ದಾವಣಗೆರೆ: ಹರಿಹರ ತಾಲೂಕು ಕ್ರೀಡಾಂಗಣದ ನೆಲ ಮತ್ತು ಮಹಡಿಯ 5 ವಾಣಿಜ್ಯ ಮಳಿಗೆಗಳ ಕರಾರು ಅವಧಿ 2019ಕ್ಕೆ ಮುಗಿದಿದ್ದರೂ ಹರಾಜು ನಡೆಸಿದ್ದನ್ನು ಖಂಡಿಸಿ ಹರಿಹರ ತಾಲೂಕು ಜಯ ಕರ್ನಾಟಕ ಸಂಘಟನೆಯಿಂದ ಸೋಮವಾರ ದಾವಣಗೆರೆಯ ಡಾ.ಅಂಬೇಡ್ಕರ್ ವೃತ್ತದಲ್ಲಿ ಅರಬೆತ್ತಲೆ ಮತ್ತು ಕಣ್ಣಿಗೆ ಕಪ್ಪುಬಟ್ಟೆ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
ಹರಿಹರ ನಗರಸಭೆ ವ್ಯಾಪ್ತಿಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದ ಒಟ್ಟು 50 ಮಳಿಗೆಗಳು ಇವೆ. ಮಳಿಗೆಗಳ ಬಾಡಿಗೆ ಕರಾರು ಅವಧಿ 2019ರಲ್ಲಿ ಪೂರ್ಣಗೊಂಡಿದೆ. ಆದಕಾರಣ ಕೆಲ ಮಳಿಗೆಗಳ ಬಾಡಿಗೆದಾರರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನುಳಿದ ಮಳಿಗೆ ಬಾಡಿಗೆದಾರರು ಪರವಾನಿಗೆ ಪಡೆಯದೇ ಇರುವುದು ಕಾನೂನು ಬಾಹಿರ. ನಗರಸಭೆ ಪರವಾನಿಗೆ ನವೀಕರಿಸದೇ ಸರ್ಕಾರಿ ಬೊಕ್ಕಸಕ್ಕೆ ನಷ್ಟವಾಗಿದೆ. ಬಹುತೇಕರು ಒಳಬಾಡಿಗೆ ಕೊಟ್ಟು ಬೇರೆ ಮಳಿಗೆ ಬಾಡಿಗೆದಾರರು ಉದ್ದಿಮೆ ನಡೆಸುತ್ತಿದ್ದಾರೆ. ಕ್ರೀಡಾ ಇಲಾಖೆ ನಿರ್ಲಕ್ಷ ಹಾಗೂ ಜಿಲ್ಲಾಡಳಿತ ವಿಫಲತೆ ಖಂಡನೀಯ ಎಂದರು.
ಪ್ರತಿಭಟನೆಯಲ್ಲಿ ಸಂಘಟನೆಯ ಪದಾಧಿಕಾರಿಗಳು ಇದ್ದರು.