ವಿಜ್ಞಾನ ಲೋಕದಲ್ಲಿ ನಿತ್ಯಕುಲಪತಿಯಾಗಿ ಉಳಿದ ಪ್ರೊ.ರಂಗಪ್ಪ

KannadaprabhaNewsNetwork | Published : Jun 3, 2025 12:24 AM
ಮೈಸೂರು: ಪ್ರೊ.ಕೆ.ಎಸ್. ರಂಗಪ್ಪ ಅವರು ವಿಜ್ಞಾನ ಲೋಕದಲ್ಲಿ ನಿತ್ಯಕುಲಪತಿಯಾಗಿ ಉಳಿದಿದ್ದಾರೆ ಎಂದು ವಿಶ್ರಾಂತ ಕುಲಪತಿ ಪ್ರೊ. ಮಹದೇವ ಬಣ್ಣಿಸಿದರು.

ಮೈಸೂರು: ಪ್ರೊ.ಕೆ.ಎಸ್. ರಂಗಪ್ಪ ಅವರು ವಿಜ್ಞಾನ ಲೋಕದಲ್ಲಿ ನಿತ್ಯಕುಲಪತಿಯಾಗಿ ಉಳಿದಿದ್ದಾರೆ ಎಂದು ವಿಶ್ರಾಂತ ಕುಲಪತಿ ಪ್ರೊ. ಮಹದೇವ ಬಣ್ಣಿಸಿದರು.ಮೈಸೂರು ವಿಶ್ವವಿದ್ಯಾನಿಲಯ ಹಿರಿಯ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅವರ 70ನೇ ವರ್ಷದ ಜನ್ಮ ದಿನಾಚರಣೆ ಹಿನ್ನಲೆಯಲ್ಲಿ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರು ವಿವಿ ಹಾಗೂ ರಾಜ್ಯ ಮುಕ್ತ ವಿವಿಗೆ ಪ್ರೊ. ರಂಗಪ್ಪ ಅವರ ಕೊಡುಗೆ ಅಪಾರ ಎಂದರು.ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನು ಕಂಡರೆ ಅತೀವ ಕಾಳಜಿಯಿಂದ ಮುನ್ನಡೆಸುತ್ತಿದ್ದ ಅವರ ಗುಣ ಮುಂದಿನ ಪೀಳಿಗೆ ಅಧಿಕಾರಿಗಳಿಗೆ ಮಾರ್ಗದರ್ಶನ. ರಂಗಪ್ಪ ಅವರು ಮೈಸೂರು ವಿವಿಯ ಕುಲಪತಿಗಳಾಗಿದ್ದ ಸಮಯದಲ್ಲಿ ಮೈಸೂರು ವಿವಿಗೆ ಹೊಸ ವಿನ್ಯಾಸವನ್ನೇ ನೀಡಿದರು ಎಂದು ಅವರು ಹೇಳಿದರು.ರಂಗಪ್ಪ ಅವರ ಪರಂಪರೆ ಕೃಷಿ ಕುಟುಂಬದ ಹಿನ್ನೆಲೆ ಆಗಿರುವುದರಿಂದ ಸಮಾಜದಲ್ಲಿ ಇಷ್ಟು ಎತ್ತರಕ್ಕೆ ಏರಲು ಸಾಧ್ಯವಾಯಿತು. ಕರ್ನಾಟಕದಲ್ಲಿ ನಿತ್ಯ ಸಚಿವರು ಎಂದು ಕೆ.ವಿ. ಶಂಕರೇಗೌಡರನ್ನು ಕರೆದರೆ, ವಿಜ್ಞಾನ ಲೋಕದಲ್ಲಿ ನಿತ್ಯ ಕುಲಪತಿಗಳು ಎಂದು ಪ್ರೊ. ರಂಗಪ್ಪ ಅವರನ್ನು ಕರೆಯುತ್ತೇವೆ ಎಂದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್ ಮಾತನಾಡಿ, ನಮ್ಮ ವಿದ್ಯಾರ್ಥಿ ಜೀವನದಿಂದಲೂ ರಂಗಪ್ಪ ಅವರನ್ನು ನಾವು ಹತ್ತಿರದಿಂದ ನೋಡಿದ್ದೇವೆ. ಅವರ ತಾಳ್ಮೆ, ಸಮಯಪ್ರಜ್ಞೆ ಮತ್ತು ಅಪಾರವಾದ ಪಾಂಡಿತ್ಯ ಅವರನ್ನು ಎತ್ತರಕ್ಕೆ ಕೊಂಡೊಯ್ದಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಹಳ್ಳಿ ಪ್ರತಿಭೆ. ರಸಾಯನಶಾಸ್ತ್ರ ವಿಷಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕೆಲವೇ ವಿಜ್ಞಾನಿಗಳಲ್ಲಿ ರಂಗಪ್ಪ ಕೂಡ ಒಬ್ಬರು ಎಂದು ತಿಳಿಸಿದರು.ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಜಿಲ್ಲಾಧ್ಯಕ್ಷ ಡಾ.ವೈ.ಡಿ. ರಾಜಣ್ಣ ಮಾತನಾಡಿ, ರಂಗಪ್ಪ ಅವರು ಸಾವಿರಾರು ಜನರು ಜೀವನ ಮಾಡಲು ದಾರಿ ಮಾಡಿಕೊಟ್ಟಿದ್ದಾರೆ. ಅವರು ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವುದು ನಮಗೆ ಹೆಮ್ಮೆ ತರುವ ವಿಚಾರ. ಇಂತಹ ಮೇರು ವ್ಯಕ್ತಿತ್ವವನ್ನು ಹೊಂದಿರುವ ಅವರಿಗೆ ರಾಷ್ಟ್ರಮಟ್ಟದ ಗೌರವ ಸಲ್ಲಬೇಕು ಎಂದು ಆಶಿಸಿದರು.ಅಭಿನಂದನೆ ಸ್ವೀಕರಿಸಿದ ಪ್ರೊ.ಕೆ.ಎಸ್. ರಂಗಪ್ಪ ಮಾತನಾಡಿ, ನನ್ನ ಸೇವಾ ಅವಧಿಯಲ್ಲಿ ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಕೆಲವರು ನನ್ನನ್ನು ದೂಷಿಸುವುದು ಉಂಟು. ವಿವಿ ಹೆಸರು ಹಾಳು ಮಾಡಲು ಹಲವರು ಪ್ರಯತ್ನ ಮಾಡಿದ್ದರು. ಕೊನೆಗೆ ಅದು ಈಡೇರಲಿಲ್ಲ. ಯಾಕೆಂದರೆ ನಾನು ಯಾರಿಗೂ ಹೆದರುವುದಿಲ್ಲ. ಬಡತದಲ್ಲಿ ಇರುವವರಿಗೆ ಅವಕಾಶಗಳು ಲಭಿಸಬೇಕು. ನಾನು ಕೂಡ ಅದೇ ಹಾದಿಯಲ್ಲಿ ಬಂದಿದ್ದೇನೆ ಎಂದರು.ನಾನು ಒಳ್ಳೆಯ ಕೆಲಸಗಳನ್ನು ಮಾಡಿರುವೆ ಎಂಬ ಆತ್ಮ ತೃಪ್ತಿ ಇದೆ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಕೆಲಸ ಮಾಡಬೇಕು. ದಾರಿ ಇಲ್ಲದವರಿಗೆ ದಾರಿ ತೋರುವುದೇ ನಮ್ಮ ದೊಡ್ಡ ಜವಾಬ್ದಾರಿ ಎಂದು ಅವರು ಹೇಳಿದರು.ಇದೇ ವೇಳೆ ಮೈಸೂರು ವಿವಿಯಲ್ಲಿ ಪ್ರೊ. ರಂಗಪ್ಪ ಅವರ ಹೆಸರಿನ ಸಮಾಜ ಅಧ್ಯಯನ ವಿಷಯದಲ್ಲಿರುವ ದತ್ತಿ ಚಿನ್ನದ ಪದಕವನ್ನು ಪಡೆದ ಗೀತಾಂಜಲಿ ಎಲ್. ಹರಿಯಾಳ್ ಅವರನ್ನು ಸನ್ಮಾನಿಸಲಾಯಿತು. ವಿಶ್ವಮಾನವ ಮೈಸೂರು ವಿವಿ ನೌಕರರ ವೇದಿಕೆ ಅಧ್ಯಕ್ಷ ವಾಸುದೇವ್, ಕರ್ನಾಟಕ ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಎನ್. ಭಾಸ್ಕರ್, ವಿವಿ ಹಿರಿಯ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳಾದ ಚಿಕ್ಕನಾಯಕನಹಳ್ಳಿ ಮಹೇಶ್, ಎಡತಲೆ ಮಂಜುನಾಥ್, ಮಳಿಯೂರ್ ಸಂತೋಷ್, ಸಕಳ್ಳಿ ಬಸವರಾಜ್, ಎಂ. ಶಿವಪ್ರಸಾದ್, ಕೋಟೆ ಮಲ್ಲೇಶ್, ಕಾಂತರಾಜ್, ತಿಮ್ಮಯ್ಯ, ಮಹಾದೇವ್, ನಂಜುಂಡಮೂರ್ತಿ, ಸಿದ್ದರಾಮ, ಜಮೀರ್, ಪುಟ್ಟಸ್ವಾಮಿ, ಸಿದ್ದರಾಜು, ಪ್ರೊ. ಬಸವಗೌಡ, ವಕೀಲರಾದ ಪ್ರೇಮ್, ಮನೋನ್ಮಣಿ, ಮೀನಾಕ್ಷಿ, ಮಂಜುನಾಥ್ ಮೊದಲಾದವರು ಇದ್ದರು.