ದೇಶ ಕಟ್ಟಲು ಮುಂದಾಗುವ ವಿದ್ಯಾರ್ಥಿಗಳಿಗೆ ಒಳ್ಳೆಯ ಪ್ರಾಧ್ಯಾಪಕರು ಸಿಗುತ್ತಿಲ್ಲ

KannadaprabhaNewsNetwork | Published : Sep 1, 2024 2:04 AM

ಇಂದಿನ ಅಧ್ಯಾಪಕರಲ್ಲಿ ಶಿಕ್ಷಣದ ಗುಣಮಟ್ಟ ಕಡಿಮೆಯಾಗಿರುವುದು ಆತಂಕಕಾರಿ ಬೆಳವಣಿಗೆ.

ಕನ್ನಡಪ್ರಭ ವಾರ್ತೆ ಮೈಸೂರು

ಇಂದಿನ ದಿನಮಾನದಲ್ಲಿ ಓದಿ ವಿದ್ಯಾವಂತರಾಗಿ ದೇಶ ಕಟ್ಟಲು ಮುಂದಾಗುವ ವಿದ್ಯಾರ್ಥಿಗಳಿಗೆ ಒಳ್ಳೆಯ ಪ್ರಾಧ್ಯಾಪಕರು ಸಿಗುತ್ತಿಲ್ಲ ಎಂದು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಸಿ.ಎಂ. ತ್ಯಾಗರಾಜು ಕಳವಳ ವ್ಯಕ್ತಪಡಿಸಿದರು.

ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಆಯೋಜಿಸಿರುವ ಯುಜಿಸಿ- ನೆಟ್‌ ಮತ್ತು ಕೆ-ಸೆಟ್‌ ಪರೀಕ್ಷೆಗಳ ತರಬೇತಿ ಶಿಬಿರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಅಧ್ಯಾಪಕರಲ್ಲಿ ಶಿಕ್ಷಣದ ಗುಣಮಟ್ಟ ಕಡಿಮೆಯಾಗಿರುವುದು ಆತಂಕಕಾರಿ ಬೆಳವಣಿಗೆ. ಅಧ್ಯಾಪಕರ ಗುಣಮಟ್ಟ ಕಳೆದುಕೊಂಡರೆ ದೇಶದ ಯುವಕರ ಪರಿಸ್ಥಿತಿ ಏನಾಗಬಹುದು. ದೇಶದ ಯುವಕರು ಕಷ್ಟದ ಪರಿಸ್ಥಿತಿ ದಾಟುತ್ತಿದ್ದಾರೆ. ಎಲ್ಲರೂ ಪದವಿ ಪಡೆದಿದ್ದಾರೆ. ಆದರೆ, ಕೆಲಸ ಇಲ್ಲ ಎಂದರು.

ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಗುರಿ ಮುಟ್ಟುವವರೆಗೆ ನಿಲ್ಲದಿರಿ. ತಮ್ಮ ಬದುಕಿನಲ್ಲಿ ಉನ್ನತ ಸಾಧನೆಗಳನ್ನು ಮಾಡುವ ಗುರಿಗಳನ್ನು ಹೊಂದಬೇಕು ಹಾಗೂ ಆ ಗುರಿ ಸಾಧನೆಯ ಹಾದಿಯಲ್ಲಿ ಯಾವುದೇ ಅಡೆ ತಡೆಗಳು ಬಂದರೂ ಎದೆಗುಂದದೇ, ತಮ್ಮ ನಿರೀಕ್ಷಿತ ಗುರಿ ತಲುಪುವವರೆಗೂ ಪ್ರಯತ್ನ ಮುಂದುವರೆಸಬೇಕು ಎಂದು ಅವರು ಹೇಳಿದರು.

ವಿದ್ಯಾರ್ಥಿಗಳ ಅರಿವನ್ನು ವಿಸ್ತಾರ ಮಾಡುವವನೇ ಗುರು. ಆ ಗುರುವಿನ ಸ್ಥಾನ ತುಂಬುವ ಅಧ್ಯಾಪಕನು ನಿಷ್ಠೆಯಿಂದ ಪ್ರಾಮಾಣಿಕವಾಗಿರಬೇಕು. ಓದಿ ಯುವಕರೇ ಓದಿ ನಿಮ್ಮ ಜ್ಞಾನ ವಿಸ್ತಾರಕ್ಕಾಗಿ ಓದಿ, ನಿಮ್ಮ ಕನಸು ನನಸಾಗಲು ಓದಿ.

ಓದು ಎಂಬುದು ನಿರಂತರವಾಗಿರಬೇಕು ಎಂದರು.

