ಕನ್ನಡಪ್ರಭ ವಾರ್ತೆ ತುರುವೇಕೆರೆ
ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಕಾನೂನು ಕಾಲೇಜು, ಕೌಶಲ್ಯ ತರಬೇತಿ ಶಾಲೆ ಸೇರಿದಂತೆ ವಿವಿಧ ಶೈಕ್ಷಣಿಕ ಸಂಸ್ಥೆಗಳನ್ನು ಅನುಮೋದಿಸಿಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೇಳಿದರೆ, ಕಾಂಗ್ರೆಸ್ ಗೆ ಬಾ ಅಂತಾರೆ. ಅವರಲ್ಲೇ ಜನ ತುಂಬಿ ತುಳುಕುತ್ತಿದ್ದಾರೆ. ಇನ್ನು ನಾನು ಕಾಂಗ್ರೆಸ್ ಗೆ ಹೋಗಿ ಏನು ಮಾಡಲಿ. ಈಗ ಕಾಂಗ್ರೆಸ್ ಮುಳುಗುತ್ತಿರುವ ಹಡಗಾಗಿದೆ. ನಾನು ಕಟ್ಟಾ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಅನುಯಾಯಿ. ಅವರ ಹೋರಾಟದ ಮಜಲು ನನ್ನಲ್ಲೂ ಇದೆ. ನಾನು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. ಈಗಿನ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಗೀಳಿಗೆ ಬಿದ್ದಿದೆ. ಗ್ಯಾರಂಟಿ ಬೇಡ ಎಂದರೆ ಜನರು ನಮ್ಮನ್ನು ಬೈಕೋತಾರೆ. ಇನ್ನು ಗ್ಯಾರಂಟಿಗಾಗಿ ಬೊಕ್ಕಸದ ಹಣವೆಲ್ಲಾ ಖರ್ಚಾಗುತ್ತಿದೆ. ಹೀಗಾಗಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಜನರಿಗೆ ಉತ್ತರ ಕೊಡಲು ಆಗ್ತಾ ಇಲ್ಲ. ಇನ್ನು ಎರಡು ವರ್ಷ ತಾಳ್ಮೆಯಿಂದ ಜನರು ಕಾಯಬೇಕು. ಆಗ ನಮ್ಮ ಮೈತ್ರಿ ಪಕ್ಷ ಅಧಿಕಾರಕ್ಕೆ ಬರುತ್ತೆ. ಆಗ ತಾಲೂಕಿಗೆ ಎಷ್ಟು ಬೇಕೋ ಅಷ್ಟು ಹಣ ತಂದು ಅಭಿವೃದ್ಧಿ ಮಾಡುವೆ ಎಂದು ಹೇಳಿದರು. ಸರ್ಕಾರಿ ಶಾಲಾ ಶಿಕ್ಷಕರಲ್ಲಿ ಪ್ರಾಮಾಣಿಕತೆಯ ಕೊರತೆ ಇದೆ. ವಸತಿ ಶಾಲೆಯಲ್ಲಿ ಶೇ 100 ರಷ್ಟು ಫಲಿತಾಂಶ ಬರುತ್ತದೆ. ಆದರೆ ಸರ್ಕಾರಿ ಶಾಲೆಯಲ್ಲಿ ನಿರೀಕ್ಷಿತ ಫಲಿತಾಂಶ ಬರುವುದಿಲ್ಲ. ಕಾರಣವೇನೆಂದು ತಿಳಿಯುತ್ತಿಲ್ಲ. ವಸತಿ ಶಾಲೆಯ ಶಿಕ್ಷಕರ ವೇತನಕ್ಕೂ, ಸರ್ಕಾರಿ ಶಾಲೆಯ ಶಿಕ್ಷಕರ ವೇತನಕ್ಕೂ ಬಹಳ ವ್ಯತ್ಯಾಸವಿದೆ. ಆದರೂ ವಸತಿ ಶಾಲೆಯಲ್ಲಿನ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚು ಕಂಡು ಬರುತ್ತದೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ರಾಜಕುಮಾರ್, ಸಿದ್ದಗಂಗಯ್ಯ, ರಾಮಣ್ಣ, ಕುಮಾರ್, ನರಸೇಗೌಡ, ವಿಜಯೇಂದ್ರ, ಮಂಗೀಕುಪ್ಪೆ ಬಸವರಾಜು, ಎಇಇ ಹರೀಶ್, ಗುತ್ತಿಗೆದಾರ ಶ್ರೀನಾಥ್ ಸೇರಿದಂತೆ ಶಾಲಾ ಮಕ್ಕಳು ಗ್ರಾಮಸ್ಥರು ಇದ್ದರು.