ಬದುಕಿನ ಬಂಡಿ ಸಾಗಲು ಜಗತ್ತಿನ ವಿವಿಧ ಭಾಷೆಗಳ ಪ್ರಾವಿಣ್ಯತೆ ಅಗತ್ಯ: ಪ್ರೊ.ಜೆ.ಕೋಮ್ ಡಿ ಸೆಲ್ವ

KannadaprabhaNewsNetwork | Published : Mar 29, 2025 12:38 AM

ಸಾರಾಂಶ

ಇಂದು ಇಂಗ್ಲೀಷ್ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಭಾಷೆಯಾಗಿ ಜಗತ್ತಿನ ಎಲ್ಲಾ ಭಾಗಗಳಲ್ಲಿಯೂ ಪ್ರತಿಧ್ವನಿತವಾಗಿದೆ. ಶೈಕ್ಷಣಿಕ ರಂಗಕ್ಕೂ ಉದ್ಯೋಗ ರಂಗ, ವ್ಯಾಪಾರ ಸೇರಿದಎಲ್ಲಾ ಕ್ಷೇತ್ರಗಳಿಗೂ ಇಂಗ್ಲೀಷ್ ಭಾಷೆ ಅನಿವಾರ್ಯವಾಗಿದೆ. ಭಾಷೆಯಲ್ಲಿ ಸ್ವಚ್ಛತೆ ಇರಬೇಕು. ಪದಗಳ ಪ್ರಯೋಗ ನೈಪುಣ್ಯತೆಯಿಂದ ಕೂಡಿರಬೇಕು. ಭಾಷೆಗೊಂದು ಆಕೃತಿ ಇದೆ.

ಕನ್ನಡಪ್ರಭ ವಾರ್ತೆ ಹಲಗೂರು

ಗ್ಲೋಬಲ್ ಯುಗದಲ್ಲಿ ನಾವು ಸ್ಪರ್ಧೆ ಎದುರಿಸಬೇಕಾದರೆ ಭಾಷೆ ಬಹಳ ಪ್ರಮುಖ ಅಸ್ತ್ರವಾಗಿದೆ. ಮಾತೃಭಾಷೆ ಕೇವಲ ನಮ್ಮ ಮನೆ ಅಂಗಳಕ್ಕೆ ಮಾತ್ರ ಸರಿ ಹೊಂದಬಹುದು. ಬದುಕಿನ ಬಂಡಿ ಸಾಗಬೇಕಾದರೆ ಜಗತ್ತಿನ ವಿವಿಧ ಭಾಷೆಗಳ ಪ್ರಾವಣ್ಯತೆ ಪಡೆದುಕೊಳ್ಳಬೇಕಾಗಿದೆ ಎಂದು ಕನಕಪುರ ತಾಲೂಕಿನ ಸಂತೆ ಕೋಡಿಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲ ವಿಭಾಗ ಮುಖ್ಯಸ್ಥರಾದ ಪ್ರೊ.ಜೆ.ಕೋಮ್ ಡಿ.ಸೆಲ್ವ ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಲಗೂರು ನಲ್ಲಿ ನಡೆದ ಆಂಗ್ಲ ವಿಭಾಗ ಮತ್ತು ಐಕ್ಯುಎಸಿ ಸಹಯೋಗದೊಂದಿಗೆ ನಡೆದ ಎಫ್ ಡಿಪಿ ಕಾರ್ಯಕ್ರಮದಲ್ಲಿ ಇಂಗ್ಲೀಷ್ ಭಾಷಾ ಪ್ರಾಮುಖ್ಯತೆ ಮತ್ತು ಅನಿವಾರ್ಯತೆ ಬಗ್ಗೆ ಸಂಪನ್ಮೂಲ ವ್ಯಕ್ತಿ ಯಾಗಿ ಭಾಗವಹಿಸಿ ಮಾತನಾಡಿದರು.

ಇಂದು ಇಂಗ್ಲೀಷ್ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಭಾಷೆಯಾಗಿ ಜಗತ್ತಿನ ಎಲ್ಲಾ ಭಾಗಗಳಲ್ಲಿಯೂ ಪ್ರತಿಧ್ವನಿತವಾಗಿದೆ. ಶೈಕ್ಷಣಿಕ ರಂಗಕ್ಕೂ ಉದ್ಯೋಗ ರಂಗ, ವ್ಯಾಪಾರ ಸೇರಿದಎಲ್ಲಾ ಕ್ಷೇತ್ರಗಳಿಗೂ ಇಂಗ್ಲೀಷ್ ಭಾಷೆ ಅನಿವಾರ್ಯವಾಗಿದೆ. ಭಾಷೆಯಲ್ಲಿ ಸ್ವಚ್ಛತೆ ಇರಬೇಕು. ಪದಗಳ ಪ್ರಯೋಗ ನೈಪುಣ್ಯತೆಯಿಂದ ಕೂಡಿರಬೇಕು. ಭಾಷೆಗೊಂದು ಆಕೃತಿ ಇದೆ. ಸ್ಟ್ರಕ್ಚರ್ ಇಲ್ಲದೆ ಭಾಷೆಯ ವಿನಿಮಯ ಇಲ್ಲ ಎಂಬುದನ್ನು ಮನಮುಟ್ಟುವಂತೆ ತಿಳಿದುಕೊಳ್ಳಬೇಕು ಎಂದರು.

ಪ್ರಾಂಶುಪಾಲ ಆಲಂಗೂರ್ ಮಂಜುನಾಥ್ ಮಾತನಾಡಿ, ಮಾನವ ತನ್ನ ಭಾವನೆಗಳನ್ನು ಬಯಕೆಗಳನ್ನು ವ್ಯಕ್ತಪಡಿಸುವ ಬಹುದೊಡ್ಡ ಸಾಧನವೆಂದರೆ ಭಾಷೆ. ಅದು ವರವಿದ್ದಂತೆ. ಇಂದಿನ ಇಂಗ್ಲಿಷ್ ಭಾಷೆ ಅನಿವಾರ್ಯತೆ ಮತ್ತು ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು.

ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಧಾ ಬಿದರಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಇಂಗ್ಲೀಷ್ ಕಠಿಣವಾದರೂ ಭಾಷೆಯನ್ನು ಕಲಿಯುವ ಆಸಕ್ತಿ ನಿಮ್ಮಲ್ಲಿ ಬೆಳೆದಾಗ ಈ ಭಾಷೆಯೂ ಸಹ ಕಡಲೆಯಾಗುತ್ತದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಆಂಗ್ಲ ವಿಭಾಗ ಮುಖ್ಯಸ್ಥ ಪ್ರೊ.ಮಹೇಶ್ ಬಾಬು, ಡಾ.ಸೀಮಾ ಕೌಸರ್, ಪ್ರೊ.ಗುರುರಾಜ್ ಮಾತನಾಡಿದರು. ಕುಮಾರಸ್ವಾಮಿ , ಡಾಟಾ ಆಪರೇಟರ್ ಶ್ರೀಧರ್ , ಅತಿಥಿ ಉಪನ್ಯಾಸಕರಾದ ಕನ್ನಡ ವಿಭಾಗದ ಮೂರ್ತಿ, ಕ್ರೀಡಾ ವಿಭಾಗದ ಚಂದ್ರು, ವಾಣಿಜ್ಯ ವಿಭಾಗದ ಉಮೇಶ್ ಮತ್ತು ರಘು ರವರು, ವಿನುತಾ, ದಿವ್ಯ ಸೇರಿದಂತೆ ಇತರರು ಇದ್ದರು.

Share this article