ತೆಲಂಗಾಣದಲ್ಲಿ ಒದ್ದೋಡಿಸಿದ್ದಕ್ಕೆ ಕೆಮಿಕಲ್‌ ಕಂಪನಿ ಜಿಲ್ಲೆಗೆ ಬಂದಿವೆ !

KannadaprabhaNewsNetwork | Published : May 28, 2025 1:54 AM
Chemical companies have come to the district after being kicked out in Telangana!

- ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶ:ವಿಷಗಾಳಿ, ದುರ್ನಾತದಿಂದ ಜನಜೀವನ ಅಸ್ತವ್ಯಸ್ತ

- ಅನ್ಯರಾಜ್ಯಗಳಿಂದ ಕಾರ್ಖಾನೆಗಳು ನಮ್ಮಲ್ಲಿಗೆ ?

- ಕನ್ನಡಪ್ರಭ ಸರಣಿ ವರದಿ ಭಾಗ : 50

ಕನ್ನಡಪ್ರಭ ವಾರ್ತೆ ಯಾದಗಿರಿ

ತೆಲಂಗಾಣ ಸೇರಿದಂತೆ ಅನ್ಯರಾಜ್ಯಗಳಿಂದ ಒದ್ದೋಡಿಸಿಕೊಂಡ ಕಾರ್ಖಾನೆಗಳು ಜಿಲ್ಲೆಗೆ ಬಂದು ಇದೀಗ ನಮ್ಮ ಜೀವಕ್ಕೆ ಕುತ್ತು ತಂದಿಟ್ಟಿದ್ದಾರೆ. ಇಂತಹ ಕೆಮಿಕಲ್‌ ಕಂಪನಿಗಳ ವಿರುದ್ಧ ಆ ರಾಜ್ಯಗಳ ಜನರು ರೋಸಿಹೋಗಿ, ದಂಗೆಯೆದ್ದು ಅಲ್ಲಿಂದ ಓಡಿಸಿದ್ದರ ಪರಿಣಾಮ ಈಗೀ ಕೈಗಾರಿಕೆಗಳು ನಮ್ಮಲ್ಲಿಗೆ ಬಂದಿವೆ ಎಂಬ ಆರೋಪ ಇಲ್ಲಿನ ಕೈಗಾರಿಕಾ ಪ್ರದೇಶದ ವಿಷಗಾಳಿ- ದುರ್ನಾತದಿಂದ ನೊಂದು ಬೆಂದ ಜನರದ್ದು.

ಜನರ ಜೀವಕ್ಕೆ ಮಾರಕವಾಗುವ ಕೆಮಕಲ್‌ ಕಂಪನಿಗಳ ಮಾಲೀಕರು ತಮ್ಮ ಜೇಬನ್ನು ತುಂಬಿಸಿಕೊಳ್ಳುತ್ತವೆಯೇ ಹೊರತು, ಜನರ ಜೀವದ ಲೆಕ್ಕ ಇಡವುದಿಲ್ಲ. ಅಭಿವೃದ್ಧಿ ಹೆಸರಲ್ಲಿ ಇಂತಹ ಕಾರ್ಖಾನೆಗಳಿಂದ ಲಾಭಕ್ಕಿಂತ ಮಾರಕವೇ ಹೆಚ್ಚು ಎಂಬ ಜನಾಭಿಪ್ರಾಯಗಳು, ಆಕ್ರೋಶಗಳು ಹೊರಹೊಮ್ಮುತ್ತವೆ.

ಕೋಟ್- 1: ಕಡೇಚೂರು-ಬಾಡಿಯಾಳ ಕೈಗಾರಿಕೆ ಪ್ರದೇಶದಲ್ಲಿ ಸ್ಥಾಪಿಸಿದ ರಾಸಾಯನಿಕ ಕಂಪನಿಗಳು ಪರಿಸರಕ್ಕೆ ಹಾನಿ ಮಾಡುವುದರ ಜೊತೆಗೆ ಜೀವ ಸಂಕುಲಕ್ಕೆ ಕಂಟಕವಾಗಿವೆ. ಈ ಕಾರ್ಖಾನೆಗಳನ್ನು ಈ ಪ್ರದೇಶದಿಂದ ಹೊರ ಹಾಕುವವರೆಗೂ ಸ್ಥಳೀಯರೆಲ್ಲರೂ ಸೇರಿಕೊಂಡು ನಿರಂತರ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು. ಸರಕಾರಕ್ಕೆ ಇಲ್ಲಿನ ಜನರ ಜೀವಕ್ಕೆ ಬೆಲೆ ಕೊಡುತ್ತೋ ಅಥವಾ ಉದ್ಯೋಮಿದಾರರ ಹಿತಾಶಕ್ತಿಯನ್ನು ಕಾಯುತ್ತೋ ನೋಡೋಣ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಈಗಾಗಲೇ “ಕೈಗಾರಿಕೆ ಹಟಾವೋ, ಸೈದಾಪುರ ಬಚಾವೋ” ಎಂಬ ಜಾಗೃತಿ ಅಭಿಯಾನ ನಡೆಯುತ್ತಿದ್ದು. ಮುಂದಿನ ದಿನಗಳಲ್ಲಿ ಈ ಅಭಿಯಾನವು ವಿರಾಟ ಸ್ವರೂಪದ ಮೂಲಕ ಸರಕಾರದ ಕಿವಿ ಹಿಂಡುವ ಕಾರ್ಯಕ್ಕೆ ಮುಂದಾಗುತ್ತೇವೆ. - ನತೀನ್ ತಿವಾರಿ, ಸೈದಾಪುರ (27ವೈಡಿಆರ್‌2)

