ದಲಿತರಲ್ಲಿ ಆತ್ಮಸ್ಥೈರ್ಯ ವೃದ್ಧಿಸಿದ ಪ್ರೊ. ಬಿ.ಕೃಷ್ಣಪ್ಪ

KannadaprabhaNewsNetwork |  
Published : Sep 13, 2025, 02:04 AM IST
12 HRR. 03ಹರಿಹರದ ಎಸ್‌ಜೆವಿಪಿ ಕಾಲೇಜಿನಲ್ಲಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕದ ಸಂ ಸಮಿತಿಯಿಂದ  ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪ್ರೊ.ಬಿ.ಕೃಷ್ಣಪ್ಪರವರ ಸಾಧನೆಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕದಸಂಸ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಶಿವಮೊಗ್ಗ ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರೊ. ಬಿ.ಕೃಷ್ಣಪ್ಪ ಅವರು ನಡೆಸಿದ ಹಲವಾರು ಹೋರಾಟಗಳ ಪರಿಣಾಮ ಕರ್ನಾಟಕದಲ್ಲಿ ದಲಿತ ಸಮುದಾಯದವರ ಆತ್ಮಸ್ಥೈರ್ಯ ಹೆಚ್ಚಾಯಿತು ಎಂದು ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಹೇಳಿದ್ದಾರೆ.

- ಡಾ.ಅಂಬೇಡ್ಕರ್- ಪ್ರೊ.ಕೃಷ್ಣಪ್ಪ ಸಾಧನೆಗಳ ವಿಶೇಷ ಉಪನ್ಯಾಸದಲ್ಲಿ ಎಂ.ಗುರುಮೂರ್ತಿ ।

- - -

ಕನ್ನಡಪ್ರಭ ವಾರ್ತೆ ಹರಿಹರ

ಪ್ರೊ. ಬಿ.ಕೃಷ್ಣಪ್ಪ ಅವರು ನಡೆಸಿದ ಹಲವಾರು ಹೋರಾಟಗಳ ಪರಿಣಾಮ ಕರ್ನಾಟಕದಲ್ಲಿ ದಲಿತ ಸಮುದಾಯದವರ ಆತ್ಮಸ್ಥೈರ್ಯ ಹೆಚ್ಚಾಯಿತು ಎಂದು ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಹೇಳಿದರು.

ನಗರದ ಎಸ್‌ಜೆವಿಪಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಶುಕ್ರವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಪ್ರೊ. ಬಿ.ಕೃಷ್ಣಪ್ಪರವರ ಸಾಧನೆಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹೋಬಳಿಗೊಂದು ವಸತಿ ಶಾಲೆ, ವಿದ್ಯಾರ್ಥಿ ವೇತನ, ದಲಿತರಿಗೆ ಭೂಮಿ ಮಂಜೂರಾತಿ, ಧರ್ಮದ ಹೆಸರಲ್ಲಿ ಮೌಢ್ಯಾಚರಣೆ ವಿರೋಧಿ, ಮೀಸಲಾತಿ ಸೇರಿದಂತೆ ಹತ್ತಾರು ಬಗೆಯ ನಿರಂತರ ಹೋರಾಟಗಳು ಆಡಳಿತಗಾರರ ಕಣ್ಣು ತೆರೆಸಿದವು ಎಂದರು.

೨೦ನೇ ಶತಮಾನದ ೪ ದಶಕಗಳ ಹೋರಾಟದ ಮೂಲಕ ರಾಜ್ಯದ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಸಂರಕ್ಷಣೆಗಾಗಿ ಅತ್ಯಂತ ಸಮರ್ಥವಾಗಿ ಮುಖಾಮುಖಿಯಾದ ಕೃಷ್ಣಪ್ಪನವರು ರಾಜ್ಯದ ಬಹುದೊಡ್ಡ ಹೋರಾಟಗಾರರಾಗಿ ಹೊರಹೊಮ್ಮಿದರು. ಅಖಂಡ ಮಾನವತಾವಾದಿ ಡಾ.ಅಂಬೇಡ್ಕರ್ ಅವರ ಆಲೋಚನೆಗಳನ್ನು ರಾಜ್ಯದ ಕೇರಿ ಕೇರಿಗಳಲ್ಲಿ ಬಿತ್ತಿದ ಕೃಷ್ಣಪ್ಪನವರು ಒಂದು ಹೊಸ ಸಾಂಸ್ಕೃತಿಕ ಪ್ರಜ್ಞೆಯ ವಲಯ ಕಟ್ಟುವ ಮೂಲಕ ದಲಿತರ ಬದುಕಿಗೆ ದಾರಿದೀಪವಾದರು ಎಂದರು.

