ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವಿಸ್ತೀರ್ಣದಲ್ಲಿ ದೊಡ್ಡ ಮತಕ್ಷೇತ್ರವಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಅತೀ ಹಿಂದುಳಿದ ವರ್ಗದ ಜನಾಂಗ ಹಾಗೂ ಅಲ್ಪಸಂಖ್ಯಾತರು ಹೆಚ್ಚಾಗಿರುವುದರಿಂದ ಶಿವಮೊಗ್ಗ ತಾಲೂಕು ವ್ಯಾಪ್ತಿಯಲ್ಲಿ ಯಾವುದೇ ತಾಲೂಕು ಆಸ್ಪತ್ರೆ ಇಲ್ಲದೇ ಇರುವುದರಿಂದ ಗರ್ಭಿಣಿಯರು, ಮಕ್ಕಳು, ವಯೋವೃದ್ಧರು ಮತ್ತು ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆಯಾದಾಗ ಬಹಳ ತೊಂದರೆಯಾಗುತ್ತಿದೆ. ಹಾಲಿ ಟ್ರೈಯಾಡ್ ಯೋಜನೆ ಆದೇಶದಂತೆ ಆಯನೂರು ಮತ್ತು ಹೊಳಲೂರು ಹಾಗೂ ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಜ್ಞ ವೈದ್ಯರನ್ನು ವರ್ಗಾವಣೆ ಮಾಡಲಾಗಿದ್ದು, ಸದನದಲ್ಲಿ ಮಾ.12ರಂದು ಈ ಬಗ್ಗೆ ಚರ್ಚಿಸಲಾಗಿದೆ. ಚುಕ್ಕೆ ಪ್ರಶ್ನೆಗೆ ಉತ್ತರ ನೀಡಿದ ಮಂತ್ರಿಗಳು ತಾಲೂಕು ಆಸ್ಪತ್ರೆಗಳು ಇಲ್ಲದಿರುವ ತಾಲೂಕುಗಳಲ್ಲಿ ತಜ್ಞ ವೈದ್ಯರನ್ನು ವರ್ಗಾವಣೆ ಮಾಡುವುದಿಲ್ಲವೆಂದು ಉತ್ತರ ನೀಡಿದ್ದರು. ಆದರೆ, ಈಗ ವರ್ಗಾವಣೆ ಮಾಡಲಾಗಿದ್ದು, ಇದು ಜನತೆಗೆ ಬಗೆದ ದ್ರೋಹ ಎಂದು ಶಾಸಕಿ ಶಾರದಾ ಪೂರ್ಯಾನಾಯ್ಕ್ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ವರ್ಗಾವಣೆ ಮಾಡಲಾದ ತಜ್ಞ ವೈದ್ಯರುಗಳನ್ನು ಮರು ನೇಮಕ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ. ಈ ಮೇಲ್ಕಂಡ ಈ ಮೂರೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು, ಅರವಳಿಕೆ ತಜ್ಞರು ಮತ್ತು ಸಾಮಾನ್ಯ ವೈದ್ಯಾಧಿಕಾರಿಗಳನ್ನು ಕೂಡಲೇ ಮರು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ಇದು ಬಡವರ ಪರವಾದ ಕೆಲಸ. ಶಿಕ್ಷಣಕ್ಕೆ ಮತ್ತು ಆರೋಗ್ಯಕ್ಕೆ ಸರ್ಕಾರಗಳು ಕೂಡಲೇ ಸ್ಪಂದಿಸಬೇಕು. ಆದರೆ ಈ ಸರ್ಕಾರ ಪ್ರಮುಖ ವಿಚಾರಗಳಿಗೆ ಕವಡೆಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಮಂತ್ರಿಗಳು ಹೇಳಿದರೂ ಈ ಬೇಜವಾಬ್ದಾರಿ ಏಕೆ? ಪ್ರಜಾಪ್ರಭುತ್ವದ ಕೊಲೆ ಮಾಡುವ ಕೆಲಸವಾಗುತ್ತಿದೆ. ಮೂಲಭೂತ ಸೌಲಭ್ಯಗಳಾದ ಆರೋಗ್ಯ ಸಮಸ್ಯೆಗೆ ಸರ್ಕಾರದ ಈ ನಿಲುವು ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದ ಪರಮಾವಧಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎನ್. ರಾಮಕೃಷ್ಣ, ಗ್ರಾಮಾಂತರ ಅಧ್ಯಕ್ಷ ಕಸೆಟ್ಟಿ ಸತೀಶ್, ಕಾರ್ಯದರ್ಶಿಗಳಾದ ತ್ಯಾಗರಾಜ್, ಎಚ್.ಎಂ. ಸಂಗಯ್ಯ, ಕೆ.ಎಂ. ನಾಗೇಶ್, ಕಾರ್ಯಾಧ್ಯಕ್ಷ ದಾದಾಪೀರ್, ನಗರಾಧ್ಯಕ್ಷ ದೀಪಕ್ಸಿಂಗ್, ಪ್ರಮುಖರಾದ ಕಶ್ಯಪ್, ಶಿವಾನಾಯ್ಕ, ಗ್ರಾಮಾಂತರ ಕಾರ್ಯಾಧ್ಯಕ್ಷ ಸೋಮಿನಕೊಪ್ಪ ಕಾಂತರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಮಹೇಶ್, ಪ್ರಮುಖರಾದ ಗಂಧದಮನೆ ನರಸಿಂಹ, ಹನುಮಂತಪ್ಪ, ಬಸಪ್ಪಗೌಡ್ರು, ಮಧು, ರಮೇಶ್, ಲಿಂಗಪ್ಪ ಮೊದಲಾದವರಿದ್ದರು.