- ಇಂಡಿಗನತ್ತ ಗ್ರಾಮದ ಆನೆಗಾಡು ಸೋಲಿಗರ ಹಾಡಿಯಲ್ಲಿ ಪಂಪ್ಸೆಟ್ ಕೊರತೆ । ರಿಪೇರಿಗೆ ಅಧಿಕಾರಿಗಳ ನಿರ್ಲಕ್ಷ್ಯ
- ಕಾಡಿನ ಮಧ್ಯೆ ಕಿಲೋಮೀಟರ್ಗಟ್ಟಲೆ ನಡೆದು ಕುಡಿಯುವ ನೀರು ಸಂಗ್ರಹ । ಕಾಡು ಪ್ರಾಣಿಗಳ ಭೀತಿ ಮಧ್ಯೆ ಸಾಹಸ---
ಕನ್ನಡಪ್ರಭ ವಾರ್ತೆ ಹನೂರುಕಳೆದ ಲೋಕಸಭೆ ಚುನಾವಣೆಯಲ್ಲಿ ಮೂಲಭೂತ ಸೌಕರ್ಯಕ್ಕಾಗಿ ಮತಯಂತ್ರವನ್ನೇ ಧ್ವಂಸ ಮಾಡಿದ್ದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಇಂಡಿಗನತ್ತ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಗ್ರಾಮದಲ್ಲಿರುವ ಸೋಲಾರ್ ಪಂಪ್ಸೆಟ್ಗಳೆಲ್ಲವೂ ಕೆಟ್ಟ ನಿಂತಿದ್ದು, ಗ್ರಾಮದ ಜನರು ಕಿಲೋಮೀಟರ್ಗಟ್ಟಲೆ ನಡೆದುಕೊಂಡು ಹೋಗಿ, ಕಲುಷಿತ ನೀರು ಸಂಗ್ರಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂಡಿಗನತ್ತ ಗ್ರಾಮದ ಬಳಿಯ ಆನೆಗಾಡು ಸೋಲಿಗರ ಹಾಡಿಯಲ್ಲಿ 20ಕ್ಕೂ ಹೆಚ್ಚು ಮನೆಗಳಿದ್ದು, ಕೊಳವೆಬಾವಿಗಳಿಗೆ ಅಳವಡಿಸಿದ್ದ ಸೋಲಾರ್ ಪಂಪ್ಸೆಟ್ಗಳು ಕೆಟ್ಟುನಿಂತಿವೆ. ಪರಿಣಾಮ ನೂರಾರು ಜನರಿಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಪಂಪ್ಸೆಟ್ ದುರಸ್ತಿಗೊಳಿಸುವಂತೆ ಗ್ರಾಮ ಪಂಚಾಯ್ತಿಗೆ 7 ತಿಂಗಳಿನಿಂದ ದೂರಿತ್ತರೂ ರಿಪೇರಿ ಮಾಡಲು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಜನರ ದಾಹ ಹೇಳತೀರದಾಗಿದೆ.
1 ಕಿ.ಮಿ. ನಡೆದು ನೀರು ಸಂಗ್ರಹ:
ಪಂಪ್ಸೆಟ್ ಇಲ್ಲದ ಕಾರಣ ಹಾಡಿಯಿಂದ 1 ಕಿ.ಮೀ ದೂರವಿರುವ ಕೆಬ್ಬೆಗೆರೆ ತೊರೆಯಿಂದ ಗ್ರಾಮಸ್ಥರು ನೀರು ಸಂಗ್ರಹಿಸುತ್ತಿದ್ದಾರೆ. ಈ ತೊರೆಯಲ್ಲಿ ಕಾಡಾನೆ ಸೇರಿ ವನ್ಯಮೃಗಗಳು ನೀರು ಕುಡಿಯಲು ಬರುವುದರಿಂದ ಗ್ರಾಮಸ್ಥರಲ್ಲಿ ಭೀತಿ ಉಮ್ಮಳಿಸಿದೆ. ಜೊತೆಗೆ ಇಲ್ಲಿ ಸಿಗುವ ಕಲುಷಿತ ನೀರಿನಿಂದ ಆರೋಗ್ಯ ಹದಗೆಟ್ಟರೆ ಯಾರು ಹೊಣೆಯೆಂದು ಗ್ರಾಮಸ್ಥ ನಿವಾಸಿಗಳಾದ ಕಾಳೇಗೌಡ, ಮಣಿ, ಚಿಕ್ಕಣ್ಣ, ಮಾರಯ್ಯ ಪ್ರಶ್ನಿಸಿದ್ದಾರೆ.ಈ ಸಂಬಂಧ ಪ್ರತಿಕ್ರಿಯಿಸಿರುವ ಮಲೆ ಮಹದೇಶ್ವರ ಗ್ರಾಮ ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿ ಕಿರಣ್, ‘ಪಂಪ್ಸೆಟ್ ಶೀಘ್ರದಲ್ಲಿಯೇ ರಿಪೇರಿ ಮಾಡಲಾಗುವುದು. ಸಮಸ್ಯೆ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು’ ಎಂದು ತಿಳಿಸಿದರು.
---22ಸಿಎಚ್ಎನ್11ಆನೆಗಾಡು ಸೋಲಿಗರ ಹಾಡಿಯಲ್ಲಿ ಕೆಬ್ಬೆಗೆರೆ ತೊರೆಯಲ್ಲಿ ನೀರು ಸಂಗ್ರಹ ಮಾಡುತ್ತಿರುವುದು.--22ಸಿಎಚ್ಎನ್12ಕೆಬ್ಬೆಗೆರೆ ತೊರೆಯಿಂದ ನೀರು ತರುತ್ತಿರುವ ಮಹಿಳೆಯರು.--