ಕನ್ನಡಪ್ರಭ ವಾರ್ತೆ ಜಮಖಂಡಿ
ಪ್ರವಾದಿ ಮೊಹಮ್ಮದ್ ಮತ್ತು ಇಸ್ಲಾಂ ಧರ್ಮದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಮಹಾರಾಷ್ಟ್ರದ ಧಾರ್ಮಿಕ ಮುಖಂಡ ರಾಮಗಿರಿ ಮಹಾರಾಜ್ ವಿರುದ್ಧ ವಿವಿಧ ಮುಸ್ಲಿಂ ಸಂಘಟನೆಗಳಿಂದ ದೇಸಾಯಿ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.ಮೌಲಾನಾ ಅಲ್ತಾಫಖಾನ ಮದನಿ ಮಾತನಾಡಿ, ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರ ಅವರ ಕುರಿತು ಮಹಾಂತ ರಾಮಗಿರಿ ಮಹಾರಾಜರು ನೀಡಿರುವ ಅವಹೇಳನಕಾರಿ ಹೇಳಿಕೆಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಅವರ ಕುರಿತಾಗಿ ರಾಮಗಿರಿ ಮಹಾರಾಜ ಅವಹೇಳನಕಾರಿ ಭಾಷಣ ಮಾಡಿದ್ದು, ಈ ಸ್ವಾಮೀಜಿ ಮೇಲೆ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಭಾರತದ ಸಂವಿಧಾನವು ಎಲ್ಲ ಧರ್ಮದವರಿಗೆ ಸಮಾಜ ಬಂಧುಗಳಿಗೆ ಸಮಾನ ರೀತಿಯಲ್ಲಿ ಜೀವನ ನಡೆಸಲು ಅನುವು ಮಾಡಿಕೊಟ್ಟಿದ್ದರೂ ಕೂಡ ಮಹಾಂತ ರಾಮಗಿರಿ ಮಹಾರಾಜ ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರರ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿರುವುದು ಇಸ್ಲಾಂ ಸಮಾಜದ ಬಾಂಧವರಿಗೆ ತೀವ್ರ ನೋವನ್ನುಂಟು ಮಾಡಿದೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಇಂತಹ ಸ್ವಾಮೀಜಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಪ್ರತಿಭಟನೆಯಲ್ಲಿ ಮೌಲಾನಾ ಇಸಾ ಇನಾಮದಾರ, ಮೌಲಾನಾ ಅನೀಸ್ ಡಾಂಗೆ, ಮೌಲಾನಾ ಮುಫ್ತಿ ಹಾರೂನ, ಮೌಲಾನಾ ಫಾರೂಕ್, ಮೌಲಾನಾ ಮುಜಮ್ಮೀಲ ಶೆಖ, ಮೌಲಾನಾ ಅಲ್ತಾಫಖಾನ ಮದನಿ, ಮೌಲಾನಾ ಸರ್ಫರಾಜ, ರಾಜೆಸಾಬ ತಾಳಿಕೋಟಿ, ಖೀಜರ ಪೆಂಡಾರಿ, ಖಾಜಾಆಮೀನ ಕಂಕಣಪೀರ, ರಫೀಕ ಕಲಾದಗಿ, ಝಾಕೀರ ನಧಾಪ, ಅಬ್ದುಲ ಜಮಾದಾರ, ಸಮೀರ ಕಂಗನೋಳ್ಳಿ, ಅನ್ವರ ಮೋಮಿನ, ಮುಬಾರಕ ಅಪರಾದ, ನಸರೋದ್ದಿನ ಜಮಾದಾರ, ಉಸ್ಮಾನಸಾಬ ದಿಲಾವರ, ಮಕ್ಬೂಲ್ ಅಥಣಿಕರ, ಗುಡುಸಾಬ ಹೊನವಾಡ, ರಾಜು ಮಸಳಿ, ಮುಸ್ತಾಕ ಝೆಂಡೆ, ಅಯ್ಯುಬ ಗದಗ, ಅಸ್ಗರಅಲಿ ಝೆಂಡೆ ಇತರರು ಇದ್ದರು.