ಕನ್ನಡಪ್ರಭ ವಾರ್ತೆ, ತುಮಕೂರು
ಈ ವೇಳೆ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಡಾ.ಎಸ್.ಷಪಿ ಅಹಮದ್, ಕಾಂಗ್ರೆಸ್ ಮುಖಂಡರನ್ನು ಗುರಿಯಾಗಿಸಿಕೊಂಡು ಬಿಜೆಪಿ ನಡೆಸುತ್ತಿದ್ದ ದ್ವೇಷದ ರಾಜಕಾರಣಕ್ಕೆ ದೆಹಲಿ ಹೈಕೋರ್ಟ್ ಸರಿಯಾಗಿ ಬರೆ ಎಳೆದಿದೆ. ಅನಗತ್ಯವಾಗಿ ಸ್ವಾತಂತ್ರ ಪೂರ್ವದಲ್ಲಿ ಸ್ವಾತಂತ್ರ ಚಳವಳಿಗೆ ಬಹಳವಾಗಿ ಶ್ರಮಿಸಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಇತಿಹಾಸವನ್ನು ಅರಿಯದೆ, ಕಾಂಗ್ರೆಸ್ ಮುಖಂಡರಾದ ಸೋನಿಯಾಗಾಂಧಿ,ರಾಹುಲ್ಗಾಂಧಿ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಈ ಪ್ರಕರಣವನ್ನು ಬಳಸಿಕೊಂಡು ಇನ್ನಿಲ್ಲದ ಕಿರುಕುಳ ನೀಡಿ, ಪಕ್ಷವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದ್ದಲ್ಲದೆ, ಓಟ್ ಚೋರಿಯಂತಹ ಪ್ರತಿಭಟನೆಯಿಂದ ದೇಶದಲ್ಲಿ ಅತ್ಯಂತ ಮುಜುಗರಕ್ಕೆ ಒಳಗಾಗಿರುವ ಬಿಜೆಪಿ, ದೆಹಲಿ ಹೈಕೋರ್ಟಿನಲ್ಲಿ ಖಾಸಗಿ ದೂರು ಸಲ್ಲಿಸುವ ಮೂಲಕ ಜೈಲಿಗೆ ಅಟ್ಟುವ ಹುನ್ನಾರ ನಡೆಸಿತ್ತು ಎಂದರು.
ಆದರೆ ಇದಕ್ಕೆ ಅವಕಾಶ ನೀಡದೆ ನ್ಯಾಯಾಲಯ ಕೇಸನ್ನು ವಜಾಗೊಳಿಸುವ ಮೂಲಕ ದೂರಿನಲ್ಲಿ ಯಾವುದೇ ಹುರುಳಿಲ್ಲ ಎಂಬುದನ್ನು ಸಾಬೀತು ಪಡಿಸಿದೆ. ನ್ಯಾಯಾಲಯದ ತೀರ್ಪು ಕಾಂಗ್ರೆಸ್ ಕಾರ್ಯಕರ್ತರಿಗೆ ಬಲ ತುಂಬಿದಂತಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಬಲವಾಗಿ ನಮ್ಮ ನಾಯಕರೊಂದಿಗೆ ಕೈಜೋಡಿಸಿ ಕೆಲಸ ಮಾಡಲು ಹುರಿದುಂಬಿಸಿದೆ ಎಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ಪಾರ್ಲಿಮೆಂಟ್ನ ವಿರೋಧಪಕ್ಷನ ನಾಯಕ ರಾಹುಲ್ಗಾಂಧಿ ಅವರು ಯಶಸ್ಸು ಗಳಿಸುತ್ತಿರುವುದನ್ನು ಸಹಿಸಿ ಕೊಳ್ಳಲಾಗದೆ ಬಿಜೆಪಿ ನ್ಯಾಯಾಲಯದ ಮೂಲಕ ನಮ್ಮ ನಾಯಕರ ಮೇಲೆ ಒತ್ತಡ ಹೇರಲು ಮುಂದಾಗಿತ್ತು. ಆದರೆ ನ್ಯಾಯಾಲಯ ಅದಕ್ಕೆ ಆಸ್ಪದ ನೀಡದೆ, ಬಿಜೆಪಿಯ ಹುನ್ನಾರವನ್ನು ಛಿದ್ರಗೊಳಿಸಿದೆ. ಬಿಜೆಪಿ ಈ ರೀತಿಯ ದ್ವೇಷದ ರಾಜಕಾರಣವನ್ನು ಬಿಟ್ಟು, ನೇರವಾಗಿ ಚುನಾವಣೆ ಎದುರಿಸಲಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಗಂಗಹನುಮಯ್ಯ,ಮುಖಂಡರಾದ ಮುರುಳೀಧರ ಹಾಲಪ್ಪ, ಸಂಜೀವಕುಮಾರ್,ಹೆಬ್ಬೂರು ಶ್ರೀನಿವಾಸಮೂರ್ತಿ, ಪಿ.ಶಿವಾಜಿ, ಕೆಂಪರಾಜು, ಸುಜಾತ, ಭಾಗ್ಯ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹೇಶ್,ಜೆಸಿಬಿ ವೆಂಕಟೇಶ್, ಸಿಮೆಂಟ್ ಮಂಜುನಾಥ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.