ಗಂಗಾವತಿ:
ಶುಲ್ಕಕ್ಕಾಗಿ ವಿದ್ಯಾರ್ಥಿನಿಯ ತಾಯಿ ತಾಳಿ ಪಡೆದ ಪ್ರಕರಣ ಖಂಡಿಸಿ, ಬಿಎಸ್ಸಿ ನರ್ಸಿಂಗ್ ಕಾಲೇಜು ವಿರುದ್ಧ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಕುಷ್ಟಗಿ, ಕಾಲೇಜು ಶುಲ್ಕದ ಬಾಕಿ ಪಾವತಿಗಾಗಿ ವಿದ್ಯಾರ್ಥಿನಿಯ ತಾಯಿಯ ತಾಳಿಯನ್ನೇ ಬಿಚ್ಚಿಸಿಕೊಂಡ ಕಾಲೇಜಿನ ಚೇರ್ಮನ್ ಡಾ. ಸಿ.ಬಿ ಚಿನಿವಾಲ ಅವರ ಕೃತ್ಯ ಖಂಡನೀಯ. ಕೂಡಲೇ ವೈದ್ಯಕೀಯ ಶಿಕ್ಷಣ ಇಲಾಖೆಯವರು ಕಾಲೇಜಿನ ಮಾನ್ಯತೆ ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಖಾಸಗಿ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಬಡವರಿಂದ ಹಣದ ರೂಪದಲ್ಲಿ ರಕ್ತ ಹೀರುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟವರು ಕ್ರಮ ಕೈಗೊಳ್ಳದಿದ್ದರೆ ರಾಜ್ಯಮಟ್ಟದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಹಕ್ಕು ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿ ಕಂಡು ಬಂದಿದೆ ಎಂದು ದೂರಿದರು.ತಾಲೂಕು ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ಉಪಾಧ್ಯಕ್ಷ ಶರೀಫ್ ಎಂ., ಮುಖಂಡರಾದ ದುರುಗೇಶ್, ಮಾರುತಿ, ಶರಣಬಸವ, ಅನಿತಾ, ಅಮೃತ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಆರ್ಥಿಕ ನೆರವು:ಹಿಂದುಳಿದ ಪ್ರದೇಶದ ಕಾವೇರಿಗೆ ಸರ್ಕಾರಿ ಕೋಟಾದಲ್ಲಿ ಸೀಟು ಸಿಕ್ಕಿದ್ದು ಅವಳ ಮುಂದಿನ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಲು ಸಮಾನ ಮನಸ್ಕರು ಸಿದ್ದರಾಗಿದ್ದೇವೆ ಎಂದು ಶಿಕ್ಷಕ ಮೈಲಾರಪ್ಪ ಬೂದಿಹಾಳ ಹೇಳಿದ್ದಾರೆ.ಕಾಲೇಜು ನಡೆಗೆ ಖಂಡನೆ:ವಿದ್ಯಾರ್ಥಿನಿಯ ತಾಳಿಯ ಬಿಚ್ಚಿಸಿಕೊಂಡಿರುವ ಕಾಲೇಜಿನ್ ಚೇರ್ಮನ್ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿರುವ ಯುವ ಉತ್ತೇಜನ ಸೇನಾ ಪಡೆ, ಕಾಲೇಜ್ ಮಾನ್ಯತೆ ರದ್ದು ಮಾಡುವಂತೆ ತಹಸೀಲ್ದಾರ್ಗೆ ಮನವಿ ಸಲ್ಲಿಸಿದೆ. ಈ ವೇಳೆ ಜಿಲ್ಲಾಧ್ಯಕ್ಷ ಸರ್ವಜ್ಞ ಮೂರ್ತಿ, ತಾಲೂಕಾಧ್ಯಕ್ಷ ಅಯ್ಯನಗೌಡ, ಗಿರೀಶ್ ನಾಯಕ, ಆಂಜನೇಯ ಇದ್ದರು.