ತಾಲೂಕಿನ ಬಿಸಿ ಕಾವಲ್ ನ ಸರ್ವೇ ನಂಬರ್ 1 ರಲ್ಲಿ ಕೋಟ್ಯಾಂತರ ರು ಬೆಲೆಬಾಳುವ 20ಎಕರೆ ಜಮೀನಿನ ಮೂಲ ದಾಖಲೆಗಳನ್ನು ಬೋಗಸ್ ಮಾಡಲಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ತಾಲೂಕು ದಲಿತ ಸಂಘರ್ಷ ಸಮಿತಿ ಮತ್ತು ತಾಲೂಕು ರೈತ ಸಂಘದ ಪದಾಧಿಕಾರಿಗಳು ತಾಲೂಕು ಕಚೇರಿ ಆವರಣದಲ್ಲಿ ನಡೆಸುತ್ತಿರುವ ಅಹೋ ರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಬಿಸಿ ಕಾವಲ್ ನ ಸರ್ವೇ ನಂಬರ್ 1 ರಲ್ಲಿ ಕೋಟ್ಯಾಂತರ ರು ಬೆಲೆಬಾಳುವ 20ಎಕರೆ ಜಮೀನಿನ ಮೂಲ ದಾಖಲೆಗಳನ್ನು ಬೋಗಸ್ ಮಾಡಲಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ತಾಲೂಕು ದಲಿತ ಸಂಘರ್ಷ ಸಮಿತಿ ಮತ್ತು ತಾಲೂಕು ರೈತ ಸಂಘದ ಪದಾಧಿಕಾರಿಗಳು ತಾಲೂಕು ಕಚೇರಿ ಆವರಣದಲ್ಲಿ ನಡೆಸುತ್ತಿರುವ ಅಹೋ ರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ. ಬೋಗಸ್ ದಾಖಲೆಗಳನ್ನು ಸೃಷ್ಠಿಸಿ ಭೂಮಿಯನ್ನು ಕಬಳಿಸಲು ಹುನ್ನಾರ ನಡೆಸುತ್ತಿರುವವರ ಭೂ ಮಾಫಿಯಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಕೂಡಲೇ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ದಾಖಲಾತಿಗಳನ್ನು ಪರಿಶೀಲನೆ ಮಾಡಬೇಕೆಂದು ಆಗ್ರಹಿಸಿ ಧರಣಿ ನಡೆಯುತ್ತಿದೆ. ಯಾವ ಅಧಿಕಾರಿಗಳೂ ಸ್ಥಳಕ್ಕೆ ಬಂದು ತಮ್ಮ ಅಹವಾಲು ಕೇಳದ ಹಿನ್ನೆಲೆಯಲ್ಲಿ ಧರಣಿ ರಾತ್ರಿಯೂ ಶಾಮಿಯಾನದ ಕೆಳಗೆ ಮುಂದುವರೆದಿತ್ತು. ಆದರೆ ಮಂಗಳವಾರ ರಾತ್ರಿ ಏಕಾಏಕಿ ಮಳೆ ಬಂದ ಕಾರಣ ಎಲ್ಲಾ ಪ್ರತಿಭಟನಾಕಾರರು ತಹಸೀಲ್ದಾರ್ ಕಚೇರಿಯ ಬಾಗಿಲ ಬಳಿಯೇ ಮಲಗಿದರು. ಬೆಳಗ್ಗೆ ಯಥಾ ಪ್ರಕಾರ ತಾಲೂಕು ಕಚೇರಿ ಆವರಣದಲ್ಲೇ ಧರಣಿ ಆರಂಭಿಸಿದ್ದಾರೆ. ಮಹಿಳೆಯರೂ ಸಹ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಇತ್ತ ಬಿಸಿ ಕಾವಲ್ ನ ಸರ್ವೇ ನಂಬರ್ 1 ರ 20 ಎಕರೆ ಜಮೀನು ದಲಿತರಿಗೆ ಸಲ್ಲಬೇಕು. ಸವರ್ಣೀಯರು ದಲಿತರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆಂದು ಆರೋಪಿಸಿ ದಲಿತ ಮುಖಂಡ ಕುಣಿಕೇನಹಳ್ಳಿ ಜಗದೀಶ್ ಸಹ ತಮ್ಮ ಬೆಂಬಲಿಗರೊಂದಿಗೆ ಕಳೆದ ಆರೇಳು ದಿನಗಳಿಂದ ಅಹೋ ರಾತ್ರಿ ಧರಣಿ ನಡೆಸುತ್ತಿದ್ದಾರೆ. ದಲಿತರ ನೋವನ್ನು ಕೇಳಲು ಅಧಿಕಾರಿಗಳು ಬಂದಿಲ್ಲ ಎಂದು ಕುಣೀಕೇನಹಳ್ಳಿ ಜಗದೀಶ್ ಕಿಡಿಕಾರಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.