ಆರೋಗ್ಯ ಕ್ಷೇತ್ರಕ್ಕೆ ಖಾಸಗಿ ಆಸ್ಪತ್ರೆಗಳ ಕೊಡುಗೆಯೂ ಅಪಾರ: ಡಾ.ನಿರ್ಮಲಾನಂದನಾಥ ಸ್ವಾಮೀಜಿ

KannadaprabhaNewsNetwork |  
Published : Aug 18, 2025, 12:00 AM IST
ಸಿಕೆಬಿ-7 ನಗರದ ದೊಡ್ಡಭಜನೆ ಮನೆ ರಸ್ತೆಯಲ್ಲಿ ಶನಿವಾರ ಪ್ರಾರಂಭವಾಗಿರುವ ಸಿಧ್ವಿನ್ ನೂತನ ಆಸ್ಪತ್ರೆಯನ್ನು ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಉದ್ಘಾಟಿಸಿದರು. | Kannada Prabha

ಸಾರಾಂಶ

ನಮ್ಮ ಆಸ್ಪತ್ರೆಯಲ್ಲಿ ಒಪಿಡಿ ಸೇವೆಗಳು ಸೇರಿದಂತೆ ಶಸ್ತ್ರ ಚಿಕಿತ್ಸೆಯ ತನಕ ಎಲ್ಲಾ ಸೇವೆಗಳು ಒಂದೇ ಸೂರಿನಡಿ ಲಭ್ಯವಿದೆ. ಸಮರ್ಥ ವೈದ್ಯಕೀಯ ಸಿಬ್ಬಂದಿ, ಸೇವಾ ಮನೋಭಾವದ ದಾದಿಯರು, ವಾರ್ಡ್ ಬಾಯ್ಸ್ ಗಳನ್ನು ಒಳಗೊಂಡಿರುವ ನಮ್ಮ ಆಸ್ಪತ್ರೆಯು ಈ ಭಾಗದ ಜನತೆಗೆ ವರದಾನವಾಗಲು ಪ್ರಾರಂಭವಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜನಸಾಮಾನ್ಯರ ಆರೋಗ್ಯ ಸುಧಾರಣೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಸೇವೆ ಎಷ್ಟು ಮುಖ್ಯವೋ, ಅಷ್ಟೇ ಪ್ರಮಾಣದಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯ ಕೊಡುಗೆಯೂ ಇದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು.

ನಗರದ ದೊಡ್ಡಭಜನೆ ಮನೆ ರಸ್ತೆಯಲ್ಲಿ ಶನಿವಾರ ಸಿದ್ವೀನ್ ನೂತನ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿ, ನಾಗರಿಕ ಸಮಾಜ ಬೆಳವಣಿಗೆ ಆಗುತ್ತಿರುವಂತೆ ಜನಸಂಖ್ಯೆಯೂ ಹೆಚ್ಚುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರವೇ ಎಲ್ಲರಿಗೂ ಆರೋಗ್ಯ ಸೇವೆಯನ್ನು ಒದಗಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯಿದೆ. ಇದನ್ನು ಮನಗಂಡೇ ಖಾಸಗಿ ಕ್ಲಿನಿಕ್, ಆಸ್ಪತ್ರೆ, ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ತಲೆಯೆತ್ತುತ್ತಿವೆ. ಇವುಗಳಿಂದಾಗಿ ಸರ್ಕಾರಿ ವೈದ್ಯರು ಮತ್ತು ಆಸ್ಪತ್ರೆ ಸೇವೆಗಳ ಮೇಲಿನ ಒತ್ತಡ ಕಡಿಮೆಯಾಗಿದೆ ಎಂದರು.

ಚಿಕ್ಕಬಳ್ಳಾಪುರ ನಗರದಲ್ಲಿ ನೂತನವಾಗಿ ವೈದ್ಯಕೀಯ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸಲು ಮುಂದಾಗಿರುವ ಸಿದ್ವೀನ್ ಆಸ್ಪತ್ರೆಯ ಆಡಳಿತ ಮಂಡಳಿ ಗ್ರಾಮೀಣ ಪ್ರದೇಶದ ಜನತೆಯ ಆಶಾಕಿರಣವಾಗಿ ಬೆಳೆಯಲಿ, ಗುಣಮಟ್ಟದ ಸೇವೆಗೆ ಆಧ್ಯತೆ ನೀಡಿ, ಆರೋಗ್ಯ ಸುಧಾರಣೆ ಬಯಸಿ ಬರುವ ರೋಗಿಗಳ ಪಾಲಿಗೆ ಸಂಜೀವಿನಿ ರೀತಿ ಕೆಲಸ ಮಾಡಲಿ. ವೈದ್ಯೋ ನಾರೇಯಣೋ ಹರಿ ಎಂಬ ಉಕ್ತಿಗೆ ಕಳಂಕ ಬರದಂತೆ ಆರೋಗ್ಯ ಸೇವೆಯಲ್ಲಿ ಉತ್ತರೋತ್ತರ ಅಭಿವೃದ್ಧಿ ಕಾಣಲಿ ಎಂದು ಹಾರೈಸಿದರು.

