ಕನ್ನಡಪ್ರಭ ವಾರ್ತೆ ಬೆಳಗಾವಿ
ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಪ್ರಕರಣ ಖಂಡಿಸಿ ಸೋಮವಾರ ಬೆಳಗಾವಿಯಲ್ಲಿ ಬ್ರಾಹ್ಮಣ ಸಮಾಜ ಪ್ರತಿಭಟನೆ ನಡೆಸಿತು.ನಗರದ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಶಾಸಕ ಅಭಯ ಪಾಟೀಲ ಮತ್ತು ಸಮಾಜದ ಮುಖಂಡ ಅನಿಲ ಪೋತದಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಕೆಲಕಾಲ ಸಂಚಾರಕ್ಕೆ ಅಡೆತಡೆ ಉಂಟಾಯಿತು. ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ಮೂಲಕ ತೆರಳಿ, ಜಿಲ್ಲಾಧಿಕಾರಿ ಮನವಿ ಸಲ್ಲಿಸಲಾಯಿತು.
ಜನಿವಾರ ತೆಗೆಸಿದವರನ್ನು ಕೇವಲ ಅಮಾನತು ಮಾಡುವುದು ಅಷ್ಟೇ ಅಲ್ಲ ಅವರ ಮೇಲೆ ಕ್ರಿಮಿನಲ್ ಮೊಕದದ್ದಮೆ ದಾಖಲಿಸಬೇಕು.ಜನಿವಾರಕ್ಕೆ ಕೈ ಹಚ್ಚಿದರೆ ತಲವಾರ ತೆಗೆಯಬೇಕಾಗು್ತದೆ. ಮುಂದಿನ ದಿನಗಳಲ್ಲಿ ಬ್ರಾಹ್ಮಣರು ಪರಶುರಾಮನ ಅವತಾರ ತಾಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಜನಿವಾರ ಧರಿಸುವುದು ಸಂಸ್ಕೃತಿಯ ಸಂಕೇತ. ಧರ್ಮದ ಪವಿತ್ರವೂ ಆಗಿದೆ ಎಂದು ಜನಿವಾರವನ್ನು ಕೈಯಲ್ಲಿ ಹಿಡಿದು ಪ್ರತಿಭಟನಾಕಾರರು ಪ್ರದರ್ಶಿಸಿದರು. ಜನಿವಾರ ಉಳಿಸಿ, ಬ್ರಾಹ್ಮಣ ಬೆಳೆಸಿ ಎಂದು ಫಲಕವನ್ನು ಪ್ರದರ್ಶಿಸಿದರು.ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ ಮಾತನಾಡಿ, ಎಲ್ಲ ವಿದ್ಯಾರ್ಥಿಗಳಿಗೆ ಅವರವರ ಧಾರ್ಮಿಕಆಚರಣೆಗಳು ಇರುತ್ತವೆ. ಜನಿವಾರ ತೆಗೆಸುವುದಷ್ಟೇ ಅಲ್ಲದೇ ಅದನ್ನು ಕತ್ತರಿಸಿದ್ದಾರೆ. ಅವರಿಗೆ ಎಷ್ಟು ಧೈರ್ಯ ಇರಬೇಕು. ಅವರ ಕೈ ಕತ್ತರಿಸಿದರೆ ನಡೆಯುತ್ತದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಮಾಜದ ಮುಖಂಡ ಅನಿಲ್ ಪೋತದಾರ್ ಮಾತನಾಡಿ, ನಾವು ಶಾಂತಿ ಪ್ರಿಯರು. ದೇಶಕ್ಕೆ ಒಳ್ಳೆಯದನ್ನೇ ಮಾಡುತ್ತ ಬಂದಿದ್ದೇವೆ. ಯಾರ ಆದೇಶದಂತೆ ಜನಿವಾರ ತೆಗೆಸಿದ್ದಾರೆ ಮತ್ತು ಇದು ಯಾವ ಕಾಯ್ದೆಯಲ್ಲಿದೆ?. ಬೇರೆ ಜಾತಿಗೆ ಈ ಅಪಮಾನ ಆಗಿದ್ದರೆ ಇಡೀ ರಾಜ್ಯವೇ ಹೊತ್ತಿ ಉರಿಯುತ್ತಿತ್ತು. ಆದರೆ, ನಾವು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದೇವೆ. ನಿಮಗೆ ಜನಿವಾರದ ಬಗ್ಗೆ ಆಕ್ಷೇಪ ಇದ್ದರೆ ಮುಂದಿನ ಸಲ ಪರಶುರಾಮನಂತೆ ತಲವಾರ ಹಿಡಿದುಕೊಂಡು ಬರುತ್ತೇವೆ. ನಮ್ಮಲ್ಲಿ ಪರಶುರಾಮನ ಇತಿಹಾಸವಿದೆ ಎಂದು ಎಚ್ಚರಿಸಿದರು.ಕೃಷ್ಣಮಠದ ಹೊನ್ನಿದಿಬ್ಬ ಆಚಾರ್ಯ, ಸಮೀರ್ ಆಚಾರ್ಯ, ಗುರುರಾಜ್ ಆಚಾರ್ಯ, ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟನ ಉಪಾಧ್ಯಕ್ಷ ಭರತ ದೇಶಪಾಂಡೆ, ಆರ್.ಎಸ್ ಮುತಾಲಿಕ್ ದೇಸಾಯಿ, ಅಕ್ಷಯ ಕುಲಕರ್ಣಿ, ಅಶೋಕ ದೇಶಪಾಂಡೆ, ಅನುಶ್ರೀ ದೇಶಪಾಂಡೆ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಈ ಘಟನೆಯನ್ನು ನಾನು ಖಂಡಿಸುತ್ತೇನೆ. ಬೇರೆ ಸಮಾಜ ಆಗಿದ್ದರೆ ಅದನ್ನೇ ಹೇಳುತ್ತಿದ್ದರು. ಆದರೆ, ಬ್ರಾಹ್ಮಣರು ಶಾಂತಿ ಪ್ರಿಯರು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಶಿಕ್ಷಕರನ್ನು ಕೂಡಲೇ ಬಂಧಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಈ ರೀತಿ ಕ್ರಮ ಆಗದಿದ್ದರೇ ಇದರ ಹಿಂದೆ ಸರ್ಕಾರ ಇದೆ ಎನ್ನಬೇಕಾಗುತ್ತದೆ. ನಿಮಗೆ ಹಿಜಾಬ್ ನೆನಪಾಗುತ್ತದೆ. ಈಗ ಜನಿವಾರ ನೆನಪಾಗುತ್ತಿಲ್ಲವೇ?.-ಅಭಯ್ ಪಾಟೀಲ,
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರು.