ನೀರಾವರಿ ಯೋಜನೆ ಪೂರ್ಣಗೊಳಿಸಲು ಆದ್ಯತೆ: ರಾಘವೇಂದ್ರ ಹಿಟ್ನಾಳ

KannadaprabhaNewsNetwork | Published : Jan 24, 2025 12:45 AM

ಸಾರಾಂಶ

ಕ್ಷೇತ್ರದಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಬೇಗನೆ ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು.

₹12.30 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿದ ಶಾಸಕ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕ್ಷೇತ್ರದಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಬೇಗನೆ ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.

ಕೊಪ್ಪಳ ವಿಧಾನಸಭ ಕ್ಷೇತ್ರದ ಗೊಂಡಬಾಳ ಜಿಪಂ ವ್ಯಾಪ್ತಿಯ ಕುಣಿಕೇರಿ ತಾಂಡಾ, ಕುಣಿಕೇರಿ, ಲಾಚನಕೇರಿ, ಕರ್ಕಿಹಳ್ಳಿ, ಚಿಕ್ಕಬಗನಾಳ, ಹಿರೇಬಗನಾಳ, ಕಾಸನಕಂಡಿ ಹಾಗೂ ಅಲ್ಲಾನಗರ ಗ್ರಾಮಗಳಲ್ಲಿ ಅಂದಾಜು ಮೊತ್ತ ₹12.30 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಅಡಿಗಲ್ಲು ನೆರವೇರಿಸಿ ಮಾತನಾಡಿದರು.

ನೀರಾವರಿ ಯೋಜನೆಗಳಿಗೆ ಹೆಚ್ಚಿನ ಪ್ರಮುಖ್ಯತೆ ನೀಡಿದ್ದೇವೆ. ಕ್ಷೇತ್ರದ ಬಹುದೊಡ್ಡ ಏತ ನೀರಾವರಿ ಯೋಜನೆಗಳಾದ ಬಹದ್ದೂರ್ ಬಂಡಿ ನವಲ್ ಕಲ್ ಹಾಗೂ ಅಳವಂಡಿ ಬೆಟಗೇರಿ ಏತನೀರಾವರಿ ಯೋಜನೆ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದ್ದು, ಶೀಘ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದರು.

₹188 ಕೋಟಿ ವೆಚ್ಚದ ಬಹದ್ದೂರ್ ಬಂಡಿ ನವಲ್ ಕಲ್ ಏತ ನೀರಾವರಿ ಯೋಜನೆಗೆ ಇನ್ನೂ ಎರಡು -ಮೂರು ದಿವಸದಲ್ಲಿ ಪ್ರಾಯೋಗಿಕ ಚಾಲನೆ ನೀಡಿ ಪರೀಕ್ಷೆ ಮಾಡಲಾಗುವುದು. ಈ ಏತ ನೀರಾವರಿ ಯೋಜನೆಯಿಂದ ಸುಮಾರು 14000 ಎಕರೆ ನೀರಾವರಿ ಪ್ರದೇಶ ಆಗಲಿದೆ.

ಕ್ಷೇತ್ರದ ಚಿಕ್ಕಬಗನಾಳ, ಕಾಸನಕಂಡಿ ಹಾಗೂ ಲಾಚನಕೇರಿ ಏತ ನೀರಾವರಿ ಯೋಜನೆಗಳಿಗೆ ಕೂಡ ಅನುದಾನ ಒದಗಿಸಿ ಉಳಿದಿರುವ ಕಾಮಗಾರಿಯನ್ನು ಕೂಡ ಮುಗಿಸಿ ಈ ಭಾಗದ ರೈತರಿಗೆ ಅರ್ಪಿಸುತ್ತೇವೆ ಎಂದರು.

ರಸ್ತೆ ಅಭಿವೃದ್ಧಿಗೆ ಒತ್ತು:ಕೊಪ್ಪಳ ಕ್ಷೇತ್ರದಲ್ಲಿ ₹150 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿವೆ. ಬಜೆಟ್ ನಂತರ ಇನ್ನೂ ₹100-150 ಕೋಟಿ ಅನುದಾನವನ್ನು ರಸ್ತೆ ಅಭಿವೃದ್ಧಿಗೆ ತರುತ್ತೇವೆ ಎಂದು ಭರವಸೆ ನೀಡಿದರು. ₹7.50 ಕೋಟಿ ವೆಚ್ಚದಲ್ಲಿ ಗಿಣಗೇರಿ -ಗೊಂಡಬಾಳ ರಸ್ತೆಯ ಹಿರೇಬಗನಾಳದಿಂದ ಚಿಕ್ಕಬಗನಾಳ ಮಾರ್ಗವಾಗಿ ಲಾಚನಕೇರಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಹಿಟ್ನಾಳ ಅಡಿಗಲ್ಲು ನೆರವೇರಿಸಿದರು.

ಪ್ರೌಢಶಾಲೆ ಉದ್ಘಾಟನೆ:

ಕೊಪ್ಪಳ ತಾಲೂಕಿನ ಕುಣಿಕೇರಿ ಗ್ರಾಮದಲ್ಲಿ ನೂತನವಾಗಿ ಮಂಜೂರು ಆಗಿರುವ ಪ್ರೌಢಶಾಲೆಯನ್ನು ಶಾಸಕ ರಾಘವೇಂದ್ರ ಹಿಟ್ನಾಳ ಉದ್ಘಾಟಿಸಿದರು.

ಜಿಪಂ ಮಾಜಿ ಸದಸ್ಯರಾದ ಗೂಳಪ್ಪ ಹಲಗೇರಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣರೆಡ್ಡಿ ಗಲಬಿ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಬಾಲಚಂದ್ರನ್, ತೋಟಪ್ಪ ಕಾಮನೂರು, ಜಡಿಯಪ್ಪ ಬಂಗಾಳಿ, ಹೇಮಣ್ಣ ದೇವರಮನಿ, ಬಸಣ್ಣ ಬಂಗಾಳಿ, ಬನ್ನೆಪ್ಪ ಗೌಡ, ಜಗದೀಶ್ ಕರ್ಕಿಹಳ್ಳಿ, ಹನಮೇಶ್ ಹೊಸಳ್ಳಿ, ಪಂಪಣ್ಣ ಪೂಜಾರ್, ಆನಂದ ಕಿನ್ನಾಳ, ಧರ್ಮರಾಜ್ ದೇವರಮನಿ, ರವಿ ದೇವರಮನಿ, ಕುಮಾರ್ ಮಜ್ಜಿಗಿ, ದೇವೇಂದ್ರಪ್ಪ ಮಜ್ಜಿಗಿ, ನಿಂಗಪ್ಪ ಕಾಸನಕಂಡಿ, ರವಿ ಪಾಟೀಲ್, ತಹಸೀಲ್ದಾರ್ ವಿಠ್ಠಲ್ ಚೌಗಲೆ, ತಾಪಂ ಇಒ ದುಂಡೇಶ್ ತುರಾದಿ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಲ್ಟಾನ್ ಸೇರಿದಂತೆ ಇತರರಿದ್ದರು.

Share this article