ಹಿರೇಹಳ್ಳ‌ದಲ್ಲಿನ ಹೂಳು ತೆರವಿಗೆ ಸರ್ಕಾರಕ್ಕೆ ಪ್ರಸ್ತಾವನೆ-ಶಾಸಕ ಸಿ.ಸಿ. ಪಾಟೀಲ

KannadaprabhaNewsNetwork | Published : Jun 8, 2025 1:45 AM
ಹಿರೇಹಳ್ಳದಲ್ಲಿ ಜಾಲಿ ಕಂಟಿ, ಹೂಳು ತೆರವಿಗೆ ಪೋಟೋ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ‌ ಪ್ರಸ್ತಾವನೆ ಸಲ್ಲಿಸಿ, ಶೀಘ್ರದಲ್ಲೆ ಹೂಳು ತೆರವಿಗೆ ಅನುದಾನ ಬಿಡುಗಡೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ‌ನರಗುಂದ ಶಾಸಕ‌ ಸಿ.ಸಿ. ಪಾಟೀಲ ಹೇಳಿದರು.

ರೋಣ: ಹಿರೇಹಳ್ಳದಲ್ಲಿ ಜಾಲಿ ಕಂಟಿ, ಹೂಳು ತೆರವಿಗೆ ಪೋಟೋ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ‌ ಪ್ರಸ್ತಾವನೆ ಸಲ್ಲಿಸಿ, ಶೀಘ್ರದಲ್ಲೆ ಹೂಳು ತೆರವಿಗೆ ಅನುದಾನ ಬಿಡುಗಡೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ‌ನರಗುಂದ ಶಾಸಕ‌ ಸಿ.ಸಿ. ಪಾಟೀಲ ಹೇಳಿದರು.

ಅವರು ಶನಿವಾರ ತಾಲೂಕು ಹುಲ್ಲೂರ ಗ್ರಾಮದಲ್ಲಿ ಸಿ.ಸಿ‌. ರಸ್ತೆ, ಗ್ರಾಪಂ ನೂತನ ಕಾರ್ಯಾಲಯ ಕಟ್ಟಡ, ಎಸ್.ಸಿ‌. ಕಾಲೋನಿಯಲ್ಲಿ ಸಿ.ಸಿ. ರಸ್ತೆ ವಿವಿಧ ಕಾಮಗಾರಿಗೆ ಭೂಮಿ ಪೂಜೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಮಲಪ್ರಭಾ ನದಿ ಸೇರಲಿರುವ ಪ್ರಮುಖ ಹಳ್ಳಗಳಲ್ಲೊಂದಾದ ಹಿರೇಹಳ್ಳವು ಎರಡು ಬದಿ ಒತ್ತುವರಿ ಹಾಗೂ ಹಳ್ಳದೂದ್ದಕ್ಕೂ ಅತ್ಯಧಿಕ ಪ್ರಮಾಣದಿಂದ ಹೂಳು ತುಂಬಿದ್ದು, ಇದರಿಂದ ಮಳೆಗಾಲದಲ್ಲಿ ಸ್ವಲ್ಪ ಮಳೆ ಬಂದಲ್ಲಿ ಹಳ್ಳದಿಂದ ನೆರೆ ಉಂಟಾಗಿ ಸಾಕಷ್ಟು ಆವಾಂತರ ಸೃಷ್ಟಿಯಾಗುತ್ತದೆ. ಪ್ರತಿ ವರ್ಷವು ಹಳ್ಳದ ಪಾತ್ರದ ಗ್ರಾಮ ಹಾಗೂ ಜಮೀನುಗಳಿಗೆ ನೆರೆ ಹಾವಳಿ ಉಂಟಾಗಿ ರೈತರು, ಜನತೆ ಸಾಕಷ್ಡು ತೊಂದರೆ ಎದುರಿಸುತ್ತಿದ್ದಾರೆ. ಇದನ್ನು ಮನಗಂಡು ಈ ಹಿಂದೆ ಬಿಜೆಪಿ‌ ಆಡಳಿತದಲ್ಲಿ ನಾನು ಲೋಕೋಪಯೋಗಿ ಮಂತ್ರಿಯಾಗಿದ್ದೆ, ಆಗ ಸಚಿವರಾಗಿದ್ದ ಮಾಧುಸ್ವಾಮಿ ಅವರಿಗೆ ಹಿರೇಹಳ್ಳದಲ್ಲಿ ಹೂಳು ತೆರವಿಗೆ ₹ 25 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದೆ. ಆದರೆ ಗದಗ ಭಾಗದಲ್ಲಿ ಕೆಲ ರೈತರು ಇದಕ್ಕೆ ವಿರೋಧ ವ್ಯಕ್ತ ಮಾಡಿದ್ದರಿಂದ ಅನುದಾನ ಬಳಕೆಯಾಗಲಿಲ್ಲ, ಕಾಮಗಾರಿ ನೆನಗುದಿಗೆ ಬಿದ್ದಿತು. ಇದರಿಂದಾಗಿ ಗದಗ ಭಾಗ ಹಾಗೂ ರೋಣ ಭಾಗದ ಹಿರೇಹಳ್ಳ ಪಾತ್ರದ ಗ್ರಾಮ ಹಾಗೂ ಜಮೀನುಗಳಿಗೆ ತೊಂದರೆಯಾಗುತ್ತಿದೆ. ಈ ತೊಂದರೆ ತಪ್ಪಿಸಲು ಜಾಲಿಕಂಟಿ ಹಾಗೂ ಹೂಳು ತೆರವು ಅತೀ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಸಣ್ಣ ನೀರಾವರಿ ಸಚಿವರಾದ ಬೋಸರಾಜ್ ಹಾಗೂ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮನವಿ ಸಲ್ಲಿಸಲಾಗುವುದು ಎಂದರು.

ಹುಲ್ಲೂರ ಗ್ರಾಮದ ಎಸ್.ಸಿ‌. ಕಾಲೋನಿಯಲ್ಲಿ ₹ 20 ಲಕ್ಷ ವೆಚ್ಚದಲ್ಲಿ ಸಿ.ಸಿ. ರಸ್ತೆ, ಲೋಕೋಪಯೋಗಿ ಇಲಾಖೆ ಅಂಪೆಡೆಕ್ಸ - ಇ- ಯೋಜನೆಯಡಿ ₹ 60 ಲಕ್ಷ ವೆಚ್ಚದಲ್ಲಿ ಮುದೇನಗುಡಿ, ಸೋಮನಕಟ್ಟಿ, ಅಸೂಟಿ ಎಂ.ಡಿ.ಆರ್. ರಸ್ತೆಯ 8 ಕಿಮೀದಿಂದ 9 ಕಿಮೀ ವರೆಗೆ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಿಸಲಾಗುವುದು.

ಈ ಹಿಂದೆ ಲೋಕೋಪಯೋಗಿ ಸಚಿವನಾಗಿದ್ದಾಗ 5 ವರ್ಷದಲ್ಲಿ ನರಗುಂದ ಕ್ಷೇತ್ರಕ್ಕೆ ₹ 1850 ಕೋಟಿ ಅನುದಾನ ತಂದಿರುವೆ. ಆದರೆ 2 ವರ್ಷದಲ್ಲಿ ನನ್ನ ಕ್ಷೇತ್ರಕ್ಕೆ ನಿರೀಕ್ಷಿತ ಅನುದಾನ ಸಿಕ್ಕಿಲ್ಲ. ಪಂಚ ಗ್ಯಾರಂಟಿಯಿಂದಾಗಿ ಸರ್ಕಾರಕ್ಕೆ ಈ ವರ್ಷ ಆರ್ಥಿಕ ತೊಂದರೆ ಇದೆ. ಮುಂದಿನ ವರ್ಷ ಸುಧಾರಣೆ ಆಗಲಿದೆ. ಸಿಎಂ ಸಿದ್ದರಾಮಯ್ಯ ಅವರು ನನಗೆ ಆತ್ಮೀಯರಿದ್ದು, ಅವರಲ್ಲಿ ವಿನಂತಿಸಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿಕೊಳ್ಳುತ್ತೇನೆ ಎಂದರು.

