ಕನಕಪುರ: ಮಾಜಿ ಶಾಸಕ ಎನ್.ಮಹೇಶ್ ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಭಾಷಣ ಮಾಡುವಾಗ ಸವಿತಾ ಸಮಾಜದ ಪದ ಬಳಸಿ ಅಪಮಾನಿಸಿದ್ದಾರೆ ಎಂದು ಆರೋಪಿಸಿ ನಗರದ ಚನ್ನಬಸಪ್ಪ ವೃತ್ತದಲ್ಲಿ ತಾಲೂಕು ಭಜಂತ್ರಿ ಸವಿತಾ ಸಮಾಜದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಸವಿತಾ ಸಮಾಜದ ರಾಜ್ಯಾಧ್ಯಕ್ಷ ಮುತ್ತುರಾಜು ಮಾತನಾಡಿ, ಕ್ಷೌರಿಕರು ಪ್ರತಿಯೊಂದು ಮನೆಯ ಸದಸ್ಯರು, ತಾಯಿ ಮಕ್ಕಳನ್ನು ಸಲಹುವ ರೀತಿ ನಮ್ಮ ಸಮಾಜ ಕೊಳಕನಾಗಲಿ, ರೋಗಿಷ್ಠನಾಗಲಿ, ಕಳ್ಳನಾಗಲಿ, ಸುಳ್ಳನಾಗಲಿ ಯಾರೇ ಬಂದರು ನಮ್ಮ ಸೇವೆ ಪ್ರಾಮಾಣಿಕವಾಗಿ ಸಲ್ಲಿಸುತ್ತಿದ್ದೇವೆ. ಹಿಂದುಳಿದ ಸಮುದಾಯಕ್ಕೆ ಅಗೌರವ ತೋರುವುದು ಹಾಗೂ ಖರ್ಗೆ ಕುಟುಂಬವನ್ನು ನಿಂದಿಸುವ ನೆಪದಲ್ಲಿ ಸವಿತಾ ಸಮಾಜಕ್ಕೆ ಅವಮಾನ ಮಾಡುವುದು ಸರಿಯಲ್ಲ. ತಾವೂ ಹಿಂದುಳಿದ ಸಮುದಾಯದಿಂದ ಬಂದಂತಹ ನಾಯಕರು. ನಿಮ್ಮಂತಹವರಿಗೆ ಇದು ಶೋಭೆಯಲ್ಲ ತಕ್ಷಣ ನಮ್ಮ ಸಮುದಾಯದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.ಕರುನಾಡ ಯುವ ಶಕ್ತಿ ವೇದಿಕೆ ರಾಜ್ಯಾಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಯಾವುದೇ ರಾಜಕೀಯ ಮುಖಂಡರು ಮಾತನಾಡುವಾಗ ತಮ್ಮ ನಾಲಿಗೆ ಹಿಡಿತದಲ್ಲಿಟ್ಟುಕೊಳ್ಳಬೇಕು. ಯಾವುದೇ ಜಾತಿ ಧರ್ಮಕ್ಕೆ ನೋವಾಗುವ ರೀತಿ ಮಾತನಾಡಬಾರದು. ನಿಮ್ಮ ಮಾತಿನಿಂದ ಇಡೀ ಸಮುದಾಯಕ್ಕೆ ಮಾನಸಿಕವಾಗಿ ನೋವುಂಟಾಗಿದೆ. ನಮ್ಮ ಸಮುದಾಯದ ಮೇಲೆ ದಬ್ಬಾಳಿಕೆ ಮಾಡುವುದನ್ನು ರಾಜಕೀಯ ನಾಯಕರು ನಿಲ್ಲಿಸಬೇಕು. ಕಾನೂನಿನಲ್ಲಿ ಬದಲಾವಣೆ ತಂದು ಹೀಗೆ ಜಾತಿ ನಿಂದನೆ ಮಾಡುವ ಯಾವುದೇ ವ್ಯಕ್ತಿಗೆ ಸೂಕ್ತ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭಜಂತ್ರಿ ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಶಿವರಾಮಣ್ಣ, ಕನಕಪುರ ಟೌನ್ ಅಧ್ಯಕ್ಷ ಚನ್ನಗಿರಿ, ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರೇಮಕುಮಾರ್, ನಗರ ಕಾರ್ಯದರ್ಶಿ ರಮೇಶ್ ಅಗರ, ತಾಲೂಕು ಖಜಾಂಚಿ ಎಲ್.ಎನ್. ರವಿ, ಖಜಾಂಚಿ ರಾಮಸ್ವಾಮಿ, ಗೌರವಾಧ್ಯಕ್ಷರಾದ ವರದರಾಜು, ಶ್ರೀನಿವಾಸ ಜಕ್ಕಸಂದ್ರ, ವೆಂಕಟೇಶ್ ಮೂರ್ತಿ,ವೈರಮುಡಿ, ಕೆ.ವಿ.ಮಂಜು, ತಾಲೂಕಿನ ಕೋಡಿಹಳ್ಳಿ ಹೋಬಳಿ, ಹುಣಸನಹಳ್ಳಿ, ದೊಡ್ಡಆಲಹಳ್ಳಿ, ಸಾತನೂರು, ಕಬ್ಬಾಳು ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಸವಿತಾ ಸಮಾಜದ ಸದಸ್ಯರು ಭಾಗವಹಿಸಿದ್ದರು.ಕೆ ಕೆ ಪಿ ಸುದ್ದಿ 03:
ಮಾಜಿ ಸಚಿವ ಎನ್.ಮಹೇಶ್ ಭಾಷಣದಲ್ಲಿ ಸವಿತಾ ಸಮಾಜದ ಪದ ಬಳಸಿರುವುದನ್ನು ವಿರೋಧಿಸಿ ಕನಕಪುರ ತಾಲೂಕು ಸವಿತಾ ಸಮಾಜದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.