ಕನ್ನಡಪ್ರಭ ವಾರ್ತೆ ಹುಣಸಗಿ
ಹುಬ್ಬಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಮತ್ತು ಯಾದಗಿರಿಯ ದಲಿತ ಯುವಕ ರಾಕೇಶ್ ಹತ್ಯೆ ಖಂಡಿಸಿ, ರಾಜ್ಯ ಸರ್ಕಾರದ ವಿರುದ್ಧ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಶ್ರದ್ಧಾಂಜಲಿ ಸಲ್ಲಿಸಿದರು.ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಸಂಗಣ್ಣ ಸಾಹು ವೈಲಿ ಮಾತನಾಡಿ, ನೇಹಾ ಹಿರೇಮಠ ಹತ್ಯೆ ಪ್ರಕರಣ ರಾಜ್ಯದ ಜನರನ್ನು ಬೆಚ್ಚಿ ಬಿಳಿಸಿದೆ. ಈ ಘಟನೆ ಮಾಸುವ ಮುನ್ನವೇ ಯಾದಗಿರಿ ನಗರದ ಶಹಾಪೂರ ಪೇಟದಲ್ಲಿ ದಲಿತ ಹಿಂದು ಯುವಕ ರಾಕೇಶ್ ಕೊಲೆಯಾಗಿದೆ. ಊಟಕ್ಕೆ ರೊಟ್ಟಿ ಕೇಳಿದರೆ ಹತ್ಯೆ ಮಾಡುವಂತಹ ವಿಕೃತ ಮನಸ್ಸಿನವರು ಇದ್ದಾರೆ ಎಂದರೆ ನಂಬುವುದಕ್ಕೂ ಸಾಧ್ಯವಿಲ್ಲ. ಆರೋಪಿ ಎಷ್ಟೇ ಪ್ರಬಲವಾಗಿರಲಿ, ಕಾನೂನು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರಿಗೆ ಹಾಗೂ ದಲಿತರಿಗೆ ರಕ್ಷಣೆ ಇಲ್ಲವಾಗಿದೆ. ಜೀವಕ್ಕೆ ಬೆಲೆ ಇಲ್ಲದೆ ಹತ್ಯೆ ಎಸಗುವವರಿಗೆ ಕಾನೂನಿನ ಭಯವಿಲ್ಲ. ವೋಟಿನ ಆಸೆಗಾಗಿ ಸರ್ಕಾರ ಎಲ್ಲವನ್ನೂ ಹಗುರವಾಗಿ ಪರಿಗಣಿಸಿದೆ. ಆರೋಪಿಗೆ ಉಗ್ರ ಶಿಕ್ಷೆ ನೀಡುವಂತೆ ಒತ್ತಾಯಿಸಿದರು.ಸಾಮಾಜಿಕ ಕಾರ್ಯಕರ್ತ ಬಸವರಾಜ ಮೇಲಿನಮನಿ ಮಾತನಾಡಿ, ಹುಬ್ಬಳ್ಳಿ ನೇಹಾ ಹಿರೇಮಠ ಹಾಗೂ ಯಾದಗಿರಿ ಜಿಲ್ಲೆಯ ದಲಿತ ಯುವಕ ರಾಕೇಶ ಹತ್ಯೆಯನ್ನು ತೀವ್ರವಾಗಿ ಖಂಡಿಸಿದರು.
ಈ ವೇಳೆ ಬಿಜೆಪಿ ಮುಖಂಡರಾದ ವಿರೇಶ ಸಾಹು ಚಿಂಚೋಳಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಸನಗೌಡ ಯಡಿಯಾಪೂರ, ಬಿ.ಎಂ. ಹಳ್ಳಿಕೋಟಿ, ಅಮರಣ್ಣ ದೇಸಾಯಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಸ್ಥಾವರಮಠ, ವಿರುಪಾಕ್ಷಯ್ಯ ಸ್ವಾಮಿ ಹಿರೇಮಠ, ಗುರಲಿಂಗಪ್ಪ ಸಜ್ಜನ್, ಅಮೀದ ಡೆಕ್ಕನ್, ರವಿ ಪುರಾಣಿಕಮಠ ಸೇರಿದಂತೆ ಇತರರಿದ್ದರು.