ಕನ್ನಡಪ್ರಭ ವಾರ್ತೆ ಕೋಲಾರಕೋಲ್ಕತ್ತಾದಲ್ಲಿ ನಡೆದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಘಟನೆ ಹಾಗೂ ಭೀಕರ ಹತ್ಯೆಯನ್ನು ಖಂಡಿಸಿ ನಗರದ ಹೊರವಲಯದ ಆರ್.ಎಲ್ ಜಾಲಪ್ಪ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರು ಶುಕ್ರವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.ತರಗತಿಗಳು ಹಾಗೂ ವೈದ್ಯಕೀಯ ಸೇವೆಗಳನ್ನು ಬಹಿಷ್ಕರಿಸಿ ಕಾಲೇಜ್ ನಿಂದ ಆಸ್ಪತ್ರೆವರೆಗು ಮೆರವಣಿಗೆ ನಡೆಸಿದ ನೂರಾರು ವಿಧ್ಯಾರ್ಥಿಗಳು ಮತ್ತು ವೈದ್ಯರು, ದೇಶದಲ್ಲಿ ದುಡಿಯುವ ಮಹಿಳೆಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ, ನೆನ್ನೆಯಷ್ಟೇ ಸ್ವಾತಂತ್ರ್ಯ ದಿನಾಚರಣೆ ನಡೆಸಲಾಗಿದೆ, ಆದರೆ ಮಹಿಳೆಗೆ ದೇಶದಲ್ಲಿ ಯಾವುದೇ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸ್ವಾತಂತ್ರ್ಯೋತ್ಸವಕ್ಕೆ ಬೆಲೆ ಇಲ್ಲ
ಇಂದೂ ಸಹ ಪ್ರತಿಭಟನೆ
ಕೋಲ್ಕತ್ತದ ಆರ್.ಜಿ. ಕರ್ ವೈದ್ಯ ಕಾಲೇಜಿನಲ್ಲಿ ಕರ್ತವ್ಯ ನಿರತ ೩೨ ವರ್ಷದ ಸ್ನಾತಕೋತ್ತರ ತರಬೇತಿ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿರುವುದನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ)ಶನಿವಾರ ಕರೆ ನೀಡಿರುವ ರಾಷ್ಟ್ರವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸಿ ಪ್ರತಿಭಟಿಸುತ್ತೇವೆ ಎಂದು ವೈದ್ಯರು ತಿಳಿಸಿದರು.ಪ್ರತಿಭಟನೆಯಲ್ಲಿ ದೇವರಾಜ ಅರಸು ವೈದ್ಯಕೀಯ ವಿವಿ ಉಪಕುಲಪತಿ ಡಾ.ವೆಂಗಮ್ಮ, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಪ್ರಭಾಕರ್, ಮುಖ್ಯ ಆಡಳಿತಾಧಿಕಾರಿ ಡಿವಿಎಲ್ಎನ್ ಪ್ರಸಾದ್, ಕುಲಸಚಿವ ಡಾ.ಮುನಿನಾರಾಯಣ, ಜಾಲಪ್ಪ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಕೃಷ್ಣಪ್ಪ, ಪ್ರೊ. ಡಾ.ರವೀಶ್, ಪ್ರೊ.ಡಾ.ಪ್ರಕಾಶ್ದಾವೆ, ಪ್ರೊ.ಡಾ.ಕೃಷ್ಣಪ್ರಸಾದ್, ಬ್ಯಾಲಹಳ್ಳಿ ಡಾ.ಮನೋಹರ್ಗೌಡ ಬಿ.ಜಿ ಸೇರಿದಂತೆ ಆರ್.ಎಲ್ ಜಾಲಪ್ಪ ಆಸ್ಪತ್ರೆಯ ವೈದ್ಯಕೀಯ ವಿಧ್ಯಾರ್ಥಿ ವಿಧ್ಯಾರ್ಥಿನಿಯರು, ಆಸ್ಪತ್ರೆಯ ವೈದ್ಯರು ಭಾಗವಹಿಸಿದ್ದರು.
.