ಹಾನಗಲ್ಲ: ಶಾಲೆಗಳಲ್ಲಿ ಬಿಸಿಯೂಟ ಸಿದ್ಧತೆಯ ಸಂದರ್ಭದಲ್ಲಿ ಬಿಸಿಊಟ ತಯಾರಕರು ಸ್ವಚ್ಛತೆಗೆ ಆದ್ಯತೆ ನೀಡಿ ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಪದಾರ್ಥಗಳನ್ನು ಸಿದ್ಧಗೊಳಿಸುವ ಸಮತೋಲನ ಮನಸ್ಸು ಬೇಕು ಎಂದು ಅರಳೇಶ್ವರ ಆರೋಗ್ಯ ಕೇಂದ್ರದ ಡಾ. ದಿವ್ಯಾ ಪಾಣಿಗಟ್ಟಿ ತಿಳಿಸಿದರು. ಶನಿವಾರ ಇಲ್ಲಿನ ಗುರುಭವನದಲ್ಲಿ ಅಕ್ಷರ ದಾಸೋಹ ಇಲಾಖೆಯಿಂದ ತಾಲೂಕಿನ 700ಕ್ಕೂ ಅಧಿಕ ಬಿಸಿಯೂಟ ತಯಾರಕರಿಗೆ ತರಬೇತಿ ಕಾರ್ಯಾಗಾರದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಶುದ್ಧ ಆಹಾರ ಮತ್ತು ನೀರು ನಮ್ಮ ಆರೋಗ್ಯದ ಮೊದಲ ಸೂತ್ರಗಳು. ಎಲ್ಲರೂ ವೈಯಕ್ತಿಕ ನೈರ್ಮಲ್ಯಕ್ಕೆ ಮೊದಲು ಆದ್ಯತೆ ನೀಡಬೇಕು. ಅಡುಗೆ ಮನೆ, ಪಾತ್ರೆ, ಆಹಾರ ಸಾಮಗ್ರಿಗಳನ್ನು ಸ್ವಚ್ಛವಾಗಿಟ್ಟು ಬಳಸುವ ವ್ಯವಧಾನವಿರಬೇಕು. ಅಡುಗೆಗೆ ಅನಿವಾರ್ಯ ಸಂದರ್ಭದಲ್ಲಿ ಶುಭ್ರ ಬಟ್ಟೆಗಳನ್ನು ಬಳಸಬೇಕು. ನಾವು ತೊಡುವ ಬಟ್ಟೆಗಳು ಕೂಡ ಶುಭ್ರವಾಗಿರಬೇಕು ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಸ್.ಎಸ್. ಹಿರೇಮಠ, ಯಾವುದೇ ಮಗು ಬಡತನ ಕಾರಣದಿಂದಾಗಿ ಹಸಿವಿನಿಂದ ಬಳಲಿ ಶಾಲಾ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಉದ್ದೇಶ ಸರ್ಕಾರದ್ದಾಗಿದೆ. ಅಕ್ಷರ ಜ್ಞಾನದಿಂದ ಮಕ್ಕಳು ಹೊರಗುಳಿದರೆ ಪ್ರತಿಭೆಗಳನ್ನು ಕಳೆದುಕೊಂಡಂತೆ. ಆ ಕಾರಣಕ್ಕಾಗಿ ಸರ್ಕಾರ ಬಿಸಿಯೂಟಕ್ಕೆ ಹೆಚ್ಚು ಮಹತ್ವ ನೀಡಿದೆ. ಈಗ ಸರ್ಕಾರ ಬಿಸಿಯೂಟ ಸಿಬ್ಬಂದಿಗೆ ಅವರ ಸೇವಾವಧಿಯನ್ನು ಪರಿಗಣಿಸಿ ನಿವೃತ್ತಿ ಸಂದರ್ಭದಲ್ಲಿ ಇಡಿಗಂಟು ನೀಡುತ್ತಿದೆ. ವರ್ಷಕ್ಕೊಮ್ಮೆ ತಾಲೂಕಿನ ಎಲ್ಲ ಅಡುಗೆ ಸಿಬ್ಬಂದಿ ಆರೋಗ್ಯ, ಗ್ಯಾಸ ಬಳಕೆ ಸೇರಿದಂತೆ ಎಲ್ಲ ತರಬೇತಿ ಪಡೆಯಬೇಕಾಗಿರುವುದು ಅತ್ಯವಶ್ಯ. ಹಾನಗಲ್ಲ ತಾಲೂಕಿನ 282 ಶಾಲೆಗಳಿಗೆ 264 ಅಡುಗೆ ಕೇಂದ್ರಗಳಲ್ಲಿ 700 ಅಡುಗೆ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ, ಮನೆಯಲ್ಲಿ ತಾಯಿಯು ಮಕ್ಕಳ ಲಾಲನೆ ಪಾಲನೆ ಮಾಡುವಂತೆಯೇ ಶಾಲೆಯಲ್ಲಿ ಬಿಸಿಯೂಟದ ವಿಷಯದಲ್ಲಿ ನಮ್ಮ ಮನೆಯ ಮಕ್ಕಳಂತೆ ಊಟ ಸಿದ್ಧಪಡಿಸಿ ಬಡಿಸುವ ಅಗತ್ಯವಿದೆ. ಸರ್ಕಾರ ಯಾವುದೇ ಮಗು ಶಾಲೆಯಿಂದ ಹೊರಗುಳಿಯಬಾರದು. ಪಾಲಕರು ಬಡತನಕ್ಕಾಗಿ ಮಕ್ಕಳನ್ನೂ ಬಾಲ ಕಾರ್ಮಿಕರನ್ನಾಗಿ ಮಾಡಬಾರದು. ಆಹಾರ ಕೊರತೆ ಕಾರಣವಾಗಿ ಮಕ್ಕಳು ಶಾಲೆಯಿಂದ ಹೊರಗುಳಿಯಬಾರದು ಎಂಬ ಧ್ಯೇಯೋದ್ಧೇಶದೊಂದಿಗೆ ಬಿಸಿಯೂಟ ಆರಂಭಿಸಿದೆ. ಇದರ ಸದುಪಯೋಗ ಅಡುಗೆ ಸಿಬ್ಬಂದಿಯ ಕೈಯಲ್ಲಿದೆ ಎಂದರು.ಸಿಆರ್ಪಿ ಸಂಪನ್ಮೂಲ ವ್ಯಕ್ತಿಗಳಾದ ಸಿದ್ದು ಗೌರಣ್ಣನವರ, ಸಂತೋಷ ಜಂಪಣ್ಣನವರ, ಗಂಗಾಧರ ವಡ್ಡರ, ಮುರುಗೇಶ ಬಾಳೂರ, ಮೃತ್ಯುಂಜಯ ಹಾವನೂರ, ಸಿದ್ದಲಿಂಗೇಶ ಕಾಯಕದ, ಮಲ್ಲೇಶ ಹೊಲಬಿಕೊಂಡ, ಪರಮೇಶ ಕಾಲಕೊಪ್ಪ, ಮೂಯಿದ್ದೀನ ಮುಂಡರಗಿ ವೇದಿಕೆಯಲ್ಲಿದ್ದರು.