ಸ್ವಾತಿ ಹಂತಕರ ಗಲ್ಲಿಗೇರಿಸಲು ಹಿಂದುಪರ ಸಂಘಟನೆ ಆಗ್ರಹ

KannadaprabhaNewsNetwork |  
Published : Mar 18, 2025, 12:35 AM IST
ಫೋಟೊ ಶೀರ್ಷಿಕೆ: 17ಆರ್‌ಎನ್‌ಆರ್2, 2ಎರಾಣಿಬೆನ್ನೂರು ನಗರದ ಬಸ್ ನಿಲ್ದಾಣ ಬಳಿ ಎಬಿವಿಪಿ ನೇತೃತ್ವದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಸ್ವಾತಿ ಕೊಲೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಲವ್ ಜಿಹಾದ್‌ನಂತಹ ಅನೇಕ ಕೃತ್ಯಗಳು ನಡೆಯುತ್ತಿದ್ದರೂ ಹತ್ಯೆಗೈದವರನ್ನು ಸರ್ಕಾರ ರಕ್ಷಿಸುವಂತಹ ಕೆಲಸ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರಾಣಿಬೆನ್ನೂರು: ಲವ್ ಜಿಹಾದ್‌ಗೆ ಬಲಿಯಾದ ಸ್ವಾತಿ ಬ್ಯಾಡಗಿ ಎಂಬ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಹಾಗೂ ಕೊಲೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿವಿಧ ಹಿಂದುಪರ ಸಂಘಟನೆ, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶುಶ್ರೂಷಕಿಯರು ಸೋಮವಾರ ನಗರದ ಬಸ್ ನಿಲ್ದಾಣದ ಬಳಿ ಬೃಹತ್ ಪ್ರತಿಭಟನೆ ನಡೆಸಿ ನಯಾಜ್‌ನ ಪ್ರತಿಕೃತಿಯನ್ನು ದಹಿಸಿ, ಆರೋಪಿಯನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದರು. ಸ್ವಾತಿ ಹತ್ಯೆ ನಿಜಕ್ಕೂ ಇಡೀ ಸಮಾಜವೇ ತಲೆ ತಗ್ಗಿಸುವಂತಹ ಹೀನ ಕೃತ್ಯವಾಗಿದೆ. ಲವ್ ಜಿಹಾದ್‌ನಂತಹ ಅನೇಕ ಕೃತ್ಯಗಳು ನಡೆಯುತ್ತಿದ್ದರೂ ಕೊಲೆ ಮಾಡಿದವರು, ಹತ್ಯೆಗೈದವರನ್ನು ಸರ್ಕಾರ ರಕ್ಷಿಸುವಂತಹ ಕೆಲಸ ಮಾಡುತ್ತಿದೆ. ನಯಾಜ್ ಲವ್ ಜಿಹಾದ್ ಮೂಲಕ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿಯನ್ನು ಪ್ರೀತಿಯ ನಾಟಕವಾಡಿ, ಮೋಸ ಮಾಡಿ ದುರ್ಗಾಚಾರಿ ಮತ್ತು ವಿನಾಯಕನ ಜತೆ ಸೇರಿ ಕೊಲೆ ಮಾಡಿ ಅವಳನ್ನು ತುಂಗಭದ್ರಾ ನದಿಗೆ ಎಸೆದಿದ್ದಾರೆ. ಸ್ವಾತಿಯು ನಗರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಳು.

ಅಲ್ಲದೆ ಅವಳು ಅಪ್ಪಟ ದೇಶಭಕ್ತೆ ಹಾಗೂ ವಿವಿಧ ಹಿಂದುಪರ ಸಂಘಟನೆಯಲ್ಲಿ ತೊಡಗಿ ಹಲವಾರು ಹಿಂದುಪರ ಕಾರ್ಯಕ್ರಮದಲ್ಲಿ ಮುಂದಾಳತ್ವ ವಹಿಸಿ ಭಾಗವಹಿಸುತ್ತಿದ್ದಳು. ಹೀಗಿರುವಾಗ ಈ ಹಿಂದು ಯುವತಿ ಮುಸ್ಲಿಂ ಯುವಕನ ತೆಕ್ಕೆಗೆ ಬೀಳಲು ಸಾಧ್ಯವೇ ಇಲ್ಲ. ಲವ್ ಜಿಹಾದ್ ಮೂಲಕ ನಯಾಜ್ ಅವಳೊಂದಿಗೆ ಪ್ರೀತಿಯ ನಾಟಕವಾಡಿ, ಮೋಸದಾಟವಾಡಿ ಅವಳ ಜೀವನಕ್ಕೆ ಅಂತ್ಯ ಎಳೆದಿದ್ದಾನೆ. ಕೂಡಲೇ ಅವನನ್ನು ಗಲ್ಲಿಗೇರಿಸಬೇಕು ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಅಭಿಲಾಷ್ ಬಾದಾಮಿ, ನಗರ ಕಾರ್ಯದರ್ಶಿ ಪವನಕುಮಾರ ಇಟಗಿ, ಸಹಕಾರ್ಯದರ್ಶಿ ಯಲ್ಲಮ್ಮ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ನಂದೀಶ ಪೂಜಾರ, ಹರ್ಷಿತ, ಸುಶ್ಮಿತಾ, ಪವನಕುಮಾರ ಮಲ್ಲಾಡದ, ಅಜಯ್ ಮಠದ, ಮಮತಾ ಜಾಧವ ಹಾಗೂ ಸಹಸ್ರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಸ್ವಾತಿ ಕೊಲೆ ಹಿಂದೆ ಲವ್‌ ಜಿಹಾದ್‌ ಆರೋಪ ಸುಳ್ಳು: ಶಾಸಕ ಬಣಕಾರ