ಸಿದ್ವೀನ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಮೇಘನಾ ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಒಪಿಡಿ ಸೇವೆಗಳು ಸೇರಿದಂತೆ ಶಸ್ತ್ರ ಚಿಕಿತ್ಸೆಯ ತನಕ ಎಲ್ಲಾ ಸೇವೆಗಳು ಒಂದೇ ಸೂರಿನಡಿ ಲಭ್ಯವಿದೆ. ಸಮರ್ಥ ವೈದ್ಯಕೀಯ ಸಿಬ್ಬಂದಿ, ಸೇವಾ ಮನೋಭಾವದ ದಾದಿಯರು, ವಾರ್ಡ್ ಬಾಯ್ಸ್ ಗಳನ್ನು ಒಳಗೊಂಡಿರುವ ನಮ್ಮ ಆಸ್ಪತ್ರೆಯು ಈ ಭಾಗದ ಜನತೆಗೆ ವರದಾನವಾಗಲು ಪ್ರಾರಂಭವಾಗಿದೆ. ಬೆಂಗಳೂರಿನಲ್ಲಿ ದೊರೆಯಬಹುದಾದ ಎಲ್ಲಾ ಗುಣಮಟ್ಟದ ಸೇವೆಗಳನ್ನು ನಮ್ಮಲ್ಲಿ ರಿಯಾಯಿತಿ ದರದಲ್ಲಿ ಒದಗಿಸಲು ಸಂಕಲ್ಪ ಮಾಡಲಾಗಿದೆ. ನಾಗರಿಕರು ನಮ್ಮ ಆಸ್ಪತ್ರೆಗೆ ಬಂದು ಗುಣಮಟ್ಟದ ಸೇವೆಯನ್ನು ಪಡೆಯಬಹುದು ಎಂದು ಮನವಿ ಮಾಡಿದರು.

ನೂತನ ಆಸ್ಪತ್ರೆ ಉದ್ಘಾಟನೆಯಲ್ಲಿ ಎಡೀಸಿ ಡಾ.ಭಾಸ್ಕರ್, ತಹಸೀಲ್ದಾರ್ ರಶ್ಮಿ, ಎಎಸ್ಪಿ ಜಗನ್ನಾಥ್‌ರೈ, ಆರ್‌ಎಂಒ ಡಾ.ರಮೇಶ್, ಮಂಜುನಾಥ್ ಆಸ್ಪತ್ರೆಯ ಡಾ.ಜಿ.ವಿ.ಮಂಜುನಾಥ್, ಮಾವು ಅಭಿವೃದ್ಧಿ ಮಂಡಳಿ ಮಾಜಿ ನಿರ್ದೇಶಕ ಕೆ.ವಿ.ನಾಗರಾಜ್ ಸೇರಿ ಅನೇಕ ಗಣ್ಯರು ಭಾಗವಹಿಸಿ ಶುಭಕೋರಿದರು.

ತುರ್ತು ಚಿಕಿತ್ಸಾ ವಿಭಾಗದ ವೈದ್ಯರಾದ ಡಾ.ಅಜಯ್, ಸರ್ಜನ್ ಡಾ.ಅರುಣ್‌ಕುಮಾರ್,ಡಾ.ಅರ್ಜುನ್ ಬಹದ್ದೂರ್, ಡಾ.ಗಣೇಶ್, ಡಾ.ಹರಿಣಿ ,ಡಾ.ಶೋಭ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಷ್ಣು ಆಚಾರಿ ಸೇರಿ ಹಲವರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ
ಭಗವದ್ಗೀತೆ ಬೋಧನೆ ಪ್ರಸ್ತಾಪ ಹಿಂದೆ ಎಚ್ಜಿಕೆ ಅಜೆಂಡಾ : ಮಧು ಬಂಗಾರಪ್ಪ