ಶಾಲೆ, ಅಂಗನವಾಡಿಗಳಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಿ: ಜಿಪಂ ಸಿಇಒ

KannadaprabhaNewsNetwork | Updated : Jun 16 2025, 02:57 AM IST

ಬಾಗಲಕೋಟೆ ಜಿಲ್ಲೆಯ ಬಾದಾಮಿ ಹಾಗೂ ಗುಳೇದಗುಡ್ಡ ತಾಲೂಕಿನ ವಿವಿಧ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಭೇಟಿ ನೀಡಿ ಮೂಲ ಸೌಲಭ್ಯಗಳನ್ನು ಪರಿಶೀಲಿಸಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯ ಬಾದಾಮಿ ಹಾಗೂ ಗುಳೇದಗುಡ್ಡ ತಾಲೂಕಿನ ವಿವಿಧ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಭೇಟಿ ನೀಡಿ ಮೂಲ ಸೌಲಭ್ಯಗಳನ್ನು ಪರಿಶೀಲಿಸಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚನೆ ನೀಡಿದರು.

ಬಾದಾಮಿ ತಾಲೂಕಿನ ಮಾಲಗಿ ಗ್ರಾಮದಲ್ಲಿರುವ ಅಂಗನವಾಡಿ ಕಟ್ಟಡ ಕಾಮಗಾರಿ, ಉಗಲವಾಟ ಗ್ರಾಮದ ಬದು ನೀರು ನಿರ್ವಹಣೆ ಕಾಮಗಾರಿ, ಕುಳಗೇರಿ ಕ್ರಾಸ್‌ ನಲ್ಲಿ ಎಂ.ಆರ್.ಎಫ್ ಹಾಗೂ ಘನತಾಜ್ಯ ನಿರ್ವಹಣೆ ಕಾಮಗಾರಿ ಹಾಗೂ ಗುಳೇದಗುಡ್ಡ ತಾಲೂಕಿನ ತೋಗುಣಸಿ ಗ್ರಾಮದ ನೀರು ಸಂಸ್ಕರಣೆ ಘಟಕದ ಕಾಮಗಾರಿಯನ್ನು ವೀಕ್ಷಣೆ ಮಾಡಿ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಆಡಗಲ್ಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕಾಂಪೌಂಡ್ ಕಾಮಗಾರಿ ಪರಿಶೀಲಿಸಿದರು. ಕುಳಗೇರಿ ಕ್ರಾಸ್‌ ನಲ್ಲಿರುವ ನವೋದಯ ಶಾಲೆ ಮತ್ತು ಆಡಗಲ್ಲ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಮಕ್ಕಳ ಕಲಿಕೆಯ ಬಗ್ಗೆ ಪರೀಕ್ಷೆ ಮಾಡಿದರು. ಮಕ್ಕಳ ಬುದ್ಧಿಮಟ್ಟವನ್ನು ಪ್ರತ್ಯೇಕವಾಗಿ ಗಮನಿಸಿ ಬೋಧನೆ ಮಾಡಲು ಶಿಕ್ಷಕರಿಗೆ ಸೂಚಿಸಿದರು. ನಂತರ ಮಕ್ಕಳೊಂದಿಗೆ ಸಂವಾದ ನಡೆಸಿ ಕುಂದು ಕೊರತೆ ಆಲಿಸಿದರು. ಬಿಸಿ ಊಟದ ಕೋಣೆಗೆ ತೆರಳಿ ಆಹಾರದ ಗುಣಮಟ್ಟ ಪರಿಶೀಲಿಸಿದರು. ದಾಸ್ತಾನು ಕೋಣೆಗೆ ತೆರಳಿ ಆಹಾರ ಧಾನ್ಯಗಳ ಪರಿಶುದ್ಧತೆ ಗಮನಿಸಿದರು.

ಭೇಟಿ ಸಮಯದಲ್ಲಿ ಬಾದಾಮಿ ತಾಪಂ ಕಾಯಾನಿರ್ವಾಹಕ ಅಧಿಕಾರಿ ಸುರೇಶ ಕೊಕ್ಕರೆ, ಗುಳೇದಗುಡ್ಡ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಬಡಿಗೇರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಆಕಾಶ ವಂದೇ, ಪಂಚಾಯತ್‌ ರಾಜ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಶೋಕ ತೋಪಲಕಟ್ಟಿ ಸೇರಿದಂತೆ ಇತರರು ಇದ್ದರು.