ಚಿಮಣಿ ದೀಪದಲ್ಲೇ ಓದಿ ಉನ್ನತ ವ್ಯಾಸಂಗದ ಕನಸು

KannadaprabhaNewsNetwork |  
Published : Jun 01, 2024, 12:46 AM IST
ಯಕ್ಷಿತಾ ಕುಟುಂಕ್ಕೆ ಸೋಲಾರ್‌ ಪ್ಯಾನಲ್‌ ವಿತರಿಸುತ್ತಿರುವುದು. | Kannada Prabha

ಸಾರಾಂಶ

ಯಕ್ಷಿತಾ ಎಸ್ಸೆಸ್ಸೆಲ್ಸಿಯಲ್ಲಿ ಶೇ. 81, ಪಿಯುಸಿಯಲ್ಲಿ ಶೇ.86, ಪದವಿ ಮೊದಲ ವರ್ಷ ಶೇ.88, ಎರಡನೇ ವರ್ಷ ಶೇ.89 ಹಾಗೂ 5ನೇ ಸೆಮಿಸ್ಟರ್‌ನಲ್ಲಿ ಶೇ.92 ಅಂಕಗಳನ್ನು ಕಳಿಸಿ ಪ್ರಗತಿಯ ಸಾಧನೆ ದಾಖಲಿಸಿದ್ದಾಳೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ವಿದ್ಯುತ್, ರಸ್ತೆ ಮೊದಲಾದ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಮೂರು ಮಲೆಕುಡಿಯ ಕುಟುಂಬಗಳು ವಾಸಿಸುತ್ತಿರುವ ಮೂಡುಬಿದಿರೆ ತಾಲೂಕಿನ ಪಣಪಿಲ ಗ್ರಾಮದ ಒಂಟಿಕಜೆಯ ಯುವತಿ ಯಕ್ಷಿತಾ ಸಂಕಷ್ಟಗಳ ನಡುವೆಯೂ ಸಾಧಕಿಯಾಗಿ ಅರಳಿದ ಪ್ರತಿಭೆ.

ಈಕೆ ಮೂಡುಬಿದಿರೆಯ ಧವಲಾ ಕಾಲೇಜಿನಲ್ಲಿ ಅಂತಿಮ ಬಿಎ ವ್ಯಾಸಂಗ ಮಾಡುತ್ತಿದ್ದಾಳೆ. ಮೂಲ ಸೌಕರ್ಯಗಳಿಲ್ಲದ ಒಂಟಿಕಜೆಯ ನಿರ್ಜನ ಪ್ರದೇಶದಲ್ಲಿ ಕತ್ತಲಾದರೆ ಓದಿಗೂ ಬೆಳಕಿನ ತತ್ವಾರ. ಹಿಂದೊಮ್ಮೆ ಪಂಚಾಯಿತಿ ಸೋಲಾರ್ ಆಳವಡಿಸಿದರೂ ಅದು ಕೆಟ್ಟು ನಿಂತು ಹಲವು ವರ್ಷಗಳಾಗಿವೆ. ಹೀಗಾಗಿ ಚಿಮಿಣಿ ದೀಪ, ಕ್ಯಾಂಡಲ್ ಬೆಳಕಿನಲ್ಲೇ ಓದು ಮುಂದುವರಿಸಿದ ಯಕ್ಷಿತಾ ಉನ್ನತ ವ್ಯಾಸಂಗದ ಕನಸಿಗೆ ಮೂಡುಬಿದಿರೆಯ ಸಹಸ್ರ ಎನರ್ಜಿ ಸಿಸ್ಟಂ ಕಂಪನಿಯು ಬೆಳಕಾಗಿ ಬಂದಿದ್ದು, ಆಕೆಯ ಮನೆಗೆ ಸೌರ ವಿದ್ಯುತ್ ದೀಪಗಳನ್ನು ಅಳವಡಿಸಿದೆ. ಹಲವು ವರ್ಷಗಳ ಹಿಂದೆ ಇಲ್ಲಿದ್ದ ಅವಿಭಕ್ತ ಮಲೆಕುಡಿಯ ಕುಟುಂಬ ಹಂಚಿ ಹೋಗಿ ಮೂರು ಕುಟುಂಬಗಳು ಮಾತ್ರ ವಾಸಿಸುತ್ತಿವೆ. ಆ ಪೈಕಿ ಯಕ್ಷಿತಾ ಮನೆಯಲ್ಲೇ ಆಕೆಯ ಸಹೋದರರಿಬ್ಬರ ಪೈಕಿ ಯಶವಂತ್ ಪಿಯುಸಿಗೆ ಓದು ನಿಲ್ಲಿಸಿದ್ದು ರವಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದಾನೆ.

