ಹಿಂದೂ ಧರ್ಮದ ರಕ್ಷಣೆ ನಮ್ಮೇಲ್ಲರ ಹೊಣೆಯಾಗಿದ್ದು ಅದರಿಂದ ಯಾರು ಸಹ ಹಿಂದೆ ಸರಿಯಬಾರದು ಎಂದು ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ತುಮಕೂರು
ಹಿಂದೂ ಧರ್ಮದ ರಕ್ಷಣೆ ನಮ್ಮೇಲ್ಲರ ಹೊಣೆಯಾಗಿದ್ದು ಅದರಿಂದ ಯಾರು ಸಹ ಹಿಂದೆ ಸರಿಯಬಾರದು ಎಂದು ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ ಹೇಳಿದರು. ನಗರದ ಗಾಂಧಿನಗರ ಮತ್ತು ಸಿಎಸ್ಐ ವಸತಿ ಬಡಾವಣೆಯಲ್ಲಿ ಆಯೋಜಿಸಲಾಗಿದ್ದ ಹಿಂದೂ ಸಮಾಜೋತ್ಸವ ದಲ್ಲಿ ಅವರು ಮಾತನಾಡಿದರು. ಅತ್ಯಂತ ಪ್ರಾಚೀನವಾದ ಹಿಂದೂ ಧರ್ಮ ಅಹಿಂಸೆ, ಸತ್ಯ, ನಿಷ್ಠೆ, ಸಹಬಾಳ್ವೆಯನ್ನು ಪ್ರತಿಪಾದಿಸಿಕೊಂಡು ಬೆಳೆದುಬಂದಿದೆ. ನಮ್ಮ ಸಂಸ್ಕೃತಿ, ಪರಂಪರೆಗೆ ವಿಶಿಷ್ಠ ಮಹತ್ವವಿದೆ. ಹಿಂದೂ ಧರ್ಮದ ರಕ್ಷಣೆ ಮತ್ತು ಉದ್ಧಾರ ಎಲ್ಲರ ಆದ್ಯ ಕರ್ತವ್ಯ. ವಿಶೇಷವಾಗಿ ಯುವಜನಾಂಗ ನಮ್ಮ ಧರ್ಮದ ಮಹತ್ವವನ್ನು ತಿಳಿದು ಅನುಸರಿಸಬೇಕು ಎಂದು ಕರೆ ನೀಡಿದರು.
ಅತಿಥಿಯಾಗಿ ಆಗಮಿಸಿದ್ದ ಹಿಂದೂ ಮುಖಂಡ ದೀಕ್ಷಿತ್ ಕುಶಾಲಪ್ಪ ಮಾತನಾಡಿ, ಪ್ರತಿಯೊಬ್ಬ ಭಾರತೀಯನಿಗೂ ನಾನು ಹಿಂದೂ ಎಂಬ ಹೆಮ್ಮೆ ಇರಬೇಕು. ಎಲ್ಲರೂ ಒಗ್ಗಟ್ಟಾಗಿದ್ದರೆ ಏನನ್ನಾದರೂ ಸಾಧಿಸಬಹುದು. ನಮ್ಮ ದೇಶ, ಸಂಸ್ಕೃತಿ, ಧರ್ಮದ ರಕ್ಷಣೆ ಪ್ರತಿಯೊಬ್ಬ ಹಿಂದೂವಿನದಾಗಿರಬೇಕು ಎಂದರು.
ಗಾಂಧಿನಗರ ಮತ್ತು ಸಿಎಸ್ಐ ವಸತಿ ಬಡಾವಣೆ ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ಕೆ.ಜೆ.ರುದ್ರಪ್ಪ ಮಾತನಾಡಿ, ಹಿಂದುತ್ವ ಎಂಬುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ನಡೆ, ನುಡಿ, ಆಚರಣೆ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರಬೇಕು. ರಕ್ತದ ಕಣಕಣದಲ್ಲೂ ದೇಶಪ್ರೇಮ ತುಂಬಿಹರಿಯಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು, ಯುವಜನರು ಹೆಚ್ಚಾಗಿ ಭಾಗವಹಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ನಡೆದ ಶೋಭಾ ಯಾತ್ರೆಯನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್ ಭುವನೇಶ್ವರಿದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ, ಯಾತ್ರೆಯಲ್ಲಿ ಭಾಗವಹಿಸಿದ್ದರು.
ತಾಯಿ ಭುವನೇಶ್ವರಿಗೆ ಕುಂಕುಮಾರ್ಚನೆ, ಲಲಿತಾ ಸಹಸ್ರನಾಮವನ್ನು ಅಂಬುಜ ಮತ್ತು ಮಾತಾ ಭಗಿನಿ ಸಂಘದವರು ನೆರವೇರಿಸಿದರು. ಅಚಿಂತ್ಯ ಮತ್ತು ತಂಡ ಭಕ್ತಿಗೀತೆ ಹಾಗೂ ಸುರೇನಾ ದೇಶಕ್ತಿ ಗೀತೆ ಹಾಡಿದರು. ನಿವೃತ್ತ ಸೈನಿಕ ಟಿ.ಕೆ.ಶಿವಶಂಕರ್, ಡಾ.ಶುಭಾ ದ್ವಾರಕ್ ಅತಿಥಿಯಾಗಿ ಭಾಗವಹಿಸಿದ್ದರು. ಸಮಿತಿ ಮುಖಂಡರಾದ ಸನತ್ಕುಮಾರ್, ಡಾ.ಕೆ.ಪಿ.ಸುರೇಶ್ಬಾಬು, ನಂಜುಂಡಸ್ವಾಮಿ(ದಾಸಣ್ಣ), ನಿಶಾಂತ್, ನಿಸರ್ಗ ರಮೇಶ್, ಪ್ರಭು ಬಾಳಯ್ಯ, ಜಿ.ಕೆ.ಶ್ರೀನಿವಾಸ್, ಕೆ.ಜಿ.ಹನುಮಂತರಾವ್, ಕಿರಣ್ಕುಮಾರ್, ದೊಂತಿ ಅಮರನಾಥ್, ಸಿಂಧೂರ್ ಶ್ರೀನಿವಾಸ್, ಭಾಗ್ಯಲಕ್ಷ್ಮಿ, ಅರವಿಂದ್, ರಮೇಶ್, ನಾಗವೇಣಿ ನಿರಂಜನ್ ಮತ್ತಿತರರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.