ಜಿಪಂ ಎಇಇ ಪುರೋಹಿತ ತೀವ್ರ ತರಾಟೆಗೆ:

ಹುಲ್ಲೂರಿನ ಕಾಮಗಾರಿಗಳ ಭೂಮಿ ಪೂಜೆ ಹಾಗೂ ಉದ್ಘಾಟನೆ ಕಾರ್ಯಕ್ರಮಕ್ಕೆ ಗೈರಾದ ರೋಣ ಜಿಪಂ ಎಇಇ ರಾಘವೇಂದ್ರ ಪುರೋಹಿತ ಅವರ ಬಗ್ಗೆ ಗ್ರಾಮಸ್ಥರು ದೂರು ನೀಡಿದರು. ಈ ಬಗ್ಗೆ ಮಾತನಾಡಲು ಶಾಸಕ ಸಿ.ಸಿ.ಪಾಟೀಲ ಮೊಬೈಲ್ ಮೂಲಕ ಸಂಪರ್ಕಿಸಿ, ಕಾರ್ಯಕ್ರಮಕ್ಕೆ ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿದರು. ಮುಖ್ಯ ಅಭಿಯಂತರರು ರೋಣಕ್ಕೆ ಬರುತ್ತಾರೆ ಅಂದಿದ್ದರಿಂದ ಬರಲು ಆಗಲಿಲ್ಲ ಎಂದು ಎಇಇ ರಾಘವೇಂದ್ರ ಪುರೋಹಿತ ಹೇಳುತ್ತಿದ್ದ, ಕೆರಳಿದ ಶಾಸಕ ಪಾಟೀಲ, ನಾನು ಶಾಸಕನಿದ್ದೇನೆ, ನನಗೆ ಜನತೆಯ ತೊಂದರೆ ಉತ್ತರಿಸಬೇಕಾದಾಗ ಅಧಿಕಾರಿಗಳು ಬೇಕಲ್ವಾ, ನನಗಿಂತ ನಿನಗೆ ನಿನ್ನ ಚೀಫ್ ಎಂಜಿನಿಯರ್ ಮುಖ್ಯವಾದ್ನಾ? ನಿನಗೆ ಜವಾಬ್ದಾರಿ ಅನ್ನೋದು ಇದೆಯೋ? ಇಲ್ಲವೋ? ಅರ್ಧ ಗಂಟೆ ಟೈಂ ಕೊಡ್ತೇನಿ, ನೀ ಎಲ್ಲೆ ಇದ್ದರೂ ಹುಲ್ಲೂರಿಗೆ ಬರಬೇಕು. ಇಲ್ಲವಾದಲ್ಲಿ ವಿಧಾನಸಭೆಗೆ ಬಂದು ಉತ್ತರ ಹೇಳುವಂಗೆ ಮಾಡುತ್ತೇನೆ. ಜನಪ್ರತಿನಿಧಿಗಳೆಂದರೇ ನಿಮಗೆ ಹುಡಗಾಟಿಕೆ ಆಗಿದೆ ಎಂದು ಏಕವಚನದಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಕಾರ್ಯಕ್ರಮದಲ್ಲಿ ಹಿರಿಯ ಮುಖಂಡ ವೀರಯ್ಯ ಹಿರೇಮಠ, ದಶರಥ ಗಾಣಿಗೇರ, ಗ್ರಾಪಂ ಅಧ್ಯಕ್ಷೆ ನೀಲವ್ವ ಅಬ್ಬಿಗೇರಿ, ಉಪಾಧ್ಯಕ್ಷೆ ವಿಜಯಲಕ್ಷ್ಮಿ ಹೆಬ್ಬಳ್ಳಿ, ಸೋಮಶೇಖರ ಚರೇದ, ಸಿದ್ದು ಪಾಟೀಲ, ಮುತ್ತಣ್ಣ ಜಂಗಣ್ಣವರ, ಜಿ.ವಿ. ಪಾಟೀಲ, ಬಸವರಾಜ ಬ್ಯಾಳಿ, ಸೋಮು ಚರೇದ, ಅಶೋಕ ಗಟ್ಟಿ, ನಂದಾ ಬರಡ್ಡಿ, ರೇಣುಕಾ ಪೂಜಾರ, ಷಣ್ಮುಕಗೌಡ ಮೆಣಸಗಿ, ಸುಭಾಸ ಹೊಸಂಗಡಿ, ಮುದಕಪ್ಪ ಅಡ್ನೂರ, ಯಲ್ಲಪ್ಪಗೌಡ ತೇಜುಗೌಡ್ರ, ಮಹಾದೇವಿ ಕಲಗುಡಿ, ಪಕೀರಪ್ಪ ಅವರಾದಿ, ಶಾಂತವ್ವ ಅನವಾಲ, ಶರಣಪ್ಪ ಅಂಗಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಮಂಜುನಾಥ ಕಡಿವಾಲ ನಿರೂಪಿಸಿದರು. ತಾಪಂ ಇಒ ಚಂದ್ರಶೇಖರ ಕಂದಕೂರ ಸ್ವಾಗತಿಸಿದರು.