ಪೈಗಂಬರ್‌ ಸಂದೇಶಗಳು ಮಾನವ ಕುಲಕ್ಕೆ ಪ್ರಸ್ತುತ

KannadaprabhaNewsNetwork |  
Published : Sep 17, 2024, 12:46 AM IST
ಫೋಟೋ-೧೬ಎಸ್‌ಎಚ್‌ಟಿ೧ಕೆ- ಸೋಮವಾರ ಶಿರಹಟ್ಟಿಯ ಶ್ರೀ ಬಸವೇಶ್ವರ ವೃತ್ತದಲ್ಲಿ ಮಾಲಾರ್ಪಣೆ ಮಾಡಿ ಮುಸ್ಲಿಂ ಬಾಂಧವರು ಪ್ರವಾದಿ ಮಹಮ್ಮದ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಈದ್ ಮಿಲಾದ್ ಹಬ್ಬವನ್ನು ಪರಸ್ಪರ ಶುಭಾಶಯ ಕೋರುತ್ತಾ ಸಂಭ್ರಮದಿಂದ ಆಚರಿಸಿದರು. | Kannada Prabha

ಸಾರಾಂಶ

ಬಕ್ರೀದ್, ರಂಜಾನ್ ಮೊದಲಾದ ಹಬ್ಬಗಳಲ್ಲಿ ಮಾಂಸಹಾರಕ್ಕೆ ಪ್ರಾಧಾನ್ಯತೆ ಇದ್ದರೆ ಈ ಹಬ್ಬದಲ್ಲಿ ಮಾತ್ರ ಸಿಹಿಗೆ ಪ್ರಾಧಾನ್ಯತೆ ಇರುತ್ತದೆ ಎನ್ನುವ ಸಂದೇಶ ತಿಳಿಸಿದರು

ಶಿರಹಟ್ಟಿ: ಪ್ರವಾದಿ ಮಹಮ್ಮದ್ ಪೈಗಂಬರ್ ಜಯಂತಿಯ ಈದ್ ಮಿಲಾದ್ ಹಬ್ಬವನ್ನು ಸೋಮವಾರ ಮುಸ್ಲಿಂ ಬಾಂಧವರು ಪಟ್ಟಣದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಪಟ್ಟಣದಲ್ಲಿ ಶಾಂತಿಯುತವಾಗಿ ಭವ್ಯ ಮೆರವಣಿಗೆ ನಡೆಸಿದರು. ಸಂಗೊಳ್ಳಿ ರಾಯಣ್ಣ ಪ್ರತಿಮೆ, ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ,ಮೆರವಣಿಗೆಯುದ್ದಕ್ಕೂ ಸರ್ವಧರ್ಮಿಯರಿಗೂ ಮುಸ್ಲಿಂ ಬಾಧವರು ಸಿಹಿ ಹಂಚುತ್ತಾ ಭಾವೈಕ್ಯತೆ ಮೆರೆದರು. ಮೆರವಣಿಗೆಯುದ್ದಕ್ಕೂ ಮೌಲಾನಗಳು ಈದ್ ಸಂದೇಶ ಸಾರಿದರು.

ಬಕ್ರೀದ್, ರಂಜಾನ್ ಮೊದಲಾದ ಹಬ್ಬಗಳಲ್ಲಿ ಮಾಂಸಹಾರಕ್ಕೆ ಪ್ರಾಧಾನ್ಯತೆ ಇದ್ದರೆ ಈ ಹಬ್ಬದಲ್ಲಿ ಮಾತ್ರ ಸಿಹಿಗೆ ಪ್ರಾಧಾನ್ಯತೆ ಇರುತ್ತದೆ ಎನ್ನುವ ಸಂದೇಶ ತಿಳಿಸಿದರು.

ನಂತರ ಮೌಲಾನಾ ಮಜರ ಅಲಿಖಾನ ಪಠಾಣ ಈದ್ ಸಂದೇಶ ನೀಡಿ ಮಾತನಾಡಿದರು. ವಿಶ್ವ ಮಾನವತಾ ಸಂದೇಶದ ಮೂಲಕ ಜಗತ್ತಿನ ಸಕಲ ಜೀವಾತ್ಮರಿಗೂ ಘನತೆ ಮತ್ತು ಗೌರವದ ಬದುಕಿನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ ಕೀರ್ತಿ ಪ್ರವಾದಿ ಮಹಮ್ಮದ್ ಪೈಗಂಬರ್ ಗೆ ಸಲ್ಲುತ್ತದೆ ಎಂದು ಹೇಳಿದರು.

