ಸುರಪುರ: ಹಳ್ಳಿಗಳಿಂದ ನಗರಕ್ಕೆ ಬರುವ ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದ ಕಾರಣ ರೊಚ್ಚಿಗೆದ್ದ ಪೋಷಕರು ಮತ್ತು ವಿದ್ಯಾರ್ಥಿಗಳು ಗುರುವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಬೆ.8 ರಿಂದ ಕೆಂಭಾವಿ ಸುರಪುರ ಮಾರ್ಗವಾಗಿ ಎರಡ್ಮೂರು ಬಸ್ ಬಿಡಬೇಕು. ಆಗ ಕಿರದಳ್ಳಿ ಸುತಮುತ್ತ ಇರುವ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೋಗಿ ಬರಲು ಅನುಕೂಲವಾಗುತ್ತದೆ. ಆದರೆ, ಸರ್ಕಾರ ಇದ್ಯಾವುದನ್ನು ಗಮನಿಸುತ್ತಿಲ್ಲ. ರಾಜಕೀರಣಗಳಿಗೆ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಬೇಕಾಗಿಲ್ಲ. ಇತ್ತ ಸಚಿವರಾದ ಶರಣಬಸವಗೌಡ ದರ್ಶನಾಪುರ ಗಮನಿಸುವುದಿಲ್ಲ. ಅತ್ತ ಶಾಸಕ ರಾಜಾ ವೇಣುಗೋಪಾಲ ನಾಯಕ ನೋಡುತ್ತಿಲ್ಲ. ಕೂಡಲೇ ನಮ್ಮ ಸಮಸ್ಯೆಗೆ ಸ್ಪಂದಿಸದಿದ್ದರೆ ಮಕ್ಕಳೊಂದಿಗೆ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದರು.
ಒಂದು ಗಂಟೆಗಿಂತಲೂ ಹೆಚ್ಚಿನ ಸಮಯ ರಸ್ತೆ ತಡೆ ನಡೆಸಿದ್ದರಿಂದ ರಸ್ತೆಯ ಉದ್ದಕ್ಕೂ ವಾಹನಗಳು ನಿಂತಿದ್ದವು. ಬಸ್ ನಿರ್ವಾಹಕರು ಪೋಷಕರೊಂದಿಗೆ ಮಾತನಾಡಿ ಬಸ್ ಬಿಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ತೆರವುಗೊಳಿಸಿದರು.ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣ ಚಹ್ವಾಣ, ಈರಣ್ಣ ದೊರೆ, ಸಿದ್ದಣ್ಣ ಚೇರಮನ್, ಪ್ರಶಾಂತ ಗೌಡ, ಹಣಮಂತ್ರಾಯ ಜೈನಾಪುರ, ಮಡಿವಾಳಪ್ಪ ಕಟ್ಟಿಮನಿ, ಷಣ್ಮುಖ, ಶಿವರಾಜ್ ದೊರೆ, ದೇವೇಂದ್ರಪ್ಪ ಮಡಿವಾಳಕರ್, ಹಣಮಂತ್ರಾಯ ಹುಬ್ಬಳಿ, ಶಿವಪ್ಪ ಚಳ್ಳಗಿ ಕಿರದಳ್ಳಿ, ಮಲ್ಲಯ್ಯ ಹೆಗ್ಗೇರಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.