ಅಖಿಲ ಭಾರತ ನಿರುದ್ಯೋಗಿ ಯುವಜನ ಹೋರಾಟ ಸಮಿತಿಯಿಂದ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಆಕ್ರೋಶ
ಕನ್ನಡಪ್ರಭ ವಾರ್ತೆ ಗಂಗಾವತಿಕೇಂದ್ರ, ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿ ಅಖಿಲ ಭಾರತ ನಿರುದ್ಯೋಗಿ ಯುವಜನ ಹೋರಾಟ ಸಮಿತಿಯಿಂದ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭ ಮಾತನಾಡಿದ ಮುಖಂಡ ದೇವರಾಜ ಹೊಸಮನಿ, ನಿರುದ್ಯೋಗ ಇತ್ತೀಚೆಗೆ ಹೆಚ್ಚಾಗಿದೆ. ಇದಕ್ಕೆ ಮೂಲ ಕಾರಣ ಸರ್ಕಾರಗಳು ತರುವಂತಹ ಯುವಜನ ವಿರೋಧಿ ಖಾಸಗಿಕರಣ ನೀತಿಗಳು. ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಹಲವಾರು ಉನ್ನತ ಕೋರ್ಸ್ ಮುಗಿಸಿಕೊಂಡು ಹೊರಬರುತ್ತಿದ್ದಾರೆ. ಸರಿಯಾದ ಸಮಯಕ್ಕೆ ನೇಮಕಾತಿಯಾಗದೆ ಉದ್ಯೋಗ ಹುಡುಕಿಕೊಂಡು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ ಸರ್ಕಾರದಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದರೂ ನೇಮಕಾತಿ ಕೆಲಸ ಆಮೆಗತಿಯಲ್ಲಿ ಸಾಗುತ್ತಿದೆ. ಸರಿಯಾದ ಸಮಯಕ್ಕೂ ಪರೀಕ್ಷೆಗಳನ್ನು ಇಲಾಖೆಗಳು ನಡೆಸುತ್ತಿಲ್ಲ. ಪರೀಕ್ಷೆಗಳಲ್ಲಿ ವ್ಯಾಪಕವಾಗಿ ಅಕ್ರಮ, ಭ್ರಷ್ಟಾಚಾರ ಕೇಳಿ ಬರುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯುವಕರ ಜೀವನದಲ್ಲಿ ಚೆಲ್ಲಾಟವಾಡುತ್ತಿವೆ ಎಂದು ದೂರಿದರು.ಅಖಿಲ ಭಾರತ ನಿರುದ್ಯೋಗಿ ಯುವಜನರ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ್ ಪಿರಗಾರ, ಉದ್ಯೋಗವೆನ್ನುವುದು ಮನುಷ್ಯನಿಗೆ ಬಹಳ ಮುಖ್ಯ. ಇದನ್ನು ನಿರ್ಲಕ್ಷ ಮಾಡುತ್ತಿರುವುದು ಸರ್ಕಾರಗಳ ಯುವಜನ ವಿರೋಧಿ ನೀತಿಯಾಗಿದೆ. ಯುವ ಜನರಿಗೆ ಉದ್ಯೋಗ ನೀಡದೆ ಮತ್ತು ಉದ್ಯೋಗ ಸೃಷ್ಟಿ ಮಾಡದೆ ಹೋದರೆ ಆರ್ಥಿಕ ಸಂಕಷ್ಟಕ್ಕೆ ದೇಶ ಸಿಲುಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಎಐಡಿವೈಓ ರಾಜ್ಯ ಮುಖಂಡ ಶರಣು ಗಡ್ಡಿ, ಎಐಡಿವೈಓ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್, ಮುಖಂಡರಾದ ದುರುಗೇಶ, ಕುಮಾರ, ಮಂಜು, ಮರಿಯಣ್ಣ, ವಿರೇಶ, ಸಿದ್ದರಾಜು, ಮುತ್ತುರಾಜು, ಗ್ಯಾನೇಶ, ಪರಿಮಳ, ಛತ್ರಮ್ಮ, ಕಾಂಚನ, ಕಾವೇರಿ, ವಿನಯಕುಮಾರ, ಸುರೇಶ ಉಪ್ಪಾರ ಸೇರಿದಂತೆ ಹಲವರು ಭಾಗವಹಿಸಿದ್ದರು.