ಪ್ರತಿಭಾವಂತ ವಿದ್ಯಾರ್ಥಿನಿ: ಯಕ್ಷಿತಾ ಎಸ್ಸೆಸ್ಸೆಲ್ಸಿಯಲ್ಲಿ ಶೇ. 81, ಪಿಯುಸಿಯಲ್ಲಿ ಶೇ.86, ಪದವಿ ಮೊದಲ ವರ್ಷ ಶೇ.88, ಎರಡನೇ ವರ್ಷ ಶೇ.89 ಹಾಗೂ 5ನೇ ಸೆಮಿಸ್ಟರ್‌ನಲ್ಲಿ ಶೇ.92 ಅಂಕಗಳನ್ನು ಕಳಿಸಿ ಪ್ರಗತಿಯ ಸಾಧನೆ ದಾಖಲಿಸಿದ್ದಾಳೆ.

ಕಾಡು ಮತ್ತು ಬೆಟ್ಟದ ದಾರಿಯಲ್ಲಿ 6 ಕಿ.ಮೀ. ನಡೆದು ಬಸ್ ನಿಲ್ದಾಣ ತಲುಪುವ ಅನಿವಾರ್ಯತೆಯೊಂದಿಗೆ, ಈಕೆಯು ರಾತ್ರಿ ವಿದ್ಯುತ್ ದೀಪವಿಲ್ಲದೆ ಚಿಮಣಿ ದೀಪದಲ್ಲಿ ಓದಿ ಪರೀಕ್ಷೆಗೆ ಸಿದ್ಧವಾಗುತ್ತಿದ್ದಳು. ಅನಾರೋಗ್ಯದಲ್ಲಿರುವ ತಂದೆ, ತಾನು ಕಲಿಯದಿದ್ದರೂ ಮಗಳ ಉಜ್ವಲ ಭವಿಷ್ಯಕ್ಕಾಗಿ ದುಡಿಯುತ್ತಿರುವ ತಾಯಿ ಗಿರಿಜಾ ಅವರ ಸಂಪಾದನೆಯಿಂದಲೇ ಐದು ಮಂದಿಯ ಸಂಸಾರ ಮುನ್ನಡೆಯುವ ಸ್ಥಿತಿ ಅಲ್ಲಿದೆ.

ಸಹಸ್ರ ಎನರ್ಜಿ ಸಂಸ್ಥೆ ಮೂಡುಬಿದಿರೆ ಹಾಗೂ ಸಹಸ್ರ ಫೌಂಡೇಶನ್ ಕಾರ್ಕಳ ಹಾಗೂ ಧವಳಾ ಕಾಲೇಜಿನ ಎನ್‌ಸಿಸಿ ಘಟಕದ ಲೆ. ಸೂರಜ್ ಎ. ಕೋಟ್ಯಾನ್ ಅವರ ಮುತುರ್ವರ್ಜಿ ಹಾಗೂ ಯಕ್ಷಿತಾಳ ಸಹಪಾಠಿಗಳ ಸಹಕಾರದೊಂದಿಗೆ ಆಕೆಯ ಮನೆಗೆ 5 ಸೋಲಾರ್ ದೀಪಗಳನ್ನು ಅಳವಡಿಸಲಾಗಿದೆ. ಇದಕ್ಕಾಗಿ 18,000 ರು. ವೆಚ್ಚವಾಗಿದ್ದು, ಶೇ.70ರಷ್ಟು ಮೊತ್ತವನ್ನು ಸಹಸ್ರ ಫೌಂಡೇಶನ್ ಭರಿಸಿದೆ. ಉಳಿದ ಮೊತ್ತವನ್ನು ಧವಳಾ ಕಾಲೇಜಿನ ಎನ್‌ಸಿಸಿ ಘಟಕ ಹಾಗೂ ಫಲಾನುಭವಿ ಕುಟುಂಬ ಭರಿಸಿದೆ.

ಕಷ್ಟದ ಜೀವನಕ್ಕೆ ಹೊಂದಿಕೊಂಡಿದ್ದೇನೆ. ಆದರೆ ಸಹಸ್ರ ಎನರ್ಜಿ ಮತ್ತು ಕಾಲೇಜಿನ ಎನ್.ಸಿ.ಸಿ ಬಳಗದವರು ಮನೆಯನ್ನೇ ಬೆಳಗಿಸಿದ್ಧಾರೆ. ಮುಂದೆ ಎಂ.ಎಸ್.ಡಬ್ಲ್ಯು ಅಥವಾ ಕಾನೂನು ಓದುವ ಕನಸಿದೆ ಎನ್ನುತ್ತಾರೆ ಯಕ್ಷಿತಾ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರ ಶ್ರೀಗಳ ಜ್ಞಾನಮಾರ್ಗ ನಮಗೆ ಆದರ್ಶ
ಮುಂದಿನ ಪೀಳಿಗೆ ಧರ್ಮವಂತರಾಗಿಸೋದೆ ಜೈನ ಧರ್ಮದ ಉದ್ದೇಶ: ಜೈನಮುನಿ ಕುಲರತ್ನಭೂಷಣ ಮಹಾರಾಜರು