ಪ್ರಗತಿಪರರ ಒಕ್ಕೂಟ ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ಮನವಿ
ನಗರದ ರೈಲು ನಿಲ್ದಾಣಕ್ಕೆ ಐತಿಹಾಸಿಕ ವೀರಪುರುಷ, ಪರನಾರಿ ಸಹೋದರ, ಗಂಡುಗಲಿ ಕುಮಾರರಾಮನ ಹೆಸರಿಡಲು ಒತ್ತಾಯಿಸಿ ಪ್ರಗತಿಪರರ ಒಕ್ಕೂಟ ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ಮನವಿ ಸಲ್ಲಿಸಿತು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಮಾತನಾಡಿ, ಐತಿಹಾಸಿಕ, ಸಾಂಸ್ಕೃತಿಕವಾಗಿ, ಕನ್ನಡವನ್ನು ಕಟ್ಟಿದ ಹೆಗ್ಗಳಿಕೆ ಇರುವ ಮತ್ತು ವಿಜಯನಗರ ಸಾಮ್ರಾಜ್ಯವನ್ನು ಕಟ್ಟುವ ಕುರಿತು ಕನಸು ಕಂಡು ಮತ್ತು ಅದಕ್ಕೆ ಬಲತಂದಿದ್ದ ಕುಮಾರರಾಮನ ಹೆಸರು ನಾಮಕರಣ ಮಾಡುವಂತೆ ಮನವಿ ಮಾಡಿದರು.ಹೋರಾಟಗಾರ ಬಸವರಾಜ ಶೀಲವಂತರ ಮಾತನಾಡಿ, ಪ್ರಸ್ತುತ ಎರಡು ಹೆಸರುಗಳು ಚಾಲ್ತಿಯಲ್ಲಿದ್ದು, ಅಶೋಕ ವಿಶ್ವಮಾನ್ಯನಾಗಿದ್ದು ಬೇರೆ ಕಡೆಗೆ ಆತನ ಹೆಸರನ್ನು ಇಡಲು ಅವಕಾಶಗಳಿವೆ, ಆದರೆ ಎಂದೂ ಮರೆಯದ ಅದ್ಭುತ ಕೆಲಸಗಳನ್ನು ಮಾಡಿದ, ಕನ್ನಡದ ಗಂಡುಗಲಿಯಾದ ಕುಮಾರ ರಾಮನ ಹೆಸರನ್ನೇ ಇಡಬೇಕು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಂಸದ ರಾಜಶೇಖರ ಹಿಟ್ನಾಳ, ಸರ್ವರ ಅಭಿಪ್ರಾಯ ಪಡೆದು ಒಮ್ಮತದಿಂದ ಒಂದೇ ಹೆಸರನ್ನು ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಕಳಿಸುವ ಹಾಗೆ ಮಾಡಬೇಕು, ಇದೊಂದು ಸಂಕೀರ್ಣ ಕೆಲಸ, ಸುದೀರ್ಘ ಪತ್ರ ವ್ಯವಹಾರಗಳನ್ನು ಹೊಂದಿರುವ ಪ್ರಕ್ರಿಯೆಯಾಗಿದೆ ಎಂದರು.
ರೈಲ್ವೆ ಜನಪರ ಹೋರಾಟ ಸಮಿತಿ ಅಧ್ಯಕ್ಷ ಎಸ್.ಎ. ಗಫಾರ, ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ರಾಮಣ್ಣ ಕಲ್ಲಾನವರ, ಮುಖಂಡರಾದ ಸುಕರಾಜ ತಾಳಕೇರಿ, ಅಂದಾನಪ್ಪ ಬೆಣಕಲ್, ಕೆ.ಬಿ. ಗೋನಾಳ, ಜ್ಯೋತಿ ಎಂ. ಗೊಂಡಬಾಳ, ನಿಂಗು ಜಿ.ಎಸ್. ಬೆಣಕಲ್, ಎಸ್. ಮಹದೇವಪ್ಪ (ಎನ್ಸಿಎಲ್), ಶಾಂತಯ್ಯ ಅಂಗಡಿ ಮೊದಲಾದವರು ಇದ್ದರು.