ಪಾಕ್‌ ಪರ ಘೋಷಣೆಗೆ ಕೈನಲ್ಲಿ ಪರ್ಮಿಷನ್ ಬೇಕಿಲ್ಲ

KannadaprabhaNewsNetwork |  
Published : Apr 17, 2024, 01:17 AM IST
ವಿಜಯಪುರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಬಿಜೆಪಿ ಬೃಹತ್ ಸಮಾವೇಶವನ್ನು ಮಾಜಿ ಸಚಿವ ಸಿ.ಟಿ. ರವಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಕಾಂಗ್ರೆಸ್ನಲ್ಲಿ ಭಾರತ ಮಾತಾ ಕೀ ಜೈ ಎನ್ನಲು ಪರ್ಮಿಷನ್ ತೆಗೆದುಕೊಳ್ಳಬೇಕು. ಆದರೆ ಪಾಕ್ಗೆ ಜಯ ಎಂದು ಹೇಳಲು ಕಾಂಗ್ರೆಸ್ನಲ್ಲಿ ಪರ್ಮಿಷನ್ ತೆಗೆದುಕೊಳ್ಳಬೇಕಿಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕಾಂಗ್ರೆಸ್‌ನಲ್ಲಿ ಭಾರತ ಮಾತಾ ಕೀ ಜೈ ಎನ್ನಲು ಪರ್ಮಿಷನ್ ತೆಗೆದುಕೊಳ್ಳಬೇಕು. ಆದರೆ ಪಾಕ್‌ಗೆ ಜಯ ಎಂದು ಹೇಳಲು ಕಾಂಗ್ರೆಸ್‌ನಲ್ಲಿ ಪರ್ಮಿಷನ್ ತೆಗೆದುಕೊಳ್ಳಬೇಕಿಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಹೈಸ್ಕೂಲ್ ಮೈದಾನದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಗಂಡು ಗೊತ್ತು ಮಾಡದೇ ಹೆಣ್ಣು ಕೊಡಿ ಎಂದು ಕೇಳುವಂತಹ ಪರಿಸ್ಥಿತಿ ಕಾಂಗ್ರೆಸ್‌ನಲ್ಲಿದೆ. ರಾಹುಲ್ ಮದುವೆ ಗಂಡು ಎಂದರೆ ಯಾರೂ ಹೆಣ್ಣು ಕೊಡುವುದಿಲ್ಲ ಎಂಬ ಅಂಜಿಕೆ ಬೇರೆ ಇದೆ. ಬಿಜೆಪಿ ಗಂಡು ಅಂತೂ ಸಿದ್ಧವಾಗಿದ್ದಾರೆ. ನಮ್ಮ ಗಂಡು ಯಾವ ರೀತಿ ಎಂದರೆ ಜಗಮೆಚ್ಚಿದ ಗಂಡು. ೧೪೦ ಕೋಟಿ ಜನರಿಗೆ ಒಂದೇ ಒಂದು ರು. ಇಲ್ಲದೇ ಕೋವಿಡ್ ವ್ಯಾಕ್ಸಿನ್ ನೀಡಿದ ಭಗವಂತ ರೂಪದ ಗಂಡು. ಗರೀಬ್ ಕಲ್ಯಾಣ ಯೋಜನೆ ಮೂಲಕ ಅಕ್ಕಿ ಕೊಡುವ ಗಂಡು ನಮ್ಮ ಮೋದಿಜಿ ಎಂದು ಶ್ಲಾಘಿಸಿದರು.

ಈ ಹಿಂದೆ ನಮ್ಮ ಗೆಳೆಯ ಲಕ್ಷ್ಮಣ ಸವದಿ ನಮ್ಮ ಜೊತೆಗಿದ್ದರು, ಭಾರತ ಮಾತಾ ಕೀ ಜೈ ಎಂದು ಯಾವಾಗ ಬೇಕಾದರೂ ಹೇಳಬಹುದಿತ್ತು. ಆದರೆ ಕಾಂಗ್ರೆಸ್‌ನಲ್ಲಿ ಭಾರತ ಮಾತಾ ಕೀ ಜೈ ಎನ್ನಲು ಪರ್ಮಿಷನ್ ತೆಗೆದುಕೊಳ್ಳಬೇಕು ಎಂದರು.

ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಹಾಕಲು ಯೋಜಿಸಿದವರನ್ನು, ಡಿಜೆ ಹಳ್ಳಿ-ಕೆಜೆ ಹಳ್ಳಿ ಘಟನೆಗೆ ಕಾರಣರಾದವರನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬ್ರದರ್ಸ್ ಎಂದು ಕರೆದವರು. ಹೀಗಾಗಿ ಈ ರೀತಿಯ ವ್ಯವಸ್ಥೆ ಇರಬಾರದು. ಈ ರೀತಿಯ ದುರುಳರಿಗೆ ಶಿಕ್ಷೆ ನೀಡಲು ಬುಲ್ಡೋಜರ್ ಆಡಳಿತ ಬೇಕು ಎಂದು ಹೇಳಿದರು. ಜನತಾ ದಳ ಜೊತೆ ಬಿಜೆಪಿಯ ಸಂಬಂಧ ಹೊಸತಲ್ಲ. ತುರ್ತು ಪರಿಸ್ಥಿತಿ ವೇಳೆ ಜನತಾ ಪರಿವಾರಕ್ಕೆ ಬಿಜೆಪಿ ಸಾಥ್ ನೀಡಿತ್ತು. ದಿ. ರಾಮಕೃಷ್ಣ ಹೆಗಡೆ ಅವರಿಗೆ ೧೮ ಶಾಸಕರ ಬೆಂಬಲ ನೀಡಿದ್ದೂ ಬಿಜೆಪಿಯೇ, ಈ ಹಿಂದೆ ೨೦-೨೦ ಸರ್ಕಾರದಲ್ಲಿಯೂ ಮೊದಲನೇ ೨೦ ಓವರ್ ಆಡಲು ಸಹ ಜೆಡಿಎಸ್‌ನವರಿಗೆ ಬಿಡಲಾಗಿತ್ತು. ನಮ್ಮ ಕಡೆಯಿಂದ ಅವರಿಗೆ ಯಾವ ರೀತಿಯಲ್ಲೂ ಮೋಸಲಾಗಿಲ್ಲ ಎಂದರು.

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಕೂಡಗಿ ಎನ್‌ಟಿಪಿಸಿ, ರೈಲ್ವೇ ಮೇಲ್ಸೆತುವೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇನೆ. ಆದರೂ ಗೋಳಗುಮ್ಮಟ, ಉಪಲಿ ಬುರುಜ್ ಕಟ್ಟಿದ್ದೇನೆ ಎಂದು ಹೇಳಿಲ್ಲ. ೧೧ ಚುನಾವಣೆ ಗೆಲ್ಲಿಸಿದ್ದು ನನ್ನ ಪುಣ್ಯ. ನಾನು ಎಂದಿಗೂ ಜಾತಿ ಮಾಡಲಿಲ್ಲ. ನಾನು ಯಾವ ಜಾತಿ ವಿರೋಧಿಯಲ್ಲ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಸ್ವಭಾವ ನನ್ನದು, ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಲು ನಾನು ಸಂಸತ್‌ನಲ್ಲಿ ಕೈ ಎತ್ತಬೇಕು ಎಂಬುದು ನನ್ನ ಆಸೆ. ಈ ಆಸೆ ಈಡೇರಿಸಿ ಎಂದರು.

ಮಾಜಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳಿಗೆ ವಾರ್ಷಿಕ ₹೧೦ ಸಾವಿರ ಕೋಟಿ ನೀಡುವುದಾಗಿ ಸುಳ್ಳು ಭರವಸೆ ನೀಡುವ ಮೂಲಕ ಕಾಂಗ್ರೆಸ್ ಉತ್ತರ ಕರ್ನಾಟಕ ಭಾಗಕ್ಕೆ ದೊಡ್ಡ ಮೋಸ ಮಾಡಿದೆ ಎಂದರು.

ಮುದ್ದೇಬಿಹಾಳ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ಒಂದಂಶದ ಭಿನ್ನಾಭಿಪ್ರಾಯ ಸಹ ಜೆಡಿಎಸ್, ಬಿಜೆಪಿ ನಡುವೆ ಇಲ್ಲ. ಅಜಾತಶತ್ರು ಆಗಿರುವ ರಮೇಶ ಜಿಗಜಿಣಗಿ ಅವರ ಗೆಲುವಿನ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ಜೆಡಿಎಸ್ ಶಾಸಕ ರಾಜುಗೌಡ ಪಾಟೀಲ ಮಾತನಾಡಿದರು. ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ಪ್ರಮುಖರಾದ ದುರ್ಯೋಧನ ಐಹೊಳಿ, ವಿಜುಗೌಡ ಪಾಟೀಲ, ಸೋಮನಗೌಡ ಪಾಟೀಲ ಸಾಸನೂರ, ಕಾಸುಗೌಡ ಬಿರಾದಾರ, ಅಪ್ಪುಗೌಡ ಪಾಟೀಲ ಮನಗೂಳಿ, ರಮೇಶ ಭೂಸನೂರ, ಬಿ.ಜಿ. ಪಾಟೀಲ ಹಲಸಂಗಿ, ಅರುಣ ಶಹಾಪೂರ, ಶಂಕರಗೌಡ ಪಾಟೀಲ, ಸಂಜಯ ಪಾಟೀಲ ಕನಮಡಿ, ಡಾ.ಗೌತಮ ಚೌದರಿ ಮುಂತಾದವರು ಇದ್ದರು.