---

ಕೋಟ್- 2 : ತೆಲಂಗಾಣದಿಂದ ಜನರು ದಂಗೆಯೆದ್ದು ಅಲ್ಲಿಂದ ಈ ಕೈಗಾರಿಕೆಗಳ ಓಡಿಸಿದರ ಪರಿಣಾಮ ಈಗವು ನಮ್ಮಲ್ಲಿಗೆ ಬಂದಿವೆ. ಇದರರ್ಥ, ಇವುಗಳಿಂದ ಇಲ್ಲಿನ ಪ್ರದೇಶದ ಅಭಿವೃದ್ಧಿಯಾಗಲೀ ಅಥವಾ ಉದ್ಯೋಗಾವಕಾಶ ದೊರೆಯುವುದಾಗಲೀ ಯಾವುದೂ ಇಲ್ಲ . ಕೇವಲ ಇಲ್ಲಿನ ಪರಿಸರ- ಜನರ ಆರೋಗ್ಯಕ್ಕೆ ಮಾರಕವಾಗಿಸಿ, ಜನರ ಜೀವ ಹಿಂಡಿ, ಉದ್ಯಮಿದಾರರು ಜೇಬು ತುಂಬಿಸಿಕೊಳ್ಳುವ ಕಂಪನಿಗಳಾಗಿವೆ. ಇದಕ್ಕೆ ಒಗ್ಗಟ್ಟಿನ ಹೋರಾಟ ಅತಿಮುಖ್ಯವಾಗಿದ್ದು. ಇದಕ್ಕೆ ಇಲ್ಲಿನ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ಹೋರಾಟ ಮಾಡವುದು ಅತ್ಯವಶ್ಯಕವಾಗಿದೆ. : ಮಲ್ಲಿಕಾರ್ಜುನ್ ಗಡದ್, ಸೈದಾಪುರ. (27ವೈಡಿಆರ್‌3)

ಕೋಟ್- 3 : ಈ ಕೈಗಾರಿಕೆ ಪ್ರದೇಶಕ್ಕೆ ಮೊದಲ ಹಂತವಾಗಿ ಸುಮಾರು 3ಸಾವಿರ ಏಕರೆ ಭೂಮಿ ನೀಡಲಾಗಿದೆ. ಅದರಲ್ಲಿ ಈಗಾಗಲೆ ಕೆಮಿಕಲ್ ಕಂಪನಿಗಳು ಹಾಕಿ ಜನರ ಜೀವದ ಜೊತೆ ಅಧಿಕಾರಿಗಳು ಮತ್ತು ಸರಕಾರದಲ್ಲಿರುವ ಜನಪ್ರತಿನಿಧಿಗಳು ಚೆಲ್ಲಾಟವಾಡುತ್ತಿವೆ. ಆಗಿನ ಜಿಲ್ಲಾಧಿಕಾರಿಗಳು ಮತ್ತು ಭೂಸ್ವಾಧಿನಾಧಿಕಾರಿಗಳು ರೈತರಿಗೆ ಉದ್ಯೋಗ ನೀಡುತ್ತೇವೆ ಮತ್ತು ಈ ಪ್ರದೇಶದಲ್ಲಿ ರಾಸಾಯನಿಕ ಕಂಪನಿಗಳು ಸ್ಥಾಪಿಸುವುದಿಲ್ಲ ಎಂದು ತಿಳಿಸಿದ್ದರು. ಆದರೀಗ ಪರಿಸರಕ್ಕೆ ಮಾರಕವಾಗಿರುವ ಕಂಪನಿಗಳು ಸ್ಥಾಪನೆ ಮಾಡಿ ಇಲ್ಲಿನ ಜನರಿಗೆ ಮೋಸ ಮಾಡಿದೆ.

