ಗುಣಮಟ್ಟದ ಬಿತ್ತನೆಬೀಜ ವಿತರಣೆಗೆ ಆದ್ಯತೆ ನೀಡಿ: ದೇವೇಂದ್ರಪ್ಪ

KannadaprabhaNewsNetwork | Published : May 28, 2025 1:56 AM
ಸಿರಿಗೆರೆ ಶ್ರೀಗಳ ಕೃಪಾಕಟಾಕ್ಷದಿಂದ ಮೂರು ಸರ್ಕಾರಗಳು ಮೂರು ಜನ ಮುಖ್ಯಮಂತ್ರಿಗಳು, ಮೂರು ಜನ ನೀರಾವರಿ ಸಚಿವರು, ಮೂರು ಶಾಸಕರ ಶ್ರಮದ ಫಲವಾಗಿ ೫೭ ಕೆರೆ ತುಂಬಿಸುವ ಯೋಜನೆಯಿಂದ ಕೆರೆಗಳಲ್ಲಿ ಸಾಕಷ್ಟು ನೀರಿದೆ. ವರುಣ ದೇವನ ಕೃಪೆಯಿಂದ ಒಂದೆರಡು ಮಳೆ ಜೋರಾಗಿ ಬಂದರೆ ಕೆರೆಗಳು ತುಂಬಲಿವೆ. ತಾಲೂಕಿನ ರೈತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಜಗಳೂರು

ಸಿರಿಗೆರೆ ಶ್ರೀಗಳ ಕೃಪಾಕಟಾಕ್ಷದಿಂದ ಮೂರು ಸರ್ಕಾರಗಳು ಮೂರು ಜನ ಮುಖ್ಯಮಂತ್ರಿಗಳು, ಮೂರು ಜನ ನೀರಾವರಿ ಸಚಿವರು, ಮೂರು ಶಾಸಕರ ಶ್ರಮದ ಫಲವಾಗಿ ೫೭ ಕೆರೆ ತುಂಬಿಸುವ ಯೋಜನೆಯಿಂದ ಕೆರೆಗಳಲ್ಲಿ ಸಾಕಷ್ಟು ನೀರಿದೆ. ವರುಣ ದೇವನ ಕೃಪೆಯಿಂದ ಒಂದೆರಡು ಮಳೆ ಜೋರಾಗಿ ಬಂದರೆ ಕೆರೆಗಳು ತುಂಬಲಿವೆ. ತಾಲೂಕಿನ ರೈತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಮಂಗಳವಾರ ರೈತರಿಗೆ ಕೃಷಿ ಇಲಾಖೆಯಿಂದ ಬಿತ್ತನೆಬೀಜ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ವಾಡಿಕೆಗಿಂತ ಬೇಗನೇ ಮುಂಗಾರು ಉತ್ತಮವಾಗಿ ಆರಂಭವಾಗಿದೆ. ಬಿತ್ತನೆಗೆ ರೈತರು ಭೂಮಿ ಹದಗೊಳಿಸುತ್ತಿದ್ದಾರೆ. ಕೃಷಿ ಇಲಾಖೆ ಮೆಕ್ಕೆಜೋಳ, ರಾಗಿ, ತೊಗರಿ, ಶೇಂಗಾ, ಸೂರ್ಯಕಾಂತಿ ಬೆಳೆಗಳ ಬಿತ್ತನೆ ಬೀಜ ವಿತರಣೆ ಸಬ್ಸಿಡಿ ನೀಡುತ್ತಿದೆ. ಸಾಮಾನ್ಯ ವರ್ಗಕ್ಕೆ ಶೇ.೫೦ ರಷ್ಟು ಮತ್ತು ಎಸ್ಸಿ-ಎಸ್ಟಿ ವರ್ಗದ ರೈತರಿಗೆ ಶೇ.೭೫ ರಷ್ಟು ಸಬ್ಸಿಡಿಯಿದ್ದು, ಅರ್ಹ ರೈತರು ಸದುಪಯೋಗ ಪಡೆಯಬೇಕು ಎಂದರು.

ಎಡಿಎ ಎಚ್.ಶ್ವೇತಾ ಮಾತನಾಡಿ, ತಾಲೂಕಿನ ಬಿಳಿಚೋಡು, ಹೊಸಕೆರೆ ರೈತ ಸಂಪರ್ಕ ಕೇಂದ್ರಗಳಲ್ಲಿ ಮತ್ತು ಜಗಳೂರು ಪಟ್ಟಣದ ಎಪಿಎಂ ಕೇಂದ್ರದಲ್ಲಿ ಮತ್ತು ಬಿದರಕೆರೆ ಎಫ್‌ಪಿಒನಲ್ಲಿ ಬಿತ್ತನೆ ಬೀಜ ವಿತರಣೆಗೆ ದಾಸ್ತಾನು ಮಾಡಲಾಗಿದೆ. ಈಗಾಗಲೇ ರೈತರು ಬಿತ್ತನೆ ಬೀಜಗಳನ್ನು ಕೊಳ್ಳುತ್ತಿದ್ದಾರೆ. ಪ್ರಸ್ತುತ ವರ್ಷ ೩೮ ಸಾವಿರ ಹೆಕ್ಟೇರ್ ಮೆಕ್ಕೆಜೋಳ, ೪ ಸಾವಿರ ಹೆಕ್ಟೇರ್ ರಾಗಿ, ೪ ಸಾವಿರ ಹೆಕ್ಟೇರ್ ತೊಗರಿ, ೨೦೦ ಹೆಕ್ಟೇರ್ ಸೂರ್ಯಕಾಂತಿ ಸೇರಿದಂತೆ ಅನೇಕ ವೈವಿಧ್ಯಮಯ ಬೆಳೆಗಳನ್ನು ಬೆಳೆಯಲು ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪೀಕಾರ್ಡ್ ಬ್ಯಾಂಕ್‌ ನಾಮನಿರ್ದೇಶಿತ ಸದಸ್ಯ ಸಣ್ಣಸೂರಯ್ಯ, ಕಾಂಗ್ರೆಸ್ ಮುಖಂಡರಾದ ಬಿ.ಮಹೇಶ್ವರಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷ ಚಿದಾನಂದ ಜಿ.ಎಸ್., ಕಾಂತರಾಜು, ಕೃಷಿ ಅಧಿಕಾರಿಗಳಾದ ಜೀವಿತಾ, ರೇಣುಕುಮಾರ್, ದೇವರಾಜ್, ಪಲ್ಲಾಗಟ್ಟೆ ಶೇಖರಪ್ಪ, ಗೌಸ್‌ ಅಹಮದ್ ಇತರರು ಇದ್ದರು.

- - -

-೨೭ಜೆಎಲ್ಆರ್ಚಿತ್ರ೧ಎ:

ಜಗಳೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಸಬ್ಸಿಡಿ ದರದಲ್ಲಿ ರೈತರಿಗೆ ಬಿತ್ತನೆಬೀಜ ವಿತರಣೆಗೆ ಚಾಲನೆ ನೀಡಿದರು.