ಜನತೆಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಆದ್ಯತೆ

KannadaprabhaNewsNetwork |  
Published : Jun 28, 2025, 12:29 AM IST
ಸಿಕೆಬಿ-1 ನಮ್ಮ ಊರಿಗೆ ನಮ್ಮ ಶಾಸಕ ಕಾರ್ಯಕ್ರಮದಡಿ ವರವಣಿ ಗ್ರಾಮದಲ್ಲಿ ಶಾಸಕ ಪ್ರದೀಪ್ ಈಶ್ವರ್  ಜನತೆಯ ಅಹವಾಲು ಆಲಿಸಿದರು  | Kannada Prabha

ಸಾರಾಂಶ

ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಶಾಸಕ ಪ್ರದೀಪ್‌ ಈಶ್ವರ್‌ ತಲಾ ಸಾವಿರ ರು.ಗಳ ವಿದ್ಯಾರ್ಥಿ ವೇತನ, ಎಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ರೂಗಳ ವಿದ್ಯಾರ್ಥಿ ವೇತನವನ್ನು ಈ ಬಾರಿಯೂ ನೀಡಲಿದ್ದಾರೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂಬುದು ಶಾಸಕರ ಕಿವಿಮಾತು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿದಂತೆ ಕ್ಷೇತ್ರದ ಎಲ್ಲ ವರ್ಗಗಳ ಜನರೇ ತಮ್ಮ ಭವಿಷ್ಯವಾಗಿದ್ದು ಅವರುಗೆ ಮೂಲಭೂತ ಸೌಲಭ್ಯ ಒದಗಿಸುವುದೇ ತಮ್ಮ ಗುರಿ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ನಮ್ಮ ಊರಿಗೆ ನಮ್ಮ ಶಾಸಕ ಕಾರ್ಯಕ್ರಮದಡಿ ಶುಕ್ರವಾರ ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಗೌಡಗೆರೆ ಗ್ರಾಪಂ ವ್ಯಾಪ್ತಿಯ ವರವಣಿ ಗ್ರಾಮದಲ್ಲಿ ಜನತೆಯ ಅಹವಾಲು ಆಲಿಸಿದ ನಂತರ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿ, ಡಾ. ಅಂಬೇಡ್ಕರ್ ರವರ ಸಂವಿಧಾನದಿಂದ ಸಾಮಾನ್ಯ ಹುಡುಗನಾದ ನಾನೂ ಶಾಸಕನಾಗಿದ್ದೇನೆ. ಅವರ ಆಶಯಗಳಿಗೆ ಅನುಗುಣವಾಗಿ ದೀನ ದಲಿತರ, ಬಡವರ ಸೇವೆಯನ್ನು ನಿಸ್ವಾರ್ಥದಿಂದ ಮಾಡುತ್ತೇನೆ ಎಂದರು.

ಪರಿಶಿಷ್ಟ ಕಾಲೋನಿಗೆ ಸೌಲಭ್ಯ

ಗ್ರಾಮದ ಪರಿಶಿಷ್ಟರ ಕಾಲೋನಿಗೆ ಮೂಲಭೂತ ಸೌಲಭ್ಯಗಳಾದ ರಸ್ತೆ , ಚರಂಡಿಗಳನ್ನು ನಿರ್ಮಿಸಲು ಸುಮಾರು 50 ಲಕ್ಷರೂಗಳು ಬೇಕಾಗುತ್ತದೆ. ಶೀಘ್ರದಲ್ಲೇ ಅನುದಾನ ತಂದು ಕಾರ್ಯಾರಂಭ ಮಾಡುತ್ತೇನೆ. ವಸತಿರಹಿತರಿಗೆ ವಸತಿ, ನಿವೇಶನ ರಹಿತರಿಗೆ ನಿವೇಶನಗಳನ್ನು ನೀಡಲು ಗ್ರಾಮದ ಬಳಿ ಇರುವ 19 ಎಕರೆ ಸರ್ಕಾರಿ ಜಾಗವಿದ್ದು, ಅರಣ್ಯ ಇಲಾಖೆಯ ವಶದಲ್ಲಿ ಇರುವ ಜಾಗವನ್ನು ಬಿಟ್ಟುಕೊಡಲು ಇಲಾಖೆಗೆ ಮನವಿ ಮಾಡಿ ಅಷ್ಟು ಜಾಗದಲ್ಲಿ ನಿವೇಶನಗಳನ್ನು ನೀಡಿ ಮನೆ ನಿರ್ಮಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.

ತಾವು ಸ್ವಂತ ಹಣದಿಂದ ಕ್ಷೇತ್ರದ ಜನತೆಗೆ 15 ಲಕ್ಷ ವೆಚ್ಚದಲ್ಲಿ 10 ಉಚಿತ ಆ್ಯಂಬ್ಯುಲೆನ್ಸ್ ಸೇವೆ ನೀಡುತ್ತಿದ್ದೇನೆ. 70 ಸಾವಿರ ಮಹಿಳೆಯರಿಗೆ ಮೂರನೇ ಬಾರಿಗೆ ವರಮಹಾಲಕ್ಷ್ಮೀ ಹಬ್ಬಕ್ಕೆ ಸೀರೆ ವಿತರಣೆ ಮಾಡಲಿದ್ದೇನೆ. ಕ್ಷೇತ್ರದ ಎಲ್ಲಾ 20 ಸಾವಿರ ವಿದ್ಯಾರ್ಥಿಗಳಿಗೆ ದೀಪಾವಳಿ ಹಬ್ಬಕ್ಕೆ ಒಂದು ಜೊತೆ ಬಟ್ಟೆಗಳನ್ನು ಮತ್ತು ಅಂಗನವಾಡಿ ವಿದ್ಯಾರ್ಥಿಗಳಿಗೆ ಸಹಾ ಹೊಸ ಬಟ್ಟೆ ನೀಡಲಾಗುವುದು ಎಂದರು.

ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ

ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ತಲಾ ಸಾವಿರ ರು.ಗಳ ವಿದ್ಯಾರ್ಥಿ ವೇತನ, ಎಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ರೂಗಳ ವಿದ್ಯಾರ್ಥಿ ವೇತನವನ್ನು ಈ ಬಾರಿಯೂ ನೀಡಲಾಗುವುದು. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಿ, ಉತ್ತಮ ಅಂಕ ಗಳಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಹೆತ್ತ ತಂದೆ-ತಾಯಿ, ವಿದ್ಯೆ ನೀಡಿದ ಗುರುಗಳಿಗೆ ಮತ್ತು ದೇಶಕ್ಕೆ ಕೀರ್ತಿ ತರಬೇಕೇಂದು ತಿಳಿಸಿದರು.

ಕಾಲೋನಿಯಲ್ಲಿ ಇಪ್ಪತ್ತು ವರ್ಷಗಳ ಹಿಂದೆ ನಿರ್ಮಿಸಿರುವ ಅಂಬೇಡ್ಕರ್ ಭವನ ಪಾಳು ಬಿದ್ದರೀತಿಯಲ್ಲಿದ್ದುದ್ದನ್ನು ಕಂಡ ಶಾಸಕರು ಕೂಡಲೇ ಅದನ್ನು ದುರಸ್ತಿ ಗೊಳಿಸಿ ಸುಣ್ಣ-ಬಣ್ಣ ಹೊಡೆಯುವಂತೆ ಗ್ರಾಪಂ ಪಿಡಿಒಗೆ ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