- ಸಿದ್ದಣ್ಣ ಬಾಗ್ಲಿ, ರಾಚನಹಳ್ಳಿ. (27ವೈಡಿಆರ್‌4)

------

ಕೋಟ್- 4 : ಈ ಪ್ರದೇಶದಲ್ಲಿ ಸ್ಥಾಪಿತವಾಗಿರುವ ಘನತ್ಯಾಜ್ಯ ಘಟಕಕ್ಕೆ 5 ರಾಜ್ಯಗಳ ನಿರೂಪಯುಕ್ತ ಮತ್ತು ವಿಷಯುಕ್ತ ತ್ಯಾಜ್ಯವನ್ನು ತಂದು ಹಾಕುತ್ತಿರುವುದರಿಂದ ಅದರ ದುರ್ವಾಸನೆಯು ಸುಮಾರು 10 ರಿಂದ 15 ಕಿಲೋ ಮೀಟರ್ ವರೆಗೂ ಬರುತ್ತಿದೆ. ರಾತ್ರಿಯ ವೇಳೆಯಲ್ಲಿ ಉಸಿರಾಟಕ್ಕೆ ಬಹಳ ತೊಂದರೆಯಾಗುತ್ತಿದೆ. ನಮ್ಮದು ಎಂತಹ ದುರದೃಷ್ಟವೆಂದರೆ, ನಮ್ಮ ಮನೆಯ ಮುಂದೆ ಬೇರೆ ಊರಿನ ದುರ್ನಾತದ ಕಸ ತಂದು ಹಾಕುತ್ತಿರುವುದು. ಅದನ್ನು ನಾವು ನೋಡಿ-ಕೇಳಿ ಅದರ ವಾಸನೆ ಕುಡಿದು ಆಸ್ಪತ್ರೆಗೆ ಸೇರುತ್ತಿದ್ದರೂ ಸರಕಾರದವರು ಮತ್ತು ಅಧಿಕಾರಿಗಳು ಅವುಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವಾಗಿದೆ.

- ಬಾಬು ಬಾಗ್ಲಿ, ಕೊಂಡಾಪುರ. (27ವೈಡಿಆರ್‌5)

----

ಕೋಟ್- 5 : ಸರಕಾರವು ಇಲ್ಲಿನ ರೈತರಿಗೆ ಸುಳ್ಳು ಭರವಸೆ ನೀಡಿ ಭೂಮಿ ಕಿತ್ತುಕೊಂಡು, ಜನರ ಮತ್ತು ರೈತರ ಹಿತಾ ಕಾಯದ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ ಎಂಬ ದಲ್ಲಾಳಿ ಸಂಸ್ಥೆಗೆ ನೀಡುವುದರ ಮೂಲಕ ಸಂಪೂರ್ಣವಾಗಿ ಈ ಭಾಗದ ಜನರ ಜೀವಕ್ಕೆ ಕೊಳ್ಳಿ ಇಟ್ಟಿದೆ. ಏಕೆಂದರೆ ರೈತರಿಂದ ಕಡಿಮೆ ದರದಲ್ಲಿ ಭೂಮಿ ತೆಗೆದುಕೊಂಡು, ಇಲ್ಲಿನ ಜನರ ಆರೋಗ್ಯ ಮತ್ತು ಉದ್ಯೋಗದ ಬಗ್ಗೆ ಯಾವುದೇ ಆಲೋಚನೆ ಮಾಡದೆ ಉದ್ಯಮಿಗಳಿಗೆ ಹೆಚ್ಚಿನ ದರದಲ್ಲಿ ಭೂಮಿ ನೀಡಿರುವುದು. ಆದರಿಂದ ಇಲ್ಲಿನ ಪ್ರತಿಯೊಬ್ಬರು ಈ ಮೋಸದಾಟದ ರಾಸಾಯನಿಕ ಕಂಪನಿಗಳ ಬಗ್ಗೆ ಜಾಗೃತರಾಗಿ ಇಲ್ಲಿನ ಪರಿಸರ, ಜನರ ಜೀವ ಉಳಿವಿಕೆ ಮತ್ತು ಮುಂದಿನ ಪೀಳಿಗೆ ಸದೃಢವಾಗಿ ಬೆಳೆಯಬೇಕಾದರೆ ಇಂದು ಹೋರಾಟ ಅನಿವಾರ್ಯವಾಗಿದೆ.

-ಗುರುಲಿಂಗಯ್ಯಸ್ವಾಮಿ, ಸೈದಾಪುರ. (27ವೈಡಿಆರ್‌6)

----

27ವೈಡಿಆರ್‌1 : ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ನೋಟ.