ಧಾರ್ಮಿಕ ಕೇಂದ್ರಗಳು ಅನ್ನದಾನ, ಶಿಕ್ಷಣ, ಸೇವಾ ಕೇಂದ್ರಗಳಾಗಿವೆ: ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

KannadaprabhaNewsNetwork |  
Published : May 28, 2025, 01:56 AM IST
ಶಿವಮೊಗ್ಗ ಸಮೀಪದ ಹೊಳೆಹನಸವಾಡಿ ಗ್ರಾಮದ ಶ್ರೀ ಚೌಡೇಶ್ವರಿ ದೇವಾಲಯ ಗೋಪುರ ಲೋಕಾರ್ಪಣೆ ಮತ್ತು ಕಳಸಾರೋಹಣ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಧಾರ್ಮಿಕ ಕೇಂದ್ರಗಳು ಜನರನ್ನು ಒಂದೆಡೆ ಸೇರಿಸುವ ಸಾಂಸ್ಕೃತಿಕ ಕೇಂದ್ರದ ಜೊತೆಗೆ ಶಿಕ್ಷಣ, ಅನ್ನದಾನ ಹಾಗೂ ಸೇವಾ ಕರ್ಮಗಳ ಕೇಂದ್ರವಾಗಿದೆ ಎಂದು ಚಿತ್ರದುರ್ಗ ಬೋವಿ ಗುರು ಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಧಾರ್ಮಿಕ ಕೇಂದ್ರಗಳು ಜನರನ್ನು ಒಂದೆಡೆ ಸೇರಿಸುವ ಸಾಂಸ್ಕೃತಿಕ ಕೇಂದ್ರದ ಜೊತೆಗೆ ಶಿಕ್ಷಣ, ಅನ್ನದಾನ ಹಾಗೂ ಸೇವಾ ಕರ್ಮಗಳ ಕೇಂದ್ರವಾಗಿದೆ ಎಂದು ಚಿತ್ರದುರ್ಗ ಬೋವಿ ಗುರು ಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

ಸಮೀಪದ ಹೊಳೆಹನಸವಾಡಿ ಗ್ರಾಮದ ಶ್ರೀ ಚೌಡೇಶ್ವರಿ ದೇವಾಲಯ ಗೋಪುರ ಲೋಕಾರ್ಪಣೆ ಮತ್ತು ಕಳಸಾರೋಹಣ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ದೇವಾಲಯಗಳಿಗೆ ಭೇಟಿ ನೀಡುವುದರಿಂದ ಮನಸ್ಸಿಗೆ ಶಾಂತಿ ಲಭಿಸುತ್ತದೆ. ನಮ್ಮಲ್ಲಿನ ದುಷ್ಟ ಗುಣಗಳು ದೂರವಾಗುತ್ತದೆ ಎಂದರು.

ನಮ್ಮ ದೇಹದೊಳಗಿನ ದೇವರನ್ನು ಅರಿಯುವುದು ತಪಸ್ಸು. ಹಾಗೆಯೇ ದೇವಾಲಯದಲ್ಲಿನ ದೇವರನ್ನು ನೆನೆಯುವುದು ಭಕ್ತಿ. ಎರಡು ದಾರಿಗಳು ಒಂದೇ ತಾಣವನ್ನು ತಲುಪುತ್ತದೆ. ದೇವಾಲಯಗಳು ಕೇವಲ ಪೂಜಾ ಸ್ಥಳವಲ್ಲ. ಭಕ್ತರಿಗೆ ಸಕಲವನ್ನು ಕರುಣಿಸುವ ಕೇಂದ್ರವಾಗಿದೆ ಎಂದರು.

ಜನರು ಇಂದು ತಮ್ಮದೇ ಆದ ಪ್ರಪಂಚದಲ್ಲಿ ಮುಳುಗಿ ಹೋಗಿದ್ದಾರೆ. ಕಷ್ಟದಲ್ಲಿರುವವರಿಗೆ ಉಪಕಾರ ಮಾಡುವ ಮನೋಭಾವ ಕಡಿಮೆಯಾಗುತ್ತಿದೆ. ಹೀಗಾಗಬಾರದು. ಪರೋಪಕಾರ ಮಾಡುವುದರಿಂದ, ಬೇರೆಯವರಿಗೆ ಕೇಡನ್ನು ಬಯಸದೆ ಇರುವುದರಿಂದ ಸಕಲವೂ ಪ್ರಾಪ್ತಿಯಾಗುತ್ತದೆ. ಸಮಾಜದ ಒಳಿತಿಗೆ ನಾವುಗಳೆಲ್ಲರೂ ನಮ್ಮ ಕೈಲಾದಂತಹ ಸಹಾಯ ಮಾಡಬೇಕಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಕುಂಬಾರ ಗುರುಪೀಠದ ಗುಂಡಯ್ಯ ಶ್ರೀಗಳು, ಬಂಜಾರ ಗುರುಪೀಠದ ಸೇವಾಲಾಲ್ ಶ್ರೀಗಳು, ಶಿಕಾರಿಪುರದ ಶ್ರೀ ಚನ್ನಬಸವ ಶ್ರೀಗಳು ಆಶೀರ್ವಚನ ನೀಡಿದರು.

ಹೊಂಗಿರಣ ಲೋಕೇಶ ಅಧ್ಯಕ್ಷತೆ ವಹಿಸಿದ್ದರು. ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್, ನಿಗಮದ ಮಾಜಿ ನಿರ್ದೇಶಕ ದೇವಿಕುಮಾರ್, ನಿವೃತ್ತ ನ್ಯಾಯಧೀಶ ವೀರಭದ್ರಪ್ಪ ಪೂಜಾರ, ಉದ್ಯಮಿ ಹೊಳಲೂರು ಸಂತೋಷ, ಬೂದಿಗೆರೆ ಬಸವರಾಜ ಮಾತನಾಡಿದರು.

ದೇವಾಲಯದ ಪದಾಧಿಕಾರಿಗಳಾದ ಮಂಜಪ್ಪ, ಕೇಶವಮೂರ್ತಿ, ಪಾಲಾಕ್ಷಪ್ಪ, ತಿಮ್ಮಪ್ಪ, ವೀರಭದ್ರಪ್ಪ, ಸುರೇಶ್, ಮಂಜಪ್ಪ, ಜಯಪ್ಪ ಇನ್ನಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಗ್ರಾಮೀಣ ಕ್ರೀಡಾಕೂಟಗಳು ಜರುಗಿದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾತಂಡಗಳೊಂದಿಗೆ ದೇವಿಯ ಉತ್ಸವ ಅದ್ದೂರಿಯಾಗಿ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