
ಶ್ರೀಮಂಗಲ: ಕೇಂದ್ರ ಸರ್ಕಾರವು ಡಾ. ಕಸ್ತೂರಿ ರಂಗನ್ ವರದಿ ಜಾರಿಗೊಳಿಸಲು 7ನೇ ಕರಡು ಅಧಿಸೂಚನೆ ಹೊರಡಿಸಿದ್ದು, ಮುಂದಿನ 60 ದಿನಗಳೊಳಗೆ ಆಕ್ಷೇಪ ಸಲ್ಲಿಸಲು ಕಾಲಾವಕಾಶವನ್ನು ನಿಗದಿಪಡಿಸಿದೆ. ಈ ಹಿನ್ನೆಲೆಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ ಕೊಡಗಿನ ನೂರಾರು ಗ್ರಾಮಗಳ ಗ್ರಾಮಸ್ಥರ ಜೀವನ ಅತಂತ್ರವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿ ತಮ್ಮ ವಿರೋಧ ದಾಖಲಿಸಲು ಆ. 24ರಂದು ಬಿರುನಾಣಿಯಲ್ಲಿ ‘ಮರೆನಾಡ್ ನಾಗರಿಕ ವೇದಿಕೆ’ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ನಂತರ ಗ್ರಾಮಸಭೆ ಕರೆದು ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು.
ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಕಾಯಪಂಡ ಸುನಿಲ್ ಅವರು ಈಗಾಗಲೇ ಕೇಂದ್ರ ಸರ್ಕಾರ ಏಳು ಬಾರಿ ಕಸ್ತೂರಿರಂಗನ್ ವರದಿಯ ಕರಡು ಅದಿ ಸೂಚನೆಯನ್ನು ಹೊರಡಿಸಿದ್ದು,ಆಕ್ಷೇಪಣೆ ಸಲ್ಲಿಸಲು ಅವಕಾಶಗಳನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಈಗಿನ ಹಾಗೂ ಈ ಹಿಂದಿನ ರಾಜ್ಯ ಸರ್ಕಾರಗಳು ಕಸ್ತೂರಿರಂಗನ್ ವರದಿ ಜಾರಿಗೆ ವಿರೋಧಿಸಿ ನಿರ್ಣಯವನ್ನು ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತಾ ಬಂದಿದೆ. ಈಗಲೂ ಸಹ ಜಿಲ್ಲೆಯ ಶಾಸಕರುಗಳು ಮತ್ತು ಸಂಸದರು ಜನರಿಗೆ ತೊಂದರೆಯಾಗುವ ಕಸ್ತೂರಿರಂಗನ್ ವರದಿಯನ್ನು ಜಾರಿಗೆ ತರಲು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.ಈ ಹಿನ್ನಲೆಯಲ್ಲಿ ಸಾರ್ವಜನಿಕರಿಂದಲೂ ಸಹ ತಮ್ಮ ವಿರೋಧವನ್ನು ದಾಖಲಿಸಲು ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಎಂದು ಹೇಳಿದರು.
ನಿಯಮನುಸಾರ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಂಡು ಸರಕಾರಕ್ಕೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.ಸಭೆಯಲ್ಲಿ ಗ್ರಾ. ಪಂ. ಮಾಜಿ ಅಧ್ಯಕ್ಷ ಬುಟ್ಟಿಯಂಡ ತಂಬಿ ನಾಣಯ್ಯ, ಮಾಜಿ ಸದಸ್ಯರಾದ ಬೊಟ್ಟಂಗಡ ಗಿರೀಶ್, ಅಣ್ಣಳಮಾಡ ರಾಯ್ ಚಿಣ್ಣಪ್ಪ,ಕರ್ತಮಾಡ ಸುಜು, ಕೀಕಣಮಾಡ ಮನು, ಕುಪ್ಪಣಮಾಡ ಪ್ರೀತಮ್,ಕಾಳಿಮಾಡ ರಶಿಕ್ ಕಾವೇರಪ್ಪ ಮುಂತಾದವರು ಮಾತನಾಡಿದರು.ಸಭೆಯಲ್ಲಿ ಕೊಡವ ಸಮಾಜದ ನಿರ್ದೇಶಕ ಬಲ್ಯಮೀದೇರಿರ ರಾಜ, ಅನ್ನಳಮಾಡ ಸನ್ನಿ ಹಾಜರಿದ್ದರು.