ಅಂದಿನ ಅರಬ್‌ ದೇಶಗಳ ಜನರಲ್ಲಿ ಬೇರೂರಿದ್ದ ಹಲವಾರು ಅಂಧ ಮತ್ತು ಅಮಾನವೀಯ ಆಚರಣೆಗಳಿಗೆ ಪೈಗಂಬರ್ ತಮ್ಮ ಜೀವನ ಮತ್ತು ಸಂದೇಶಗಳ ಮೂಲಕ ತಿಲಾಂಜಲಿ ನೀಡಿದರು. ಬಡವರನ್ನು ಜೀವನ ಪೂರ್ತಿ ಗುಲಾಮರನ್ನಾಗಿ ನೇಮಿಸಿಕೊಂಡು ಕಾಡು ಪ್ರಾಣಿಗಳಂತೆ ಅವರನ್ನು ಬಳಸಿಕೊಳ್ಳುತ್ತಿದ್ದ ಶ್ರೀಮಂತರ ಮಾನವ ವಿರೋಧಿ ಚಟುವಟಿಕೆ ನಿಲ್ಲಿಸಿ ಮಾನವೀಯತೆಯ ಪಾಠ ಬೋಧಿಸಿದರು ಎಂದರು.

ಪೈಗಂಬರ ಜೀವನ ಮತ್ತು ಸಂದೇಶಗಳು ಸಮಸ್ತ ಮಾನವ ಸಮುದಾಯಕ್ಕೆ ಪ್ರಸ್ತುತವಾಗಿದ್ದು, ಇಂತಹ ಮಹಾತ್ಮರನ್ನು ಕೇವಲ ಒಂದು ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸದೇ ಪ್ರತಿಯೊಬ್ಬರು ಅವರ ಜೀವನ ಕ್ರಮ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಸ್ಥಳಗಳಲ್ಲಿಯ ಮುಸ್ಲಿಂ ಬಾಂಧವರು ಪರಸ್ಪರ ಈದ್ ಶುಭಾಶಯ ಕೋರಿದರು. ಆಸಾರ ಓಣಿ, ಮಕಾನಗಲ್ಲಿ, ತಳಗೇರಿ ಓಣಿ, ಮೇಗೇರಿ ಓಣಿ, ನಿಂಗಳಾಪೂರ ಸೇರಿದಂತೆ ಮುಸ್ಲಿಂ ಬಾಂಧವರು ಹೆಚ್ಚು ಇರುವ ಬಡಾವಣೆಗಳ ಬೀದಿಗಳಲ್ಲಿ ಹಸಿರು ಬಾವುಟ, ತೋರಣಗಳಿಂದ ಶೃಂಗರಿಸಲ್ಪಟ್ಟಿದ್ದವು. ಪ್ರಮುಖ ವೃತಗಳಲ್ಲಿ ಹಬ್ಬಕ್ಕೆ ಶುಭಾಶಯ ಕೋರುವ ಬ್ಯಾನರ ರಾರಾಜಿಸುತ್ತಿದ್ದವು.

ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ, ಚಾಂದಸಾಬ ಮುಳಗುಂದ, ಅಬ್ಬು ಕುಬುಸದ, ಹಮಿದ ಸನದಿ, ಹಸರತ ಢಾಲಾಯತ, ಮುಸ್ತಾಕ ಚೋರಗಸ್ತಿ, ಮಹಬೂಬ ಮಾಚೇನಹಳ್ಳಿ, ಇಸಾಕ್ ಆದ್ರಳ್ಳಿ, ಶವಕತ ಮನಿಯಾರ, ಬುಡನಶ್ಯಾ ಮಕಾನದಾರ, ಕಾಶೀಮಶಾ ಮಕಾನದಾರ ಸೇರಿ ಅನೇಕರು ಇದ್ದರು.

ನಂತರ ಹಜರತ್ ಮಹಬೂಬ ಸುಬ್ಹಾನಿ ದರ್ಗಾದಿಂದ ಮೆರವಣಿಗೆಯು ಪ್ರಾರಂಭವಾಗಿ ಪ್ರಮುಖ ವೃತ್ತಗಳಲ್ಲಿ ಸಂಚರಿಸಿತು. ಹೊಸ ಬಟ್ಟೆ ಧರಿಸಿದ ಯುವಕರು ಬೈಕ್ ಅಟೋಗಳಲ್ಲಿ ಕಾರುಗಳಿಗೆ,ಟೆಂಪೋಗಳಿಗೆ ಬಾವುಟ ಹಾಕಿಕೊಂಡು ಮುಸ್ಲಿಂ ಬಾಂಧವರಿಂದ ಆಕರ್ಷಕ ಮತ್ತು ಭವ್ಯ ಮೆರವಣಿಗೆ ನಡೆಯಿತು.

ಸಮಾಜದ ಹಿರಿಯರು, ಯುವಕರು, ಚಿಕ್ಕಮಕ್ಕಳು ಸೇರಿದಂತೆ ಸಾವಿರಾರು ಜನರು ಅತ್ಯಂತ ಉತ್ಸಾಹದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