ಕರಡಿ ಹಾವಳಿಯಿಂದ ಜೋಗ ಗ್ರಾಮಸ್ಥರಿಗೆ ರಕ್ಷಣೆ ನೀಡಿ

KannadaprabhaNewsNetwork |  
Published : Jun 12, 2024, 12:32 AM IST
ಸಂಡೂರು ತಾಲೂಕಿನ ಜೋಗ ಗ್ರಾಮದಲ್ಲಿ ಕರಡಿ ಹಾವಳಿಯನ್ನು ತಡೆಗಟ್ಟಿ, ಜನತೆಗೆ ರಕ್ಷಣೆ ನೀಡಲು ಕೋರಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಮಂಗಳವಾರ ಶಿರಸ್ತೇದಾರ್ ಸಿದ್ದಲಿಂಗಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಸಂಡೂರು ತಾಲೂಕಿನ ತಾಳೂರು ಗ್ರಾಪಂ ವ್ಯಾಪ್ತಿಯ ಜೋಗ ಗ್ರಾಮಸ್ಥರು ಕರಡಿ ಹಾವಳಿಯಿಂದ ಬೇಸತ್ತಿದ್ದಾರೆ. ರಾತ್ರಿ ವೇಳೆ ಮನೆಯಿಂದ ಹೊರಬೀಳದಂತಾಗಿದೆ. ಗ್ರಾಮಸ್ಥರಿಗೆ ರಕ್ಷಣೆ ನೀಡಿ ಎಂದು ಸಂಡೂರು ತಹಸೀಲ್ದಾರ್‌ಗೆ ಮನವಿ ಮಾಡಿದ್ದಾರೆ.

ಸಂಡೂರು: ತಾಲೂಕಿನ ತಾಳೂರು ಗ್ರಾಪಂ ವ್ಯಾಪ್ತಿಯ ಜೋಗ ಗ್ರಾಮಸ್ಥರಿಗೆ ಕರಡಿ ಹಾವಳಿಯಿಂದ ರಕ್ಷಣೆ ಒದಗಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಮಂಗಳವಾರ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸಂಘದ ಅಧ್ಯಕ್ಷ ಜಿ. ಪಂಪನಗೌಡ, ಮೂರು ದಿನಗಳಿಂದ ನಿರಂತರವಾಗಿ ಕರಡಿಗಳು ಗ್ರಾಮಕ್ಕೆ ಪ್ರವೇಶಿಸುತ್ತ, ಹಾವಳಿ ನಡೆಸಿ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿವೆ. ಜೂ. ೮ರಂದು ಗ್ರಾಮದ ಹಂಪಮ್ಮನವರ ಅಂಗಡಿಗೆ ನುಗ್ಗಿ ದಾಂದಲೆ ನಡೆಸಿವೆ. ಡಬ್ಬಿ ಅಂಗಡಿಗಳನ್ನು ಧ್ವಂಸಗೊಳಿಸಿವೆ. ಜೂ. ೯ ಹಾಗೂ ೧೦ರಂದು ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನ, ದೇವಮ್ಮನ ಗುಡಿ ಹಾಗೂ ಕಾಳಮ್ಮನ ಕಟ್ಟೆಯನ್ನು ಪ್ರವೇಶಿಸಿ, ಅಲ್ಲಿ ದೀಪಕ್ಕಾಗಿ ಇಟ್ಟಿದ್ದ ಎಣ್ಣೆಯನ್ನು ಕುಡಿದು ಹೋಗಿವೆ ಎಂದರು.

ಈ ಹಿಂದೆಯೂ ಕರಡಿಯೊಂದು ಗ್ರಾಮದ ಮುಷ್ಠೀರಪ್ಪ ಎಂಬ ವ್ಯಕ್ತಿಯ ಮೇಲೆ ದಾಳಿ ಮಾಡಿ, ಗಾಯಗೊಳಿಸಿತ್ತು. ಇದಕ್ಕೆ ಇನ್ನೂ ಪರಿಹಾರ ದೊರಕಿಲ್ಲ. ಇದೀಗ ಕರಡಿಗಳ ಹಾವಳಿ ಪುನಃ ಆರಂಭವಾಗಿರುವುದರಿಂದ, ಗ್ರಾಮದ ಜನತೆ ಭಯಭೀತರಾಗಿದ್ದಾರೆ. ಮುಂಗಾರು ಮಳೆ ಆರಂಭವಾಗಿರುವುದರಿಂದ ಕೃಷಿ ಚಟುವಟಿಕೆಗೂ ಅಡಚಣೆ ಉಂಟಾಗಿದೆ. ರಾತ್ರಿ ಹೊತ್ತಿನಲ್ಲಿ ದೇಹ ಬಾಧೆ ಪರಿಹರಿಸಿಕೊಳ್ಳಲು ಹೊರಬಾರದಂತಹ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ, ಅರಣ್ಯ ಇಲಾಖೆಯವರು ಕೂಡಲೆ ಕ್ರಮಕೈಗೊಂಡು ಕರಡಿಗಳನ್ನು ಸೆರೆ ಹಿಡಿದು ಗ್ರಾಮಸ್ಥರಲ್ಲಿ ಮನೆಮಾಡಿರುವ ಭಯ ಹೋಗಲಾಡಿಸಲು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.

ಸಂಘದ ಕಾರ್ಯದರ್ಶಿ ಎಂ. ಖಲಂದರ್ ಬಾಷಾ, ಮುಖಂಡರಾದ ಜೆ.ಎಂ. ಚನ್ನಬಸಯ್ಯ, ವಿ. ದೇವಣ್ಣ, ದುರ್ಗಮ್ಮ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!