ಪಿಎಸೈ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : Jul 25, 2024 1:27 AM

ಇಂಡಿ ತಾಲೂಕಿನ ಹೊರ್ತಿ ಪೊಲೀಸ್ ಠಾಣೆಯ ಪಿಎಸ್‌ಐ ಸೀತಾರಾಮ ಲಮಾಣಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿರಿಯ ರೈತ ಮುಖಂಡ ಅಣ್ಣಪ್ಪಸಾಹುಕಾರ ಖೈನೂರ ನೇತೃತ್ವದಲ್ಲಿ ಸೋಮವಾರ ಹೊರ್ತಿ ಗ್ರಾಮದಲ್ಲಿ ಪ್ರತಿಭಟನೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಇಂಡಿ

ತಾಲೂಕಿನ ಹೊರ್ತಿ ಪೊಲೀಸ್ ಠಾಣೆಯ ಪಿಎಸ್‌ಐ ಸೀತಾರಾಮ ಲಮಾಣಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿರಿಯ ರೈತ ಮುಖಂಡ ಅಣ್ಣಪ್ಪಸಾಹುಕಾರ ಖೈನೂರ ನೇತೃತ್ವದಲ್ಲಿ ಸೋಮವಾರ ಹೊರ್ತಿ ಗ್ರಾಮದಲ್ಲಿ ಪ್ರತಿಭಟನೆ ಮಾಡಲಾಯಿತು.

ಗ್ರಾಮದ ರೇವಣಸಿದ್ಧೇಶ್ವರ ದೇವಸ್ಥಾನದಿಂದ ಪ್ರಮುಖ ರಸ್ತೆಯ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ ಪಿಎಸ್‌ಐ ಸೀತಾರಾಮ ಲಮಾಣಿ ವಿರುದ್ಧ ಧಿಕ್ಕಾರ ಕೂಗುತ್ತ ಪೊಲೀಸ್ ಠಾಣೆ ತಲುಪಿದರು. ಅಲ್ಲಿ ಒಂದೂವರೆ ಗಂಟೆ ಪ್ರತಿಭಟನೆ ನಡೆಸಿದರು. ಈ ವೇಳೆ ಸಿಪಿಐ ಎಂ.ಎಂ.ಡಪ್ಪಿನ ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಪ್ರತಿಭಟನಾ ಸ್ಥಳಕ್ಕೆ ಡಿವೈಎಸ್ಪಿ ಎಚ್.ಎಸ್.ಜಗದೀಶ ಅವರು ಆಗಮಿಸಿ ಧರಣಿ ನಿರತರ ಸಮಸ್ಯೆ ಆಲಿಸಿದರು.ಅಣ್ಣಪ್ಪಸಾಹುಕಾರ ಖೈನೂರ ಮಾತನಾಡಿ, ಗೂಂಡಾಗಳಂತೆ ವರ್ತನೆ ಮಾಡುತ್ತಿರುವ ಪಿಎಸ್‌ಐ ಸೀತಾರಾಮ ಲಮಾಣಿ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಕಡು ಬಡವರಿಗೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳದಿದ್ದರೇ ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ಹೊರ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಕ್ರಮ ಮದ್ಯ, ಇಸ್ಪೀಟ್ ಹಾಗೂ ಮಟ್ಕಾ ಚಟುವಟಿಕೆ ಸಂಪೂರ್ಣವಾಗಿ ನಿಲ್ಲಿಸಬೇಕು. ಹೊರ್ತಿ ಪೊಲೀಸ್ ಠಾಣೆಗೆ ದಕ್ಷ ಅಧಿಕಾರಿಗಳ ನೇಮಕ ಮಾಡುವಂತೆ ಒತ್ತಾಯಿಸಿದರು.ಹೋರಾಟಗಾರರ ಸಮಸ್ಯೆ ಆಲಿಸಿದ ಡಿವೈಎಸ್ಪಿ ಜಗದೀಶ ಮಾತನಾಡಿ, ಈ ಕುರಿತು ಎಸ್ಪಿ ಅವರ ಗಮನಕ್ಕೆ ತಂದು ಪಿಎಸ್‌ಐ ಸೀತಾರಾಮ ಲಮಾಣಿ ಅವರ ಮೇಲೆ ಹಾಗೂ ಸಮಾಜ ವಿರೋಧಿ ಚಟುವಟಿಕೆಗಳನ್ನು ತಡೆಯಲು ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಎರಡು ದಿನದಲ್ಲಿ ಕ್ರಮ ಕೈಗೊಳ್ಳದಿದ್ದರೇ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದರು.

ರಮೇಶ ಬೋಸಲೆ, ಆರ್.ಜಿ.ಪಾಟೀಲ, ಅಣ್ಣಪ್ಪಗೌಡ ಪಾಟೀಲ, ಗುರಪ್ಪ ಪೂಜಾರಿ, ಬುದ್ದಪ್ಪ ಬೋಸಗಿ, ಮಲ್ಲೇಶಿ ರೂಗಿ, ಅಮಸಿದ್ದಗೌಡ ಲೋಣಿ, ರಾಜು ರಾಠೋಡ, ಶ್ರೀಶೈಲ ಶಿವೂರ ಇತರರಿದ್ದರು.