ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ಶ್ರೀಸೌಮ್ಯಕೇಶವಸ್ವಾಮಿ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು, ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಮಂಡ್ಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬಾಂಗ್ಲಾದೇಶದ ಕಿಡಿಗೇಡಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗಾಗಿ ಆಯೋಜಿಸಿದ್ದ ಜನಾಂದೋಲನದಲ್ಲಿ ಪಾಲ್ಗೊಂಡ ಧರ್ಮಜಾಗರಣ ಜಿಲ್ಲಾ ಸಂಯೋಜಕ ಅಮಾವಾಸ್ಯೆಗೌಡ ಮಾತನಾಡಿ, ಬಾಂಗ್ಲಾದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿರುವುದು ಅವರ ವೈಯಕ್ತಿಕ ವಿಚಾರವಾಗಿದೆ. ಆದರೆ, ಅಲ್ಲಿ ವಾಸಿಸುವ ಹಿಂದೂಗಳನ್ನೇ ಕೇಂದ್ರೀಕೃತಮಾಡಿರುವ ಕಿಡಿಗೇಡಿಗಳು ಆಸ್ತಿ ದೋಚುವುದು ಸಿಕ್ಕಸಿಕ್ಕವರ ಮೇಲೆ ನಿರಂತರವಾಗಿ ದೌರ್ಜನ್ಯ, ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡಿ ಕಗ್ಗೊಲೆ ಮಾಡಿ ಮನೆಗಳಿಗೆ ನುಗ್ಗಿ ಪ್ರಾಣಹಾನಿ ಮಾಡುತ್ತಿರುವುದು ಖಂಡನೀಯ ಎಂದರು.ಬಾಂಗ್ಲಾದೇಶದ ಬಹುತೇಕ ಗ್ರಾಮಗಳಲ್ಲಿ ಜನರು ಜೀವಭಯದ ನಡುವೆ ಬದುಕು ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲಿನ ಪೊಲೀಸ್ ಮತ್ತು ಸೇನಾ ಪಡೆ ಕೂಡ ಅಸಹಾಯಕತೆ ವ್ಯಕ್ತಪಡಿಸುತ್ತಿದೆ. ಬಾಂಗ್ಲದೇಶವೇ ಕೈಕಟ್ಟಿ ಕುಳಿತರೆ ಅಲ್ಲಿನ ಹಿಂದೂಗಳನ್ನು ರಕ್ಷಣೆ ಮಾಡುವವರು ಯಾರು ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಪುಣ್ಯಕೋಟಿ ರಘು, ಜಿಲ್ಲಾ ಭಾರತೀಯ ಕಿಸಾನ್ ಸಂಘದ ಶಿವಣ್ಣ, ಬಸವರಾಜ್, ಕಾರ್ತಿಕ್, ಪ್ರವೀಣ್, ಕಾಲಿಸ್ ಮಹೇಶ್, ದಿವಾಕರ್, ಕೋಳಿರಾಮ ಸೇರಿದಂತೆ ನೂರಾರು ಮಂದಿ ಸ್ವಯಂಸೇವಕರು ಇದ್ದರು.