ಮಂಡ್ಯ ಗಲಭೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Updated : Sep 13 2024, 01:34 AM IST

ಸಾರಾಂಶ

ಮುಂದೆ ಈದ್‌ ಮಿಲಾದ್‌ ಹಬ್ಬ ಬರಲಿದೆ. ಅಂದು ಮೆರವಣಿಗೆ ನಡೆಯಲಿದ್ದು, ಆ ಮೆರವಣಿಗೆಗೆ ಸರ್ಕಾರ ಅವಕಾಶ ಕೊಡಬಾರದು, ಅವಕಾಶ ಕೊಟ್ಟರೆ ಮತ್ತೆ ಗಲಭೆ ಮಾಡುವ ಸಾಧ್ಯತೆಯಿದೆ ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರುಮಂಡ್ಯದ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಗಲಭೆಯ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮಂಗಳೂರಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಒಕ್ಕೂಟದ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಸಹಭಾಗಿತ್ವದಲ್ಲಿ ಕದ್ರಿ ಮಲ್ಲಿಕಟ್ಟೆ ವೃತ್ತದ ಬಳಿ ಗುರುವಾರ ಪ್ರತಿಭಟನೆ ನಡೆಯಿತು.ವಿಶ್ವ ಹಿಂದು ಪರಿಷತ್‌ ಪ್ರಾಂತ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಮಾತನಾಡಿ, ಗಣಪತಿ ವಿಸರ್ಜನೆ ವೇಳೆ ನಡೆದ ಘಟನೆ ಪೂರ್ವ ನಿಯೋಜಿತ ಕೃತ್ಯ. ಇದು ಹಿಂದೂಗಳ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸಿದೆ. ಘಟನೆ ಹಿಂದೆ ನಿಷೇಧಿತ ಪಿಎಫ್‌ಐ ಸಂಘಟನೆಯ ಕೈವಾಡದ ಶಂಕೆಯಿದೆ. ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.ಮುಂದೆ ಈದ್‌ ಮಿಲಾದ್‌ ಹಬ್ಬ ಬರಲಿದೆ. ಅಂದು ಮೆರವಣಿಗೆ ನಡೆಯಲಿದ್ದು, ಆ ಮೆರವಣಿಗೆಗೆ ಸರ್ಕಾರ ಅವಕಾಶ ಕೊಡಬಾರದು, ಅವಕಾಶ ಕೊಟ್ಟರೆ ಮತ್ತೆ ಗಲಭೆ ಮಾಡುವ ಸಾಧ್ಯತೆಯಿದೆ ಎಂದರು.

ಮಂಡ್ಯದಲ್ಲಿ ನಡೆದ ಘಟನೆಯನ್ನು ಸಹಿಸಲು ಸಾಧ್ಯವಿಲ್ಲ. ಗಲಭೆಗೆ ಕಾರಣರಾದವರ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ದಾಳಿಯಿಂದ ನೂರಾರು ಹಿಂದೂಗಳಿಗೆ ಹಲ್ಲೆಯಾಗಿದೆ. ಹತ್ತಾರು ಅಂಗಡಿಗಳಿಗೆ ಹಾನಿಯಾಗಿದೆ. ಅವರಿಗೆ ಸರ್ಕಾರ ಪರಿಹಾರ ಕೊಡಬೇಕು. ಘಟನೆಯಲ್ಲಿ ಹಲವು ಹಿಂದೂಗಳ ಬಂಧನವಾಗಿದ್ದು, ಅವರನ್ನು ಬಿಡುಗಡೆ ಮಾಡಬೇಕು ಎಂದು ಶರಣ್‌ ಪಂಪವೆಲ್‌ ಒತ್ತಾಯಿಸಿದರು.ವಿಶ್ವ ಹಿಂದೂ ಪರಿಷತ್‌ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್‌ ಮಾತನಾಡಿ, ಧಾರ್ಮಿಕ ಕಾರ್ಯಕ್ರಮದಲ್ಲಿ ದಾಂದಲೆ ನಡೆದಿರುವುದು ಖಂಡನೀಯ. ಹಿಂದೂ ಸಮಾಜ, ಹಿಂದೂ ಸಂಸ್ಕೃತಿಯನ್ನು ಅಧಃಪತನಕ್ಕೆ ತಳ್ಳಲು ಸರ್ಕಾರವೇ ಒತ್ತು ನೀಡುವಂತಿದೆ. ಹಿಂದೂ ಸಮಾಜ ಇದರ ವಿರುದ್ಧ ಜಾಗೃತವಾಗಬೇಕಾದ ಅಗತ್ಯವಿದೆ ಎಂದರು.

ವಿಹಿಂಪ- ಬಜರಂಗದಳ ಮುಖಂಡರಾದ ಭುಜಂಗ ಕುಲಾಲ್‌, ಶಿವಾನಂದ ಮೆಂಡನ್‌, ಸಂಘನಿಕೇತನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ಸತೀಶ್‌ ಪ್ರಭು, ಕಾರ್ಪೊರೇಟರ್‌ ಕಿರಣ್‌ ಕೋಡಿಕಲ್‌, ಸುಧಾಕರ ರಾವ್‌ ಪೇಜಾವರ

ಮತ್ತಿತರರು ಇದ್ದರು.

Share this article