ಕನ್ನಡಪ್ರಭ ವಾರ್ತೆ ಹಳಿಯಾಳ
ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯವರು ಗ್ರಾಮೀಣ ಯುವಜನರಿಗಾಗಿ ಆಯೋಜಿಸಿದ್ದ 12 ದಿನಗಳ ಹೈನುಗಾರಿಕೆ ಮತ್ತು ಗೊಬ್ಬರ ತಯಾರಿಕಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಕೃಷಿ ಇದೊಂದು ಬೃಹತ್ ಕ್ಷೇತ್ರವಾಗಿದ್ದು, ಕೃಷಿ ಹಾಗೂ ಕೃಷಿಪೂರಕ ಚಟುವಟಿಕೆ ಗ್ರಾಮೀಣ ಆರ್ಥಿಕತೆ ಬಲಪಡಿಸುವಲ್ಲಿ ಹಾಗೂ ಉದ್ಯೋಗ ಸೃಷ್ಟಿಸುವಲ್ಲಿ ಮುಖ್ಯಪಾತ್ರವಹಿಸುತ್ತವೆ. ನಮ್ಮ ಯುವಕರು ಭವಿಷ್ಯದಲ್ಲಿ ವೈದ್ಯರಾಗುವ, ಎಂಜಿನಿಯರ್, ಸರ್ಕಾರಿ ಸೇವೆ ಮಾಡುವ ಗುರಿ ಹೊಂದುತ್ತಾರೆಯೇ ವಿನಃ ಯಾರೊಬ್ಬರೂ ನಾನು ಕೃಷಿಕನಾಗುತ್ತೇನೆ, ರೈತನಾಗುತ್ತೇನೆ ಎಂದು ಹೇಳಲು ಮುಂದೆ ಬರುವುದಿಲ್ಲ ಎಂದು ಖೇದ ವ್ಯಕ್ತಪಡಿಸಿದರು. ಕೃಷಿಯಿಂದ ವಿಮುಖರಾಗುತ್ತಿರುವ ನಮ್ಮ ಯುವಪೀಳಿಗೆಯನ್ನು ಮತ್ತೆ ಕೃಷಿಯತ್ತ ಕರೆದುಕೊಂಡು ಹೋಗುವ ಕಾರ್ಯವಾಗಬೇಕು ಎಂದರು.ಬೆಳಗಾವಿಯ ಕೆ. ಎಗ್ರೋ ಇಂಡಸ್ಟ್ರಿಸ್ ಪ್ರಮುಖರಾದ ಅಶೋಕ ಗಡ್ಹೆ ಮಾತನಾಡಿ, ಆಧುನಿಕ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳ ಬಳಕೆ, ಸಾವಯವ ಕೃಷಿಯ ಮಹತ್ವ, ಎರೆಹುಳ ಗೊಬ್ಬರ ಉತ್ಪಾದನೆಯ ವೈಜ್ಞಾನಿಕ ವಿಧಾನಗಳ ಬಗ್ಗೆ ಹಾಗೂ ಮಣ್ಣಿನ ಫಲವತ್ತತೆ ಹೆಚ್ಚಿಸುವ ತಂತ್ರಗಳು ಹಾಗೂ ಕೃಷಿ ಆಧಾರಿತ ಉದ್ಯಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಆರ್ಸೆಟಿ ಸಂಸ್ಥೆಯ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ ಮಾತನಾಡಿ, ಹೈನುಗಾರಿಕೆಯ ವೈಜ್ಞಾನಿಕ ನಿರ್ವಹಣೆ, ರೋಗಗಳ ತಡೆ ಮತ್ತು ನಿಯಂತ್ರಣ, ಸರ್ಕಾರಿ ಯೋಜನೆಗಳ ಮಾಹಿತಿ, ಎರೆಹುಳ ಗೊಬ್ಬರ ತಯಾರಿಕೆ, ಅದರ ನಿರ್ವಹಣೆ ಹಾಗೂ ಕೃಷಿ ಆಧಾರಿತ ಸ್ವಯಂ ಉದ್ಯೋಗವನ್ನು ಹೇಗೆ ಪ್ರಾರಂಭಿಸಬೇಕೆಂಬುದರ ಬಗ್ಗೆ ಪ್ರಾಯೋಗಿಕವಾಗಿ ತರಬೇತಿ ನೀಡಲಾಯಿತು ಎಂದು ತಿಳಿಸಿದರು.