ಎಚ್‌ಎಂಪಿವಿ ವೈರಸ್‌ ಬಗ್ಗೆ ಆತಂಕ ಬೇಡ: ಸಂಸದ

KannadaprabhaNewsNetwork | Published : Jan 7, 2025 12:16 AM

ಹೆಚ್ ಎಂ ಪಿ ವಿ ವೈರಸ್ ಅನ್ನು ನಿರ್ಲಕ್ಷ್ಯ ಮಾಡದೆ, ಕೊರೊನಾ ರೀತಿ ಸೂಕ್ತ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯ ಸರ್ಕಾರ ಸಹ ಸೂಕ್ತ ಮುಂಜಾಗೃತಾ ಕ್ರಮ ಕೈಗೊಂಡು, ತಕ್ಷಣ ಟಾಸ್ಕ್ ಪೊರ್ಸ್ ಸಮಿತಿಗಳನ್ನು ಮಾಡಬೇಕು. ಈಗ ಚಳಿಗಾಲ ಆಗಿರುವುದರಿಂದ ಈ ಅವಧಿಯಲ್ಲಿ ಎಚ್ ಎಂ ಪಿ ವಿ ವೈರಸ್ ಹೆಚ್ಚು ಬಾಧಿಸಲಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಎಚ್‌ಎಂಪಿವಿ ವೈರಸ್ ತೀವ್ರ ತರನಾದ ವೈರಸ್ ಅಲ್ಲ. ಈ ವೈರಸ್ ಬಗ್ಗೆ ಆತಂಕಪಡಬೇಕಾದ ಅವಶ್ಯಕತೆ ಇಲ್ಲ. ಚಿಕ್ಕ ಮಕ್ಕಳೇ ಈ ವೈರಸ್‌ನ‌ ಟಾರ್ಗೆಟ್ ಆಗಿರುವುದರಿಂದ ಮತ್ತು ಚಳಿಗಾಲವಾಗಿರುವುದರಿಂದ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.

ಜಲ್ಲಾಡಳಿತ ಭವನದ ಸಂಸದರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಇಬ್ಬರು ಮಕ್ಕಳಲ್ಲಿ ಎಚ್‌ಎಂಪಿವಿ ವೈರಸ್ ಪತ್ತೆಯಾಗಿದ್ದರೂ ಅದು ತೀವ್ರತೆಯಿಂದ ಕೂಡಿಲ್ಲ ಎಂದರು.

ಸರ್ಕಾರ ಕ್ರಮ ಕೈಗೊಳ್ಳಬೇಕು

ನವಂಬರ್‌ನಿಂದ ಪೆಬ್ರವರಿ ವರೆಗೂ ಈ ವೈರಸ್‌ ಪ್ರಭಾವ ಬೀರಲಿದೆ. ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ನಿಗಾವಹಿಸಲಿ. ಕಾಲಕಾಲಕ್ಕೆ ಜನರಿಗೆ ಅರಿವು ಮೂಡಿಸುವ ಕೆಲಸ‌ ಮಾಡಬೇಕು. ನಮ್ಮ ಅವಧಿಯಲ್ಲಿ ತಜ್ಞರ ಸಮಿತಿ ‌ಇತ್ತು. ಅದೇ ಸಮಿತಿ ಈಗಲೂ ಇರಬಹುದು. ಆ ಸಮಿತಿಗೆ ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಸೇರಿಕೊಂಡು, ಅವರಿಂದಲೇ ಸಲಹೆ ಪಡೆದು ಕ್ರಮಕ್ಕೆ ಮುಂದಾಗಲಿ ಎಂದರು. ಹೆಚ್ ಎಂ ಪಿ ವಿ ವೈರಸ್ ಅನ್ನು ನಿರ್ಲಕ್ಷ್ಯ ಮಾಡದೆ, ಕೊರೊನಾ ರೀತಿ ಸೂಕ್ತ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯ ಸರ್ಕಾರ ಸಹ ಸೂಕ್ತ ಮುಂಜಾಗೃತಾ ಕ್ರಮ ಕೈಗೊಂಡು, ತಕ್ಷಣ ಟಾಸ್ಕ್ ಪೊರ್ಸ್ ಸಮಿತಿಗಳನ್ನು ಮಾಡಬೇಕು. ಈಗ ಚಳಿಗಾಲ ಆಗಿರುವುದರಿಂದ ಈ ಅವಧಿಯಲ್ಲಿ ಎಚ್ ಎಂ ಪಿ ವಿ ವೈರಸ್ ಹೆಚ್ಚು ಬಾಧಿಸಲಿದೆ. ವಯೋವೃದ್ದರು ಹಾಗೂ ಮಕ್ಕಳ ಮೇಲೆ ಕಾಳಜಿ ವಹಿಸಬೇಕು ಎಂದರು.

