ಸ್ವ ಉದ್ಯೋಗದಿಂದ ವಿಕಸಿತ ಭಾರತ ನಿರ್ಮಾಣ: ಗಂಗಾಧರ್ ನಾಯ್ಕ್

KannadaprabhaNewsNetwork | Published : Aug 29, 2024 12:53 AM

ಸಾರಾಂಶ

ಮಡಿಕೇರಿ ಗಾಂಧಿ ಭವನದಲ್ಲಿ ಖಾದಿ ಗ್ರಾಮೋದ್ಯೋಗ ಆಯೋಗ, ಕರ್ನಾಟಕ ಸರ್ಕಾರ ಮತ್ತು ಮೈಸೂರಿನ ಸರ್ವೋದಯ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ಪ್ರಧಾನಮಂತ್ರಿ ಅಉದ್ಯೋಗ ಸೃಜನ ಅರಿವು ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸ್ವಂತ ಉದ್ಯಮ ಆರಂಭಿಸುವ ಮೂಲಕ ಜನತೆಯ ಆರ್ಥಿಕ ಸ್ಥಿತಿ ಸುಧಾರಣೆಯಾದರೆ ವಿಕಸಿತ ಭಾರತ ನಿರ್ಮಾಣ ಸಾಧ್ಯ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಿ.ಗಂಗಾಧರ್ ನಾಯ್ಕ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಗಾಂಧಿ ಭವನದಲ್ಲಿ ಖಾದಿ ಗ್ರಾಮೋದ್ಯೋಗ ಆಯೋಗ, ಕರ್ನಾಟಕ ಸರ್ಕಾರ ಮತ್ತು ಮೈಸೂರಿನ ಸರ್ವೋದಯ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ನಡೆದ ಪ್ರಧಾನಮಂತ್ರಿ ಅಉದ್ಯೋಗ ಸೃಜನ ಅರಿವು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರದ ಹಲವು ಯೋಜನೆಗಳ ಸೌಲಭ್ಯ ಪಡೆಯಲು ಪ್ರತಿಯೊಬ್ಬರೂ ಮುಂದಾಗಬೇಕು. ಸ್ವಉದ್ಯೋಗ ಕೈಗೊಳ್ಳುವುದರಿಂದ ದೇಶಕ್ಕೂ ಲಾಭವಿದೆ, ದೇಶದ ಆರ್ಥಿಕ ಪ್ರಗತಿಗೂ ಕಾರಣವಾಗುತ್ತದೆ. ಬ್ಯಾಂಕ್ ಜೊತೆಗೆ ವ್ಯವಹಾರ ಮಾಡುವಾಗ ಆರ್ಥಿಕ ಶಿಸ್ತು ಮುಖ್ಯ, ಸ್ವ ಉದ್ಯೋಗ ಕೈಗೊಳ್ಳುವುದರಿಂದ ಉದ್ಯಮಿಯಾಗಿ ಬೆಳೆದು ಆರ್ಥಿಕವಾಗಿ ಪ್ರಗತಿ ಹೊಂದಬಹುದು. ಪ್ರತಿಯೊಬ್ಬರೂ ಸರ್ಕಾರದ ಸೌಲಭ್ಯ ಪಡೆದು ಸ್ವಾವಲಂಬಿಗಳಾಗಬೇಕೆಂದು ಕರೆ ನೀಡಿದರು.

ಖಾದಿ, ಗ್ರಾಮೋದ್ಯೋಗ ಇಲಾಖೆ ಅಧಿಕಾರಿ ರಾಮಕೃಷ್ಣ ಆಚಾರ್ ಮಾತನಾಡಿ, ಸೇವಾ ವಲಯ ಮತ್ತು ಉತ್ಪಾದನಾ ವಲಯ ಎರಡು ವಿಧದಲ್ಲಿ ಸಾಲ ಸೌಲಭ್ಯ ನೀಡಲಾಗುವುದು. ಪ್ರಧಾನಮಂತ್ರಿ ಸ್ವಉದ್ಯೋಗ ಯೋಜನೆಯಿಂದ ಗ್ರಾಮೀಣ ಮತ್ತು ನಗರ ಪ್ರದೇಶದ ಜನತೆಗೆ ಅನುಕೂಲವಾಗಲಿದೆ ಎಂದರು.

ಬೆಂಗಳೂರಿನ ಖಾದಿ, ಗ್ರಾಮೋದ್ಯೋಗ ಇಲಾಖೆ ಸಹಾಯಕ ನಿರ್ದೇಶಕ ವಿ.ಆರ್.ಮರಾಠಿ ಮಾತನಾಡಿ, ಪ್ರಧಾನಮಂತ್ರಿ ಸ್ವ ಉದ್ಯೋಗ ಯೋಜನೆಯ ಸೌಲಭ್ಯ ಕೊಡಗು ಜಿಲ್ಲೆಯಲ್ಲಿ ಮತ್ತಷ್ಟು ಪ್ರಗತಿ ಸಾಧಿಸಬೇಕು. ಸ್ವಂತ ಉದ್ಯೋಗ ಮಾಡುವ ಕನಸು ಇದ್ದವರಿಗೆ ಪ್ರಧಾನಮಂತ್ರಿ ಸ್ವ ಉದ್ಯೋಗ ಯೋಜನೆಯಿಂದ ಹಲವು ಪ್ರಯೋಜನವಾಗಲಿದೆ. ಅರ್ಜಿ ಸಲ್ಲಿಸುವ ಮೂಲಕ ಸೌಲಭ್ಯಗಳ ಸಹಾಯ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ನಿವೃತ್ತ ಬ್ಯಾಂಕ್ ಅಧಿಕಾರಿ ಹಾಗೂ ಸೇವಾ ಭಾರತಿ ಕಾರ್ಯದರ್ಶಿ ಡಿ.ಎಚ್.ತಮ್ಮಪ್ಪ ಮಾತನಾಡಿ, ಕನಸಿದ್ದರೆ ಸಾಧನೆ ಮಾಡಲು ಸಾಧ್ಯ, ಜೊತೆಗೆ ಕೌಶಲ್ಯತೆಯೂ ಇರಬೇಕು. ಕನಸು ಮತ್ತು ಕೌಶಲ್ಯತೆ ಇದ್ದಾಗ ಬ್ಯಾಂಕುಗಳು ಸಾಲ ಸೌಲಭ್ಯ ನೀಡುತ್ತವೆ. ಪ್ರಾಮಾಣಿಕತೆ ಪ್ರತಿಯೊಬ್ಬರಿಗೂ ಇರಬೇಕು ಎಂದು ಅಭಿಪ್ರಾಯಪಟ್ಟರು.

ಸರ್ವೋದಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜೇಶ್ ಮಾತನಾಡಿದರು. ಪ್ರಮುಖರಾದ ಮಹಾದೇವ್ ಇದ್ದರು.

ಜಿಲ್ಲೆಯ ವಿವಿಧ ಭಾಗಗಳಿಂದ ಆಸಕ್ತ ಫಲಾನುಭವಿಗಳು ಆಗಮಿಸಿದ್ದರು. ನಾಗರತ್ನ ಕಾರ್ಯಕ್ರಮ ನಿರೂಪಿಸಿದರು. ದಿವ್ಯ ಪ್ರಾರ್ಥಿಸಿದರು. ಟ್ರಸ್ಟ್ ನಿರ್ದೇಶಕಿ ಭಾಗ್ಯ ರಾಜೇಶ್ ಸ್ವಾಗತಿಸಿದರು, ರಾಜೇಶ್ ವಂದಿಸಿದರು.

Share this article