ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ, ಅತ್ಯಾಚಾರ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Aug 13, 2024, 12:51 AM IST
12ಕೆಎಂಎನ್ ಡಿ22 | Kannada Prabha

ಸಾರಾಂಶ

ಬಾಂಗ್ಲಾದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿರುವುದು ಅವರ ವೈಯಕ್ತಿಕ ವಿಚಾರವಾಗಿದೆ. ಆದರೆ, ಅಲ್ಲಿ ವಾಸಿಸುವ ಹಿಂದೂಗಳನ್ನೇ ಕೇಂದ್ರೀಕೃತಮಾಡಿರುವ ಕಿಡಿಗೇಡಿಗಳು ಆಸ್ತಿ ದೋಚುವುದು ಸಿಕ್ಕಸಿಕ್ಕವರ ಮೇಲೆ ನಿರಂತರವಾಗಿ ದೌರ್ಜನ್ಯ, ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡಿ ಕಗ್ಗೊಲೆ ಮಾಡಿ ಮನೆಗಳಿಗೆ ನುಗ್ಗಿ ಪ್ರಾಣಹಾನಿ ಮಾಡುತ್ತಿರುವುದು ಖಂಡನೀಯ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಬಾಂಗ್ಲಾದೇಶದ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಿಂಸಾತ್ಮಕ ದೌರ್ಜನ್ಯ, ಅತ್ಯಾಚಾರಗಳನ್ನು ತಡೆಗಟ್ಟಲು ಹಾಗೂ ಅಲ್ಲಿನ ಜನರ ಆಸ್ತಿ ರಕ್ಷಣೆ ಮಾಡಲು ವಿಶ್ವಸಂಸ್ಥೆ ತಕ್ಷಣ ಮುಂದಾಗಬೇಕು ಎಂದು ಆಗ್ರಹಿಸಿ ಹಿಂದೂ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಶ್ರೀಸೌಮ್ಯಕೇಶವಸ್ವಾಮಿ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು, ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಮಂಡ್ಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬಾಂಗ್ಲಾದೇಶದ ಕಿಡಿಗೇಡಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗಾಗಿ ಆಯೋಜಿಸಿದ್ದ ಜನಾಂದೋಲನದಲ್ಲಿ ಪಾಲ್ಗೊಂಡ ಧರ್ಮಜಾಗರಣ ಜಿಲ್ಲಾ ಸಂಯೋಜಕ ಅಮಾವಾಸ್ಯೆಗೌಡ ಮಾತನಾಡಿ, ಬಾಂಗ್ಲಾದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿರುವುದು ಅವರ ವೈಯಕ್ತಿಕ ವಿಚಾರವಾಗಿದೆ. ಆದರೆ, ಅಲ್ಲಿ ವಾಸಿಸುವ ಹಿಂದೂಗಳನ್ನೇ ಕೇಂದ್ರೀಕೃತಮಾಡಿರುವ ಕಿಡಿಗೇಡಿಗಳು ಆಸ್ತಿ ದೋಚುವುದು ಸಿಕ್ಕಸಿಕ್ಕವರ ಮೇಲೆ ನಿರಂತರವಾಗಿ ದೌರ್ಜನ್ಯ, ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡಿ ಕಗ್ಗೊಲೆ ಮಾಡಿ ಮನೆಗಳಿಗೆ ನುಗ್ಗಿ ಪ್ರಾಣಹಾನಿ ಮಾಡುತ್ತಿರುವುದು ಖಂಡನೀಯ ಎಂದರು.

ಬಾಂಗ್ಲಾದೇಶದ ಬಹುತೇಕ ಗ್ರಾಮಗಳಲ್ಲಿ ಜನರು ಜೀವಭಯದ ನಡುವೆ ಬದುಕು ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲಿನ ಪೊಲೀಸ್ ಮತ್ತು ಸೇನಾ ಪಡೆ ಕೂಡ ಅಸಹಾಯಕತೆ ವ್ಯಕ್ತಪಡಿಸುತ್ತಿದೆ. ಬಾಂಗ್ಲದೇಶವೇ ಕೈಕಟ್ಟಿ ಕುಳಿತರೆ ಅಲ್ಲಿನ ಹಿಂದೂಗಳನ್ನು ರಕ್ಷಣೆ ಮಾಡುವವರು ಯಾರು ಎಂದು ಪ್ರಶ್ನಿಸಿದರು.

ದೂರದ ಬಾಂಗ್ಲಾದ ಹಿಂದೂಗಳಿಗೆ ನೋವಾಗಿದೆ ಎಂಬ ತಾತ್ಸಾರ ಬೇಡ. ನಮ್ಮ ದೇಶದ ಹಿಂದೂಗಳೂ ಕೂಡ ಸುರಕ್ಷಿತವಾಗಿಲ್ಲ. ಕೇರಳ, ಪಶ್ಚಿಮ ಬಂಗಾಳ, ಕಾಶ್ಮೀರದಂತಹ ಅನೇಕ ರಾಜ್ಯಗಳಲ್ಲಿ ಹಿಂದೂಗಳ ಸ್ಥಿತಿ ಶೋಚನೀಯವಾಗಿದೆ. ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗಾಗಿ ನಮ್ಮ ದೇಶದ ರಾಷ್ಟ್ರಪತಿಗಳು ವಿಶ್ವಸಂಸ್ಥೆಯೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರ ರೂಪಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಪುಣ್ಯಕೋಟಿ ರಘು, ಜಿಲ್ಲಾ ಭಾರತೀಯ ಕಿಸಾನ್ ಸಂಘದ ಶಿವಣ್ಣ, ಬಸವರಾಜ್, ಕಾರ್ತಿಕ್, ಪ್ರವೀಣ್, ಕಾಲಿಸ್ ಮಹೇಶ್, ದಿವಾಕರ್, ಕೋಳಿರಾಮ ಸೇರಿದಂತೆ ನೂರಾರು ಮಂದಿ ಸ್ವಯಂಸೇವಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

15 ದಿನದ ಹಿಂದೆ ಮದುವೆ ಆಗಿದ್ದ ಜೋಡಿ ಭೀಕರ ಅಪಘಾತಕ್ಕೆ ಬಲಿ
ಶ್ರೀಮಂತರು ಗ್ಯಾರಂಟಿಯಿಂದ ದೂರ ಇರಲಿ: ಎಂ.ಬಿ.ಪಾಟೀಲ್‌