ಹಗರಿಬೊಮ್ಮನಹಳ್ಳಿ: ವಿದ್ಯುತ್ ಉತ್ಪಾದನೆ, ವಿತರಣೆ ಮತ್ತು ಸಾಗಾಣಿಕೆಯಲ್ಲಿ ಸಂಪೂರ್ಣ ಖಾಸಗೀಕರಣಕ್ಕೆ ಅವಕಾಶ ನೀಡಲಾಗುವ ಕೇಂದ್ರದ ಕರಾಳ ವಿದ್ಯುತ್ ತಿದ್ದುಪಡಿ ಮಸೂದೆ ಅತ್ಯಂತ ಅಪಾಯಕಾರಿಯಾಗಿದೆ. ಸದಾ ರೈತ ಹಾಗೂ ಕೃಷಿ ಕಾರ್ಮಿಕರ ದಮನಕಾರಿ ನೀತಿ ಪ್ರತಿಪಾದಿಸುವ ಕೇಂದ್ರ ಸರಕಾರದ ವಿರುದ್ಧ ಸಂಘಟಿತ ಹೋರಾಟ ಇಂದಿನ ಅಗತ್ಯವಾಗಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ತಿಳಿಸಿದರು.
ದೇಶದ ಸಾರ್ವಜನಿಕ ಉದ್ದಿಮೆ ಮತ್ತು ಹಣಕಾಸು ವಲಯದ ಖಾಸಗೀರಣ ರದ್ದು ಪಡಿಸಬೇಕು ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಆರ್.ಎಸ್. ಬಸವರಾಜ್ ಒತ್ತಾಯಿಸಿದರು.
ಸಿಪಿಎಂ ತಾಲೂಕು ಕಾರ್ಯದರ್ಶಿ ಬಿ. ಮಾಳಮ್ಮ ಮಾತನಾಡಿ, ಮನರೇಗಾ ಬದಲಿಯಾಗಿ ಜಾರಿಯಾಗುವ ವಿಬಿ ಜಿ ರಾಮ್ ಜಿ ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರ ಉದ್ಯೋಗದ ಹಕ್ಕಿಗೆ ಕೊಡಲಿ ಪೆಟ್ಟು ನೀಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮುಷ್ಕರದ ಅಂಗವಾಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿದ್ದ ಕಾರ್ಮಿಕ ಹಾಗೂ ರೈತ ಮತ್ತು ಇತರೇ ಸಂಘಟನೆಗಳ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಅಂಗನವಾಡಿ, ಬಿಸಿಯೂಟ, ಕಟ್ಟಡ ಕಾರ್ಮಿಕ ಸಂಘ, ಪಂಚಾಯಿತಿ ನೌಕರರು, ಸ್ವಚ್ಛ ವಾಹಿನಿಯ ಕಾರ್ಮಿಕರು, ದೇವದಾಸಿ ಮಹಿಳಾ ಸಂಘಟನೆ, ಒಂಟಿ ಮಹಿಳಾ ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಸಿಐಟಿಯು ತಾಲೂಕು ಸಂಚಾಲಕ ಎಸ್. ಜಗನ್ನಾಥ್, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಹನಸಿ ದೇವರಾಜ್, ಲಕ್ಷ್ಮಣ್, ಆನಂದ್, ಕೆ.ಗೌರಮ್ಮ, ಕೆ.ರಫೀ, ಎಂ.ಕೊಟ್ರೇಶ್, ಕೆ.ಹುಲಿಗೆಮ್ಮ, ಕೆ.ಅಂಜಿನಮ್ಮ, ಚರಂತ್, ಸುರೇಶ್ ನಾಗರಾಜ್ ಮತ್ತಿತರರಿದ್ದರು.