ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ಬಸಪ್ಪ ಹುಣಶಿಕಟ್ಟಿ ಅವರ ತೋಟದಿಂದ ವಿವಿಧ ವಾದ್ಯಮೇಳದೊಂದಿಗೆ ಕುಂಭ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀಮಠಕ್ಕೆ ತಲುಪಿತು. ನಂತರ ಉಭಯ ಶ್ರೀಗಳ ಕರ್ತೃ ಗದ್ದುಗೆಗೆ ಮಹಾರುದ್ರಭಿಷೇಕ, ವಿಶೇಷ ಪೂಜೆ ನೆರವೇರಿದ ಉಭಯ ಶ್ರೀಗಳ ರಜತ ಮೂರ್ತಿಗಳ ಪಲ್ಲಕ್ಕಿ ಮಹೋತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯವೈಭವದೊಂದಿಗೆ ಭಕ್ತರ ಹರ್ಷೋದ್ಗಾರದೊಂದಿಗೆ ಜರುಗಿತು. ನಂತರ ಶ್ರೀಮಠದಲ್ಲಿ ಧರ್ಮಸಭೆ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಪುರಾಣ ಮಹಾಮಂಗಲ ಕಾರ್ಯಕ್ರಮ ಜರುಗಿತು.
ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶ್ರೀಮಠದ ಪರಂಪರೆಯಲ್ಲಿ ಎಲ್ಲ ಲಿಂಗೈಕ್ಯ ಶ್ರೀಗಳು ತಮ್ಮದೇ ಕೊಡುಗೆ ನೀಡುವ ಮೂಲಕ ಭಕ್ತರ ಮನದಲ್ಲಿ ನೆಲೆಯೂರಿದ್ದಾರೆ. ಲಿಂ. ಶ್ರೀಗಳ ಪವಾಡಗಳು ಇಂದಿಗೂ ಭಕ್ತರಲ್ಲಿ ಮನೆ ಮಾಡಿವೆ. ಭಕ್ತರು ಶ್ರೀಮಠದೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಜೀವನದಲ್ಲಿ ಉತ್ತಮ ಸಂಸ್ಕಾರ ಪಡೆದುಕೊಂಡು ಶ್ರೀಗಳ ಕೃಪೆಗೆ ಪಾತ್ರರಾಗಬೇಕು. ಗುರು-ಹಿರಿಯರು ಇಂದಿನ ಜನಾಂಗಕ್ಕೆ ಉತ್ತಮ ಸಂಸ್ಕಾರ ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದರು.ವ್ಹಿಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಮಠ-ಮಾನ್ಯಗಳ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ. ಶ್ರೀಮಠಗಳು ನಾಡಿನಲ್ಲಿ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಕೊಡುಗೆ ನೀಡುತ್ತಿವೆ. ಈ ನಿಟ್ಟಿನಲ್ಲಿ ಇಲ್ಲಿನ ಶ್ರೀಮಠದಿಂದ ನಿರಂತರವಾಗಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ. ಶೈಕ್ಷಣಿಕವಾಗಿಯು ಮಠವು ಸೇವೆ ಸಲ್ಲಿಸುತ್ತಿದೆ. ಶ್ರೀಮಠದ ಪ್ರಸ್ತುತ ಶ್ರೀಗಳಿಂದ ವಿವಿಧ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕೈಂಕರ್ಯಗಳು ನಡೆಯುತ್ತಿವೆ ಎಂದರು.
ಸಾನಿಧ್ಯವನ್ನು ಸಿಂದಗಿ ಹಿರೇಮಠದ ರಾಜಯೋಗಿ ವೀರರಾಜೇಂದ್ರ ಸ್ವಾಮೀಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ನಿರ್ದೇಶಕ ಬಸವರಾಜ ಸೋಂಪುರ, ಮುಖಂಡರಾದ ಮಹಾಂತಪ್ಪಗೌಡ ಗುಜಗೊಂಡ, ಗಂಗಪ್ಪ ಕಂಬಾರ, ನಿಂಗನಗೌಡ ಪಾಟೀಲ, ಎಚ್.ಎಂ.ಸಾರವಾಡ, ನಿಂಗನಗೌಡ ಪಾಟೀಲ, ಶಂಕ್ರಮ್ಮ ಬಿರಾದಾರ, ಪ್ರಿಯಾ ಹಂಚಿನಾಳ, ಕಸ್ತೂರಿ ಚಿಮ್ಮಲಗಿ, ಶಾರದಾ ಲೇಸಪ್ಪಗೋಳ, ಜ್ಯೋತಿ ಹಿಟ್ನಳ್ಳಿ, ಲಕ್ಷ್ಮೀ ಬಿರಾದಾರ, ಶಶಿ ಬೂದಿಹಾಳ, ಮಹಾದೇವಿ ಕವಾಸಪುರ, ರೂಪಾ ಮಠ ಸೇರಿದಂತೆ ಇತರರು ಭಾಗವಹಿಸಿದ್ದರು. ಮಹಾಂತೇಶ ಮನಗೂಳಿ ಸ್ವಾಗತಿಸಿದರು.ಎಸ್. ಐ. ಗೆಣ್ಣೂರ ನಿರೂಪಿಸಿದರು. ಶ್ರವಣ ಕೋಟ್ಯಾಳ ವಂದಿಸಿದರು. ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.