮುಂದುವರಿದರೆ ರಾಜ್ಯದಲ್ಲಿ ರಸ್ತೆ ಮಾಡಲು ಹಣ ಇರಲ್ಲ.

-ಚಕ್ರವರ್ತಿ ಸೂಲಿಬೆಲೆ ವಾಗ್ಮಿ, ನಮೋ ಬ್ರಿಗೇಡ್ ಸಂಸ್ಥಾಪಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೋಹಿನಿ ಸಿದ್ದೇಗೌಡ ನೊಂದವರ ಪರ ಗಟ್ಟಿ ಧ್ವನಿಯಾಗಿದ್ದರು
ಪೌರಕಾರ್ಮಿಕರು ಆರೋಗ್ಯದ ಕಡೆಗೂ ಗಮನಹರಿಸಬೇಕಾದುದು ಅಗತ್ಯ: ಶ್ವೇತಾ