ಬ್ಯಾಡಗಿ: ಪಟ್ಟಣದಲ್ಲಿನ ಬಡ ನಿರಾಶ್ರಿತರಿಗೆ ಆಶ್ರಯ ನಿವೇಶನ ಹಂಚಿಕೆ ಮಾಡುವಂತೆ ಆಗ್ರಹಿಸಿ ಆಶ್ರಯ ಹೋರಾಟ ಸಮಿತಿ ಸದಸ್ಯರು ಪಟ್ಟಣದ ಪುರಸಭೆ ಎದುರು ಬುಧವಾರದಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಎರಡನೇ ದಿನವಾದ ಗುರುವಾರ ಯಾವುದೇ ಫಲಪ್ರದ ಕಾಣಲಿಲ್ಲ. ಸ್ಥಳಕ್ಕೆ ಮುಖ್ಯಾಧಿಕಾರಿ: ಧರಣಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ ಶೇ.90ರಷ್ಟು ಆಯ್ಕೆ ಪಟ್ಟಿ ಕಾರ್ಯ ಮುಗಿದಿದ್ದು, ಕೆಲ ತಾಂತ್ರಿಕ ಕಾರಣಗಳಿಂದಾಗಿ ನಿಗದಿತ ಸಮಯಕ್ಕೆ ಹಂಚಿಕೆಯಾಗಿಲ್ಲ ಎಂದು ಸಮಜಾಯಿಷಿ ನೀಡಿದರೂ ಸಹ ಪ್ರತಿಭಟನಾಕಾರರಿಂದ ಸಕಾರಾತ್ಮಕ್ಕೆ ಪ್ರತಿಕ್ರಿಯೆ ಬರಲಿಲ್ಲ.
ಬಡವರ ಸರ್ವೇ ಮಾಡಿಸಿ: ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ವಿನಾಯಕ ಕಂಬಳಿ ಮಾತನಾಡಿ, ರಾಜ್ಯದಲ್ಲಿ ಜಾತಿ ಗಣತಿ ನಡೆಸಲಾಗುತ್ತಿದೆ. ಇದನ್ನು ಬಿಟ್ಟು ಮೊದಲು ಸರ್ಕಾರ ಬಡವರ ಸರ್ವೆ ಮಾಡಿಸಿ ಅವರಿಗೆ ಸವಲತ್ತು ಕೊಡುವ ಕೆಲಸ ಮಾಡಲಿ. ಅಂದಾಗ ಅರ್ಹ ಬಡವರಿಗೆ ಇಂತಹ ಸಮಸ್ಯೆಗಳು ಬೇಗ ಪರಿಹಾರವಾಗಲಿವೆ, ಹೋರಾಟಕ್ಕೆ ಬಂದಿರುವವರು ಅತ್ಯಂತ ಕಡು ಬಡವರು ಇವರಲ್ಲಿ ಯಾರು ಹಣ ತುಂಬಿಲ್ಲ, ಅಂದ ಮಾತ್ರಕ್ಕೆ ಇವರಿಗೆ ನಿವೇಶನ ನೀಡದೇ ಹೋದಲ್ಲಿ ನಾವು ಪ್ರತಿಭಟನೆ ಹೋರಾಟ ಬೇರೆ ರೂಪಕ್ಕೆ ತಲುಪಲಿದೆ ಎಂದು ಎಚ್ಚರಿಸಿದರು.ಸುರೇಶ ಛಲವಾದಿ, ಪರೀದಾಬಾನು ನದೀಮುಲ್ಲಾ, ಪಾಂಡುರಂಗ ಸುತಾರ, ಮಹೇಶ ಗಿರಣಿ, ಬಾಷಾಸಾಬ, ಪ್ರದೀಪ ಜಾಧವ, ಗೀತಾ ಮಡಿವಾಳರ, ಎಸ್.ಎಚ್.ಅನ್ನಪೂರ್ಣ, ಮಂಜುಳಾ ಬಂಡಿವಡ್ಡರ, ಕರಬಸಮ್ಮ ಮಡಿವಾಳರ, ಗೌರಮ್ಮ ಹರಿಜನ, ಷಹನಾಜ್ ಮೇಡ್ಲೇರಿ, ಜರೀನಾ ಮುಲ್ಲಾ, ಐಶ್ವರ್ಯ ಮಡಿವಾಳರ, ಜಾರವ್ವ ಕರಿಯಣ್ಣನವರ, ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದ್ದರು.ಪ್ರತಿಭಟನಾ ಸ್ಥಳಕ್ಕೆ ಆಶ್ರಯ ಸಮಿತಿ ಪದಾಧಿಕಾರಿಗಳಾಗಲಿ, ಪುರಸಭೆ ಸದಸ್ಯರಾಗಲಿ ಯಾರೊಬ್ಬರು ಬರಲಿಲ್ಲ. ಯಾವುದೇ ಪರಿಹಾರ ಕಾಣದ ಹಿನ್ನೆಲೆಯಲ್ಲಿ ಧರಣಿ ಮುಂದುವರೆದಿದೆ. ಪ್ರತಿಭಟನಾಕಾರರು ವೇದಿಕೆಯಲ್ಲಿ ಅಡುಗೆ ಮಾಡಿಕೊಂಡು ಊಟ ಮಾಡಿ ಧರಣಿ ಮುಂದುವರೆಸಿದರು.