ಮಾರ್ಗಸೂಚಿ ಸಿದ್ಧಪಡಿಸಲಿ

ಪ್ರತಿ ಆಸ್ಪತ್ರೆಯಲ್ಲೂ ಸಾದ್ಯವಾದಷ್ಟೂ ಐಸೋಲೇಷನ್ ಬೆಡ್ ನಿಗದಿ ಮಾಡಬೇಕು. ಆರೋಗ್ಯ ಸಚಿವರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ತಜ್ಞ ವೈದ್ಯರುಗಳ ಸಭೆ ನಡೆಸಿ, ಮಾರ್ಗ ಸೂಚಿಗಳನ್ನು ಸಿದ್ದಪಡಿಸಬೇಕು. ಮಾರ್ಗಸೂಚಿಗಳನ್ನ ಜನರಿಗೆ ತಲುಪುವಂತೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.

ಮದ್ಯ, ಮಾದಕವಸ್ತು ಸೇವನೆ ಹೆಚ್ಚಳಜಿಲ್ಲೆಯಲ್ಲಿ ಎತೇಚ್ಚವಾಗಿ ಮದ್ಯ ಮತ್ತು ಗಾಂಜಾ ದೊರೆಯುತ್ತಿದೆ. ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮಕ್ಕೆ ದಿಶಾ ಸಭೆಯಲ್ಲಿ ಪೋಲಿಸ್ ಅಧಿಕಾರಿಗಳಿಗೆ ಮತ್ತು ಅಬಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು. ರಾಜ್ಯದ ಗಡಿ ಜಿಲ್ಲೆಗಳಲ್ಲಿ ಟನ್ ಗಟ್ಟಲೆ ಗಾಂಜಾ ಹೊರ ರಾಜ್ಯಗಳಿಂದ ಬರುತ್ತಿದೆ. ಆದರೆ ಪೊಲೀಸರು ಅರ್ಧ ಕೇಜಿಯಿಂದ ನಾಲ್ಕೈದು ಕೆ.ಜಿ ಮಾತ್ರ ಸೀಜ್ ಮಾಡುತ್ತಾರೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಮದ್ಯದಮಗಡಿಗಳಿಗೆ ಸರ್ಕಾರವೇ ಪರವಾನಗಿ ನೀಡಿದ್ದು, ಅದರೊಂದಿಗೆ ಮದ್ಯದಂಗಡಿಗಳ ಆದಾಯಕ್ಕಾಗಿ ಟಾರ್ಗೆಟ್ ನೀಡುತ್ತಾರೆ. ಇದರಿಂದ ಎತೇಚ್ಚವಾಗಿ ಮದ್ಯ ಮಾರಾಟವಾಗುತ್ತಿದೆ. ತಾವು ಶಾಸಕರಾಗಿದ್ದಾಗ ತಮ್ಮ ನಾಯಕನಹಳ್ಳಿ ಗೇಟ್ ನಲ್ಲಿ ಮದ್ಯದಂಗಡಿಗೆ ಅನುಮತಿ ನಿರಾಕರಿಸಿದ್ದೆ, ಆದರೆ ಈ ಸರ್ಕಾರ ಬಂದನಂತರ ಪರವಾನಗಿ ನೀಡಿದ್ದು, ಅಲ್ಲಿ ಕುಡಿದು ಗಲಾಟೆಯಾಗಿದ್ದರಿಂದಲೇ, ಚಿಕ್ಕಬಳ್ಳಾಪುರ ಇತಿಹಾಸದಲ್ಲೆ ನಡೆಯದ ಬರ್ಬರ ಕೊಲೆನಡೆಯಿತು ಎಂದು ಆರೋಪಿಸಿದರು.ನಾಯಕನಹಳ್ಳಿ ಗೇಟ್ ಮದ್ಯದಂಗಡಿ

ತಮ್ಮ ನಾಯಕನಹಳ್ಳಿ ಗೇಟ್ ನಲ್ಲಿ ಗಾರ್ಮೆಂಟ್ಸ್ ಕಾರ್ಖಾನೆ ಇದ್ದು ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಕೆಲಸಕ್ಕೆ ಹೋಗುತ್ತಾರೆ. ಗ್ರಾಮದವರೂ ಓಡಾಡುತ್ತಾರೆ. ಅಲ್ಲಿ ಮದ್ಯದಂಗಡಿ ಬೇಡ ಎಂದರೂ ಪರವಾನಗಿ ನೀಡಿದ್ದಾರೆ. ಅದನ್ನು ಕೂಡಲೇ ಪರವಾನಗಿಯನ್ನು ಕೂಡಲೆ ರದ್ದುಪಡಿಸುವಂತೆ ಅಧಿಕಾರಿಗಳಿಗೆ ಪತ್ರ ಬರೆಯುತ್ತೇನೆಂದರು. ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಎ.ಗಜೇಂದ್ರ, ಚಿಕ್ಕಬಳ್ಳಾಪುರ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ಜಗದೀಶ್, ಲಕ್ಷ್ಮೀನಾರಾಯಣಗುಪ್ತ, ಮತ್ತಿತರರು ಇದ್ದರು.