ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಅಕ್ಕಿಹೆಬ್ಬಾಳಿನ ಸರ್ಕಾರಿ ಪ್ರೌಢಶಾಲಾ ಆವರಣದ ರಂಗ ಮಂದಿರದಲ್ಲಿ ಲೋಕಾಯನ ಕಲ್ಚರಲ್ ಫೌಂಡೇಷನ್, ಹೇಮಾವತಿ ಹೊನ್ನಾರು ವೇದಿಕೆ ಮತ್ತು ಅಕ್ಕಿಹೆಬ್ಬಾಳು ಚಿಂತಕರ ವೇದಿಕೆ ಆಶ್ರಯದಲ್ಲಿ ಖ್ಯಾತ ಸಾಹಿತಿ ಪ್ರೊ.ಎ.ಎನ್. ಮೂರ್ತಿರಾವ್ ಅವರ ಜನ್ಮದಿನಾಚರಣೆಯನ್ನು ಉದ್ಯಾನವನದಲ್ಲಿ ಶ್ರಮದಾನದೊಂದಿಗೆ ಅತಿಥಿಗಳು ಮತ್ತು ಸಭಿಕರು ಆಚರಿಸಿದ ವೇಳೆ ಮಾತನಾಡಿದರು.
ಮೂರ್ತಿರಾಯರ ಸಾಹಿತ್ಯವು ಕುರುಡು ನಂಬಿಕೆಗಳನ್ನು ಪ್ರಶ್ನಿಸುತ್ತಲೇ ಮನುಷ್ಯ ವಿವೇಚನೆಯಿಂದ ಬದುಕುವುದನ್ನು ಕಲಿಸುತ್ತದೆ ಎಂದು ರಾಯರ ಅಕ್ಕಿಹೆಬ್ಬಾಳು, ಅಲೆಯುವ ಮನ, ಅಪರ ವಯಸ್ಕನ ಅಮೆರಿಕಾ ಯಾತ್ರೆ ಮುಂತಾದ ಕೃತಿಗಳನ್ನು ವಿಶ್ಲೇಷಿಸಿ, ಪ್ರಬಂಧ ಸಾಹಿತ್ಯಕ್ಕೆ ಮತ್ತು ಪ್ರವಾಸ ಸಾಹಿತ್ಯಕ್ಕೆ ರಾಯರ ಕೊಡುಗೆ ಸ್ಮರಿಸಿದರು.ಅಕ್ಕಿಹೆಬ್ಬಾಳು ಸಾಹಿತ್ಯ ಕೃಷಿಕರ ಬೀಡು. ಎ.ಎನ್.ಮೂರ್ತಿರಾಯರು, ಅ.ರಾ.ಮಿತ್ರ, ಅ.ನ.ಸುಬ್ಬರಾವ್, ಖ್ಯಾತ ನಾಟಕಕಾರ ಆಕಾಶವಾಣಿ ಈರಣ್ಣ ಎಂದೇ ಪ್ರಸಿದ್ದರಾಗಿದ್ದ ಎ.ಎಸ್.ಮೂರ್ತಿ ಅಕ್ಕಿಹೆಬ್ಬಾಳಿನ ಹಿರಿಮೆ ಗರಿಮೆಯನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಶಾಶ್ವತವಾಗಿ ಎತ್ತಿ ಹಿಡಿದಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ.ಕೆ.ಪಿ.ಪ್ರತಿಮಾ ಅವರು, ದೇವರು ಮನುಷ್ಯನ ಸೃಷ್ಟಿಯೋ ಅಥವಾ ಮನುಷ್ಯ ದೇವರ ಸೃಷ್ಟಿಯೋ ಎಂಬ ಪ್ರಶ್ನೆಗಿಂತ, ಮನುಷ್ಯತ್ವವನ್ನು ಉಳಿಸಿಕೊಳ್ಳುವುದು ನಮಗೆ ಮುಖ್ಯ ಎಂಬ ಮೂರ್ತಿರಾಯರ ಆಶಯವನ್ನು ನೆನಪಿಸಿ ಇಂದಿನ ಯುವ ಪೀಳಿಗೆಗೆ ಅವರ ಚಿಂತನೆಗಳ ಅಗತ್ಯತೆಯನ್ನು ಒತ್ತಿ ಹೇಳಿದರು.