ಹಾವೇರಿ: ಮಾಸೂರಿನ ಯುವತಿ ಸ್ವಾತಿ ಬ್ಯಾಡಗಿ ಕೊಲೆ ಹಿಂದೆ ಲವ್ ಜಿಹಾದ್ ಎಂಬ ಆರೋಪ ಸುಳ್ಳು. ಇದಕ್ಕೆ ಸಾಕ್ಷಿ ಇಲ್ಲ. ಆರೋಪ ಮಾಡುವವರು ಸಾಕ್ಷಿ ಕೊಡುತ್ತಿಲ್ಲ. ಆದರೆ, ಈ ಕೃತ್ಯ ಖಂಡನೀಯ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಹಿರೇಕೆರೂರು ಕ್ಷೇತ್ರದ ಶಾಸಕ ಯು.ಬಿ. ಬಣಕಾರ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪೊಲೀಸರು ಸರಿಯಾಗಿ ತನಿಖೆ ಮಾಡಿದ್ದಾರೆ. ಅಪರಿಚಿತ ಶವ ಸಿಕ್ಕ ನಂತರ ಕಾನೂನು ಪ್ರಕಾರ ಅಂತ್ಯಕ್ರಿಯೆ ಮಾಡಿದ್ದಾರೆ. ಆಕೆಯ ಕುಟುಂಬದವರು ನಾಪತ್ತೆ ಪ್ರಕರಣ ದಾಖಲಿಸುವುದು ತಡವಾಗಿದೆ. ಹಾಗಾಗಿ ಆಕೆಯ ಕುಟುಂಬದವರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ನಾಪತ್ತೆ ಪ್ರಕರಣ ದಾಖಲಿಸಿದ ನಂತರ ಪೊಲೀಸರು ಯುವತಿಯ ಪತ್ತೆ ಮಾಡಲು ಮುಂದಾದರು. ಅದು ಅಸಹಜ ಸಾವಲ್ಲ ಕೊಲೆ ಎಂಬುದು ಗೊತ್ತಾಯಿತು. ಕೂಡಲೇ ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ ಎಂದರು.ಎಲ್ಲರೂ ಹೋರಿ ಹಬ್ಬದಲ್ಲಿ ಸ್ನೇಹಿತರಾದವರು. ಇದರಲ್ಲಿ ಹಿಂದು- ಮುಸ್ಲಿಂ ಎಂಬ ಭಾವನೆ ಇಲ್ಲ. ಒಬ್ಬ ಮುಸ್ಲಿಂ, ಇಬ್ಬರು ಹಿಂದುಗಳು ಇದ್ದಾರೆ. ಶವ ಪರೀಕ್ಷೆಯಲ್ಲಿ ಕೊಲೆ ಎಂದು ಗೊತ್ತಾದ ಕೂಡಲೇ ಆರೋಪಿಗಳನ್ನು ಬಂಧಿಸಿದ್ದಾರೆ. ತಪ್ಪಿಸ್ಥರಿಗೆ ಕಠಿಣ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ಸೂಚಿಸಿದ್ದೇನೆ. ಇದಕ್ಕೆ ಅಗತ್ಯವಾದ ಸಹಕಾರ ನೀಡುತ್ತೇವೆ ಎಂದರು.ಸರ್ಕಾರದಿಂದ ಪರಿಹಾರದ ಕುರಿತು ಪ್ರತಿಕ್ರಿಯಿಸಿದ ಶಾಸಕರು, ಸದ್ಯಕ್ಕೆ ವೈಯಕ್ತಿಕವಾಗಿ ಸಹಾಯ ಮಾಡಬೇಕು. ದಿನಕ್ಕೊಂದು ಕಥೆ ಕಟ್ಟುವುದು ಬಿಡಬೇಕು. ನಿಜವಾಗಿಯೂ ಸಹಾಯ ಮಾಡುವ ಮನಸ್ಸಿದ್ದರೆ ದಿಕ್ಕು ತಪ್ಪಿಸುವ ಕೆಲಸ ಆಗಬಾರದು ಎಂದಷ್ಟೇ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