ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕಬ್ಬು ಬೆಳೆಗಾರರಿಗೆ ನ್ಯಾಯಯುತ ಹಾಗೂ ಲಾಭದಾಯಕ ಬೆಲೆ ದೊರಕುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ರೈತರು ಬೆಳೆದ ಎಲ್ಲ ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚ ಆಧಾರಿತ ಲಾಭದಾಯಕ ಬೆಲೆ ನಿಗದಿಪಡಿಸಿ, ರೈತರ ಆದಾಯ ಹಾಗೂ ಕೃಷಿಯ ಸ್ಥಿರತೆಗೆ ಸರ್ಕಾರಗಳು ಆದ್ಯತೆ ನೀಡಬೇಕು ಎಂದು ಆಗ್ರಹಿಸಲಾಯಿತು.
ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬಿತ್ತನೆ ಮಾಡಿರುವ ವಿವಿಧ ಬೆಳೆಗಳ ಬೀಜಗಳು ಸಮರ್ಪಕವಾಗಿ ಮೊಳಕೆಯೊಡೆಯದೆ ಹಾನಿಗೊಳಗಾಗಿವೆ. ಬಿತ್ತನೆಗಾಗಿ ಸಾಲಸೂಲ ಮಾಡಿ ಸಾವಿರಾರು ರೂಪಾಯಿ ಖರ್ಚು ಮಾಡಿರುವ ರೈತರಿಗೆ ತಕ್ಷಣ ಪರಿಹಾರ ನೀಡಬೇಕು. ಬಾಗಲಕೋಟೆ ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆಯಾಗಿ ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಹಾಗೂ ನೆರವು ಒದಗಿಸಬೇಕು ಎಂದು ಸಂಘ ಆಗ್ರಹಿಸಿತು.ಕೃಷ್ಣಾ ಮೇಲ್ದಂಡೆ ಯೋಜನೆಯಡಿ ನದಿಯಲ್ಲಿ ಸಾಕಷ್ಟು ನೀರು ಲಭ್ಯವಿದ್ದರೂ, ಏತನೀರಾವರಿ ಯೋಜನೆಗಳ ಮೂಲಕ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸದಿರುವುದು ರೈತರ ಸಂಕಷ್ಟಕ್ಕೆ ಕಾರಣವಾಗಿದೆ. ಕೃಷಿ ಬೆಳೆಗಳನ್ನು ಉಳಿಸಲು ಅಗತ್ಯವಿರುವ ಕಡೆ ತಕ್ಷಣ ನೀರು ಹರಿಸಬೇಕು ಎಂದು ಒತ್ತಾಯಿಸಲಾಯಿತು.ಅದೇ ರೀತಿ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ನ್ಯಾಯಯುತ ದರದಲ್ಲಿ, ಎಫ್ಆರ್ಪಿ/ನಿಗದಿತ ದರದಲ್ಲಿ ರೈತರಿಗೆ ದೊರಕುವಂತೆ ಕ್ರಮ ಕೈಗೊಳ್ಳಬೇಕು. ಒಂದು ಗೊಬ್ಬರ ಖರೀದಿಸುವಾಗ ಮತ್ತೊಂದು ಗೊಬ್ಬರವನ್ನು ಕಡ್ಡಾಯವಾಗಿ ಖರೀದಿಸುವಂತೆ ವಿತರಕರು ಒತ್ತಾಯಿಸುವುದನ್ನು ತಕ್ಷಣ ತಡೆಯಬೇಕು. ಈಗಾಗಲೇ ಬಿತ್ತನೆ ಹಂಗಾಮು ಆರಂಭವಾಗಿರುವ ಹಿನ್ನೆಲೆಯಲ್ಲಿ ವಿತರಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಯಿತು.ರೈತರ ನೀರಾವರಿ, ಬೆಳೆ ಹಾನಿ, ಬರ ಪರಿಸ್ಥಿತಿ, ರಸಗೊಬ್ಬರ-ಕೀಟನಾಶಕಗಳ ಕೃತಕ ಕೊರತೆ ಮತ್ತು ಬೆಲೆ ನಿಯಂತ್ರಣ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ, ಬಾಗಲಕೋಟೆ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಪ. ಹಿರೇಮಠ ಮಾತನಾಡಿ, ರೈತ ಬದುಕಿದರೆ ದೇಶ ಬದುಕುತ್ತದೆ. ರೈತರ ಸಮಸ್ಯೆಗಳನ್ನು ಕಡೆಗಣಿಸಿದರೆ ಕೃಷಿ ಕ್ಷೇತ್ರವೇ ಸಂಕಷ್ಟಕ್ಕೆ ಸಿಲುಕಲಿದೆ. ಅನ್ನದಾತನಿಗೆ ನ್ಯಾಯಯುತ ಬೆಲೆ, ನೀರಾವರಿ, ಅಗತ್ಯ ಕೃಷಿ ಪರಿಕರಗಳು ಮತ್ತು ಬೆಳೆ ಹಾನಿಗೆ ಸೂಕ್ತ ಪರಿಹಾರ ಒದಗಿಸುವುದು ಸರ್ಕಾರಗಳ ಜವಾಬ್ದಾರಿ ಎಂದರು.
ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುಬ್ಬರಾಯಗೌಡ ಪಾಟೀಲ, ಮುಖಂಡರಾದ ಅಶೋಕ ಮಂತ್ರಿ, ಅಜಿತ ನಾಯ್ಕ, ರುದ್ರಗೌಡ ಪಾಟೀಲ, ಶಾಂತಯ್ಯ ಪಂಚಗಟ್ಟಿಮಠ, ಚನ್ನಪ್ಪ ಮಾಚಕನೂರ, ರಮೇಶ ಸಾರವಾಡ ಮಲ್ಲಪ್ಪ ಅವಟಿ, ಪ್ರಭಾವತಿ ಸೊನ್ನ, ಸಾವಿತ್ರಿ ಕೋಟಿ, ರಾಜೇಶ್ವರಿ ಮರೆಣ್ಣಿ, ನಾಗಮ್ಮ ಕುಂದರಗಿ ಜಿಲ್ಲಾ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಮಹಿಳೆಯರು ಭಾಗಿಯಾಗಿದ್ದರು.