ಕನ್ನಡಪ್ರಭ ವಾರ್ತೆ ಅಥಣಿ

ಪ್ರತಿಯೊಬ್ಬರ ಬದುಕಿನಲ್ಲಿ ಶಿಕ್ಷಣ ಮಹತ್ವದ ಪತ್ರವನ್ನು ವಹಿಸುತ್ತದೆ. ಶಿಕ್ಷಣವು ದೇಶದ ಪ್ರಗತಿಗೆ ಮೂಲಾಧಾರವಾಗಿದ್ದು, ಇದು ಜನರಿಗೆ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡಿ ಆರ್ಥಿಕ ಬೆಳವಣಿಗೆಗೆ, ಬಡತನ ನಿವಾರಣೆಗೆ ಮತ್ತು ಸಾಮಾಜಿಕ ಸಮಾನತೆಗೆ ದಾರಿ ಮಾಡಿಕೊಡುತ್ತದೆ ಎಂದು ನ್ಯಾಯವಾದಿ ಹಾಗೂ ರಂಗಭೂಮಿ ಕಲಾವಿದ ಕೆ.ಎಲ್.ಕುಂದರಗಿ ಹೇಳಿದರು.ಇಲ್ಲಿನ ಮುರುಘೇಂದ್ರ ಶಿವಯೋಗಿ ವಿಶ್ವಸ್ಥ ವಿದ್ಯಾಪೀಠ, ಮಾತೋಶ್ರೀ ಗೌರಮ್ಮ ಗಂಗಾಧರ ಪ್ರತಿಷ್ಠಾನದ ಪದವಿ ಮಹಾವಿದ್ಯಾಲಯ ವಿದ್ಯಾರ್ಥಿಗಳ ಸ್ವಾಗತ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಂವಿಧಾನಿಕವಾಗಿ ಹಾಗೂ ವ್ಯಕ್ತಿಗತವಾಗಿ ಪ್ರಗತಿ ಸಾಧಿಸಲು ಉತ್ತಮ ಶಿಕ್ಷಣ ವ್ಯವಸ್ಥೆ ಅತ್ಯಗತ್ಯ. ಕೌಶಲ್ಯಯುತ ಮಾನವ ಸಂಪನ್ಮೂಲ ಸೃಷ್ಟಿ, ನಾವೀನ್ಯತೆ ಮತ್ತು ಕೈಗಾರಿಕಾ ಉತ್ಪಾದನೆ ಹೆಚ್ಚಳ, ತಂತ್ರಜ್ಞಾನ ಮತ್ತು ವಿಜ್ಞಾನದ ಬೆಳವಣಿಗೆ, ಸಾಮಾಜಿಕ ಬದಲಾವಣೆ ಕಾಣಲು ಶಿಕ್ಷಣ ಪೂರಕವಾಗಿದೆ ಎಂದು ತಿಳಿಸಿದರು. ಶಿಕ್ಷಣ ತಜ್ಞ ಮಲ್ಲಿಕಾರ್ಜುನ ಗಂಗಾಧರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಅಥವಾ ಜ್ಞಾನ ಎಂಬುವುದು ಯಾರು ಕದಿಯಲಾರದ ಸಂಪತ್ತು. ಈ ಜ್ಞಾನ ಸಂಪತ್ತನ ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮದಿಂದ ಸಂಪಾದಿಸಬೇಕು. ದೇಶದಲ್ಲಿ ಬಡತನ ಮತ್ತು ಅಸಮಾನತೆ ಕಡಿಮೆ ಮಾಡುವುದು, ಮಹಿಳಾ ಸಬಲೀಕರಣ ಮತ್ತು ಮೂಢನಂಬಿಕೆಗಳ ನಿವಾರಣೆ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸುವ ಮೂಲಕ ಶಿಕ್ಷಣ ದೇಶದ ಪ್ರಗತಿಗೆ ಪೂರಕವಾಗಿದೆ. ಭಾರತ ಯುವಶಕ್ತಿಯನ್ನು ಹೊಂದಿರುವ ರಾಷ್ಟ್ರವಾಗಿದ್ದು, ನಮ್ಮ ಯುವಶಕ್ತಿ ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳುವುದರ ಜೊತೆಗೆ ಕುಟುಂಬದ ಮತ್ತು ಸಮಾಜದ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶೆಟ್ಟರ ಮಠದ ಮರಳಸಿದ್ದ ಸ್ವಾಮೀಜಿ, ಕಾಡಸಿದ್ದೇಶ್ವರ ಆಶ್ರಮದ ಡಾ.ಕಾಡಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು. ಈ ವೇಳೆ ಹೊನವಾಡದ ಬಾಬುರಾವ ಮಹಾರಾಜರು, ಶಿವಾನಂದ ಮಂಗಸೂಳಿ, ವಿದ್ಯಾ ಹಿರೇಮಠ, ಶಿವಗೌಡ ಮುಧೋಳ, ಆಡಳಿತಾಧಿಕಾರಿ ವಿಜಯ ಗಂಗಾಧರ, ರಮೇಶ ಠಕ್ಕಣವರ, ವಿನಾಯಕ ಗಂಗಾಧರ, ವಿಜಯ್ ಹೂಗಾರ, ರಮೇಶ್ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಪ್ರಾಚಾರ್ಯ ಮಮತಾ ಕಾಂಬಳೆ ಸ್ವಾಗತಿಸಿದರು. ಈರಮ್ಮ ಬಂಗಿಮಠ ನಿರೂಪಿಸಿದರು. ನೂತನ ಬಾಗೇವಾಡಿ ವಂದಿಸಿದರು.