ದೇಶ ಕಟ್ಟುವ ಯುವಕರಿಗೆ ಒಳ್ಳೆಯ ಪ್ರಾಧ್ಯಾಪಕರು ಸಿಗದೆ ನೊಂದಿದ್ದಾರೆ. ಇಂದಿನ ಶಿಕ್ಷಣ ವ್ಯವಸ್ಥೆ ಏಕೀ ಸುಲ್ತಾನ್‌ ಎಂಬಾಂತಾಗಿದೆ. ನೂರಾರು ವಿದ್ಯಾರ್ಥಿಗಳನ್ನು ಕೋಣೆಯೊಳಗೆ ಕೂಡಾಕಿಕೊಂಡು ಅವರ ಅಭಿರುಚಿಗೆ ಮನ್ನಣೆ ಇಲ್ಲದಾಗಿದೆ. ನೀವೆಲ್ಲರೂ ಮುಂದೆ ಅತ್ಯುನ್ನತ ಪ್ರಾಧ್ಯಾಪಕರಾಗಿ ಸಮಾಜಮುಖಿ ಕೆಲಸಗಳನ್ನ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಪ್ರಾಧ್ಯಾಪಕರು ಅಧ್ಯಾಪನ ಕುಶಲರಾಗಿರಬೇಕು, ಹೃದಯಸ್ಪರ್ಶಿಯಾಗಿರಬೇಕು. ಉದಾತ್ತ ಧ್ಯೇಯ ನಿಷ್ಠೆಯಿಂದ ಇರಬೇಕು. ಸತ್ಯ ಸಂಶೋಧನೆ ಮಾಡಿ ಪ್ರಚಲಿತ ಘಟನೆಯನ್ನು ವಿದ್ಯಾರ್ಥಿಗಳಿಗೆ ಹೇಳಬೇಕು. ಅಂದವಾದ ವಾಕ್ಯರಚನೆ ಮಾಡುವಂತೆ ಹೇಳಿಕೊಡಬೇಕು ಎಂದರು.

ಕಲಬುರಗಿ ಕೇಂದ್ರೀಯ ವಿವಿ ಶಿಕ್ಷಣ ನಿಕಾಯ ಡೀನ್ ಪ್ರೊ.ಜಿ.ಆರ್‌. ಅಂಗಡಿ ಅವರು, ತರಬೇತಿ ಅಭ್ಯರ್ಥಿಗಳಿಗೆ ಶುಭ ಹಾರೈಸಿ ಪರೀಕ್ಷೆ ಎದುರಿಸುವ ಕುರಿತು ಸಲಹೆ ಹಾಗೂ ಯುಜಿಸಿ-ನೆಟ್, ಕೆ-ಸೆಟ್‌ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಿಗಿದ್ದ

ಹಲವು ಗೊಂದಲಗಳನ್ನು ನಿವಾರಿಸಿಕೊಟ್ಟರು.

ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಮಾತನಾಡಿ, ವಿದ್ಯಾರ್ಥಿಗಳು ಓದಿನ ಗೀಳನ್ನು ರೂಢಿಸಿಕೊಳ್ಳಬೇಕು. ನೀವೆಲ್ಲಾ ಮುಂದಿನ ದಿನಗಳಲ್ಲಿ ಪ್ರಾಧ್ಯಾಪಕರಾಗುವವರು ನಿಷ್ಠೆಯಿಂದ ನೀವೆಲ್ಲಾ ತರಗತಿಗಳನ್ನು ಬಳಸಿಕೊಂಡು ಮುಂದೆ ಪ್ರಾಧ್ಯಾಪಕರಾಗಿ ದೇಶಕ್ಕೆ ಉತ್ತಮ ಯುವಕರನ್ನು ನೀಡಿ ಎಂದರು.

ಪ್ರಾಧ್ಯಾಪಕರಿಗೆ ವಿದ್ಯಾರ್ಥಿಗಳೇ ತಮ್ಮ ಮಕ್ಕಳಾಗಿರುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಪ್ರಾಧ್ಯಾಪಕರಿಗೆ ಗೌರವ ನೀಡಬೇಕು. ನಮ್ಮ ನಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಿಮ್ಮ ಓದು ನಿರಂತರವಾಗಿರಲಿ. ದೇಶದ ಭವಿಷ್ಯ

ನಿರ್ಮಾಣ ನಿಮ್ಮ ಕೈಯಲ್ಲಿದೆ ಎಂದು ಅವರು ಹೇಳಿದರು.

ರಾಜ್ಯ ಮುಕ್ತ ವಿವಿ ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ, ಅಧ್ಯಯನ ಕೇಂದ್ರದ ಡೀನ್‌ ಪ್ರೊ. ರಮಾನಾಥಂ ನಾಯ್ಡು, ಕುಲಪತಿಗಳ ವಿಶೇಷಾಧಿಕಾರಿ ಮಹದೇವ್‌, ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಇದ್ದರು.

----

ಕೋಟ್...

ಯುಜಿಸಿ-ನೆಟ್‌, ಕೆ-ಸೆಟ್‌ ತರಬೇತಿಗೆ 230 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಇಲ್ಲಿನ ಕ್ಯಾಂಪಸ್‌ ಸೌಕರ್ಯಗಳನ್ನು ಬಳಸಿಕೊಳ್ಳಿ. ನಿಮ್ಮ ನಿಮ್ಮ ವಿಷಯಗಳ ಅಧ್ಯಯನ ವಿಭಾಗಕ್ಕೆ ಭೇಟಿ ನೀಡಿ, ಅಲ್ಲಿನ ಅಧ್ಯಾಪಕರ ನೆರವು ಪಡೆದುಕೊಳ್ಳಿ.

- ಪ್ರೊ.ಕೆ.ಬಿ. ಪ್ರವೀಣ, ಕುಲಸಚಿವ, ರಾಜ್ಯ ಮುಕ್ತ ವಿವಿ