ಹಳೆಯ ಕಟ್ಟಡದಲ್ಲಿ ಸ್ಥಳಾವಕಾಶ ಕಡಿಮೆಯಿತ್ತು. ಪಾರ್ಕಿಂಗ್ ಸಮಸ್ಯೆ ಇತ್ತು. ನೂತನ ಕಟ್ಟಡದಲ್ಲಿ ಅಗತ್ಯ ಸೌಕರ್ಯಗಳು ಸುಸಜ್ಜಿತವಾಗಿವೆ. ಕೀಲರು ಹಾಗೂ ಕಕ್ಷಿದಾರರಿಗೆ ಸಂತಸವಾಗಿದೆ ಎನ್ನುತ್ತಾರೆ ಬಳ್ಳಾರಿ ವಕೀಲರ ಸಂಘ ಅಧ್ಯಕ್ಷ ಕೆ. ಎರ್ರಿಗೌಡ.
ಕೆ.ಎಂ. ಮಂಜುನಾಥ್
ಕನ್ನಡಪ್ರಭ ವಾರ್ತೆ ಬಳ್ಳಾರಿ
ನಗರದ ತಾಳೂರು ರಸ್ತೆಯಲ್ಲಿ ನಿರ್ಮಿಸಿರುವ ಸುಸಜ್ಜಿತ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಕಾರ್ಯ ಕಲಾಪ ನಡೆಸುವ ಕಾಲ ಕೊನೆಗೂ ಕೂಡಿ ಬಂದಿದ್ದು, ಬುಧವಾರ ಸಂಕೀರ್ಣದಲ್ಲಿ 5 ನ್ಯಾಯಾಲಯಗಳು ಕಾರ್ಯಾರಂಭ ಮಾಡಿದವು.
ಹಳೆಯ ಕಟ್ಟಡದಲ್ಲಿದ್ದ 13 ನ್ಯಾಯಾಲಯಗಳ ಪೈಕಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಎಫ್ಟಿಎಸ್ಸಿ- 1 ನ್ಯಾಯಾಲಯ, 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು(ವಾಣಿಜ್ಯ ನ್ಯಾಯಾಲಯ), ಕೌಟುಂಬಿಕ ನ್ಯಾಯಾಲಯವು ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡು ಕಾರ್ಯ ಕಲಾಪಗಳನ್ನು ಆರಂಭಿಸಿದವು.
ಕಳೆದ ವರ್ಷವೇ ಉದ್ಘಾಟನೆ:
₹121.90 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ನ್ಯಾಯಾಲಯ ಸಂಕೀರ್ಣ ನಿರ್ಮಿಸಲಾಗಿದ್ದು, ಇನ್ನೂ ಒಂದಷ್ಟು ಕಾಮಗಾರಿ ಬಾಕಿ ಇರುವಾಗಲೇ ಕಳೆದ ವರ್ಷದ ಜುಲೈ 26ರಂದು ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವರು ನ್ಯಾಯಾಲಯ ಸಂಕೀರ್ಣ ಉದ್ಘಾಟಿಸಿದರು.
ಉಳಿದ ಕಾಮಗಾರಿಗೆ ಬಿಡುಗಡೆಯಾಗಬೇಕಿದ್ದ ₹21.90 ಕೋಟಿ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ನ್ಯಾಯಾಲಯದ ಸಂಕೀರ್ಣದಲ್ಲಿನ ಕೆಲವು ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಹೀಗಾಗಿ ಸಂಕೀರ್ಣದಲ್ಲಿ ಕಾರ್ಯಕಲಾಪಗಳನ್ನು ಆರಂಭಿಸಲು ಸಾಧ್ಯವಾಗಲಿರಲಿಲ್ಲ.
ನಗರ ಶಾಸಕ ನಾರಾ ಭರತ್ ರೆಡ್ಡಿ ಈ ಕುರಿತು ಹೆಚ್ಚು ಆಸ್ಥೆ ವಹಿಸಿ ಸಚಿವ ಸಂಪುಟದಲ್ಲಿರಿಸಿ ಹಣ ಬಿಡುಗಡೆಯಾಗುವಂತೆ ನೋಡಿಕೊಂಡರು. ಇದರಿಂದ ಬಾಕಿ ಕೆಲಸಗಳು ವೇಗ ಪಡೆದುಕೊಂಡವು.
ಎಲ್ಲರಲ್ಲೂ ಸಂತಸ:
ಇದೀಗ 5 ಜಿಲ್ಲಾ ನ್ಯಾಯಾಲಯಗಳು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ಉಳಿದ ನ್ಯಾಯಾಲಯಗಳು ಡಿಸೆಂಬರ್ 20ರೊಳಗೆ ಸ್ಥಳಾಂತರಗೊಳ್ಳಲಿವೆ.
ಜಿಲ್ಲಾ ನ್ಯಾಯಾಲಯ ಸಂಕೀರ್ಣ ಬರುತ್ತಿದೆ ಎಂದು ಈ ಹಿಂದೆಯೇ ತಾಳೂರು ರಸ್ತೆಯ ಸ್ಥಳೀಯರು ಬಾಡಿಗೆ ಹೆಚ್ಚಳ ಮಾಡಿದ್ದರು. ಲೇಔಟ್ ಗಳ ಮಾಲೀಕರು ಸಹ ನಿವೇಶನಗಳ ದರ ವಿಪರೀತ ಏರಿಸಿದ್ದರು. ಇದೀಗ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಉದ್ಘಾಟನೆಗೊಳ್ಳುತ್ತಿದ್ದಂತೆ ಈ ಭಾಗದ ಲೇಔಟ್ ಮಾಲೀಕರು ಖುಷಿಯಾಗಿದ್ದಾರೆ.
ಸುಸಜ್ಜಿತ ಸೌಕರ್ಯ: ಹಳೆಯ ಕಟ್ಟಡದಲ್ಲಿ ಸ್ಥಳಾವಕಾಶ ಕಡಿಮೆಯಿತ್ತು. ಪಾರ್ಕಿಂಗ್ ಸಮಸ್ಯೆ ಇತ್ತು. ನೂತನ ಕಟ್ಟಡದಲ್ಲಿ ಅಗತ್ಯ ಸೌಕರ್ಯಗಳು ಸುಸಜ್ಜಿತವಾಗಿವೆ. ಕೀಲರು ಹಾಗೂ ಕಕ್ಷಿದಾರರಿಗೆ ಸಂತಸವಾಗಿದೆ ಎನ್ನುತ್ತಾರೆ ಬಳ್ಳಾರಿ ವಕೀಲರ ಸಂಘ ಅಧ್ಯಕ್ಷ ಕೆ. ಎರ್ರಿಗೌಡ.
ಅನುಕೂಲ:
ನೂತನ ಕಟ್ಟಡಕ್ಕೆ ನ್ಯಾಯಾಲಯಗಳು ಸ್ಥಳಾಂತರಗೊಂಡಿರುವುದು ಹೆಚ್ಚು ಖುಷಿ ನೀಡಿದೆ. ನ್ಯಾಯಾಲಯ ಸಂಕೀರ್ಣವು ಅತ್ಯಂತ ಸುಸಜ್ಜಿತ ಹಾಗೂ ಮೂಲ ಸೌಕರ್ಯಗಳನ್ನು ಹೊಂದಿದೆ. ಇದರಿಂದ ಕಕ್ಷಿದಾರರಿಗೂ ಹೆಚ್ಚು ಅನುಕೂಲವಾಗಿದೆ ಎನ್ನುತ್ತಾರೆ ಯುವ ವಕೀಲ ವಿಜಯ್ ಕುಮಾರ್.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.