ಬಗರ್ ಹುಕುಂ ಸಾಗುವಳಿ ಒತ್ತುವರಿ ಜಮೀನು, ಹೆಚ್ಚುವರಿ ಜಮೀನು, ಸಿ ಮತ್ತು ಡಿ ಭೂಮಿ ವಿತರಣೆಯ ಬಾಪ್ತು ೨೮,೦೦೦ ಎಕರೆ ಜಮೀನು ಸೇರಿದಂತೆ ೧೯೮೦ರಲ್ಲಿ ಚೆಂಡೆಗೋಡು, ೧೯೮೧ರಲ್ಲಿ ಬಿದರೆಕಾವಲು, ೧೯೮೩ರಲ್ಲಿ ದೇವಲಾಪುರ ಚರಗುತ್ತಿ ಭೂ ಹೋರಾಟಗಳು ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರನ್ನು ಆರ್ಥಿಕ ಹಾಗೂ ಸಾಮಾಜಿಕವಾಗಿ ತಲೆಯೆತ್ತಿ ನಿಲ್ಲುವಂತೆ ಮಾಡಿತು ಎಂದರು.

ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲ ಭಾಷಾ ಪ್ರಾಧ್ಯಾಪಕ ಪ್ರೊ. ಬಿ.ಎಲ್. ರಾಜು ಡಾ.ಅಂಬೇಡ್ಕರ್‌ ಕುರಿತು ಉಪನ್ಯಾಸ ನೀಡಿ, ವಿವಿಧ ವಿಷಯಗಳಲ್ಲಿ ಭಾರತವೂ ಸೇರಿದಂತೆ ಲಂಡನ್, ಅಮೇರಿಕಾ ವಿಶ್ವವಿದ್ಯಾನಿಲಯಗಳಿಂದ ೩೦ ಪದವಿ, ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದ ಅಂಬೇಡ್ಕರ್‌ ಅವರಿಗೆ ಸಹಜವಾಗಿ ಸಂವಿಧಾನ ರಚನೆ ಜವಾಬ್ದಾರಿ ವಹಿಸಲಾಯಿತು. ದಲಿತ, ಹಿಂದುಳಿದ, ಅಲ್ಪಸಖ್ಯಾತರ ಹಾಗೂ ಮಹಿಳೆಯರ ನಿಕೃಷ್ಟ ಬದುಕನ್ನು ಗಮನಿಸಿದ ಅಂಬೇಡ್ಕರ್‌ ಅವರು ಇವರ ಸಂರಕ್ಷಣೆಗಾಗಿಯೇ ವಿಶೇಷ ಕಾಳಜಿ ವಹಿಸಿದರು ಎಂದರು.

ಹಿಂದೂ ಕೋಡ್ ಬಿಲ್ ರಚಿಸಿ ಜಾರಿಗೆ ತಂದ ಪರಿಣಾಮವಾಗಿ ದೇಶದ ಎಲ್ಲ ವರ್ಗದ ಮಹಿಳೆಯರಿಗೆ ಪ್ರಥಮ ಬಾರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು ದೊರೆಯಿತು. ಈ ಕಾಯ್ದೆ ಜಾರಿಗೆ ತಂದ ಪರಿಣಾಮವಾಗಿ ಮೇಲ್ವರ್ಗದವರ ಟೀಕೆಯಿಂದಾಗಿ ಸಚಿವ ಸ್ಥಾನಕ್ಕೆ ಅವರು ರಾಜಿನಾಮೆ ನೀಡಬೇಕಾದದ್ದು ವಿಪರ್ಯಾಸ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಧ್ಯಾಪಕ ಪ್ರೊ. ರಮೇಶ್ ಕೆ. ಪರ್ವತಿ, ಕದಸಂಸ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಪ್ರಸ್ತಾವನೆ ಮಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಎನ್.ಎಚ್. ಪಾಟೀಲ ಮಾತನಾಡಿದರು. ಕಡ್ಲೆಗೊಂದಿ ತಿಮ್ಮಣ್ಣ, ಕಡತಿ ನಾಗರಾಜಪ್ಪ, ಸಂಜೀವ್, ಅಣ್ಣಪ್ಪ, ಬಸವರಾಜ್, ರಾಜಪ್ಪ ಇದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಕಾವ್ಯ ಪ್ರಾರ್ಥಿಸಿದರು. ಸಂಜನಾ ಸ್ವಾಗತಿಸಿದರು. ಅಧ್ಯಾಪಕ ಸಿದ್ದಯ್ಯ ನಿರೂಪಿಸಿದರು. ದಿವ್ಯ ವಂದಿಸಿದರು.

- - -

-12HRR.03.ಜೆಪಿಜಿ:

ಉಪನ್ಯಾಸ ಕಾರ್ಯಕ್ರಮವನ್ನು ಕದಸಂಸ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಶಿವಮೊಗ್ಗ ಉದ್ಘಾಟಿಸಿದರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