---

ಧಮ್ ಇದ್ದರೆ ನನ್ನ ವಿರುದ್ಧ ಸ್ಪರ್ಧೆ ಮಾಡಿ

ವಿಜಯಪುರ:

ಕೆಲವೇ ದಿನಗಳಲ್ಲಿ ಕ್ಷೇತ್ರ ಪುನರ್ ವಿಂಗಡನೆಯಾಗುತ್ತದೆ. ಲೋಕಸಭಾ ಕ್ಷೇತ್ರಗಳ ಸಂಖ್ಯೆ ಅಧಿಕವಾಗಲಿದೆ. ಸರಿಸುಮಾರು ೩ ಜನರು ಜಿಲ್ಲೆಯನ್ನು ಪ್ರತಿನಿಧಿಸಬಹುದು. ಹೀಗಾಗಿ ಒಂದು ಸಾಮಾನ್ಯ ಕ್ಷೇತ್ರದಲ್ಲಿ ನಾನಂತೂ ಸ್ಪರ್ಧಿಸುವುದು ನಿಶ್ಚಿತ. ನನ್ನ ವಿರುದ್ಧ ಬೇಕಾದರೆ ಸ್ಪರ್ಧಿಸಿ ನೋಡಿ ಬರೀ ಹೇಳುವುದೇ ಆಗಿದೆ. ನಾನು ನಿಲ್ಲುವುದು ಪಕ್ಕಾ, ಧಮ್ ಇದ್ದರೆ ನನ್ನ ವಿರುದ್ಧ ಸ್ಪರ್ಧೆ ಮಾಡಿ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಚಿವ ಶಿವಾನಂದ ಪಾಟೀಲ ಅವರವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದರು.

ಶಿವಾನಂದ ಪಾಟೀಲ ಅವರು ಸಕ್ಕರೆ ಸಚಿವರಾಗಿದ್ದು, ವಿನಾಕಾರಣ ನನ್ನ ಫ್ಯಾಕ್ಟರಿಗೆ ನೋಟಿಸ್ ನೀಡಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಆದರೆ ಕೋರ್ಟ್ ಸಹ ಈ ವಿಷಯವಾಗಿ ಛೀಮಾರಿ ಹಾಕಿದೆ ಎಂದರು.

ಚುನಾವಣೆ ಬಂದರೆ ಸಾಕು ವಿಜಯಪುರಕ್ಕೆ ಬರುವೆ. ಮುದ್ದೇಬಿಹಾಳಕ್ಕೆ ನಿಲ್ಲುವೆ. ದೇವರಹಿಪ್ಪರಗಿಗೆ ನಿಲ್ಲುವೆ ಎಂದು ನಾಟಕವಾಡುತ್ತಾರೆ ಎಂದು ಏಕವಚನದಲ್ಲಿಯೇ ಶಿವಾನಂದ ಪಾಟೀಲರ ವಿರುದ್ಧ ಗುಡುಗಿದರು.

ಧಮ್ ಇದ್ದರೆ ಮುಂದಿನ ಸಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿ, ನಾನು ಅವರ ವಿರುದ್ಧ ನಿಲ್ಲುವೆ. ನಾನೇನೂ ಅವರಂತೆ ಮನೆ ಕಟ್ಟಿಕೊಂಡಿಲ್ಲ. ಮನೆಗೆ ಆಸ್ತಿ ಮಾಡಿಕೊಂಡಿಲ್ಲ. ಅವರಂತೆ ಮನೆಗೆ ಕಾಂಪ್ಲೆಕ್ಸ್ ಕಟ್ಟಿಕೊಂಡಿಲ್ಲ, ನಾನು ಗೋಶಾಲೆ ಕಟ್ಟಿದ್ದೇನೆ, ಜನರಿಗೆ ಎಲ್ಲವೂ ಗೊತ್ತಿದೆ. ತಿನ್ನುವುದನ್ನು ಬಿಟ್ಟು ಶಿವಾನಂದ ಪಾಟೀಲರು ಏನೂ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