ಧಾರವಾಡ: ಹಿಂದುಳಿದ ವರ್ಗಗಳ ಆಯೋಗದ ಜಾತಿ ಗಣತಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಲೆಮಾರಿ ಹಾಗೂ ಅರೆ ಅಲೆಮಾರಿ ವಿಮುಕ್ತ ಬುಡಕಟ್ಟು ಸಮುದಾಯಗಳ ಒಕ್ಕೂಟದಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ಅಲೆಮಾರಿ ಜನಾಂಗ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮತ್ತು ವೈಜ್ಞಾನಿಕವಾಗಿ ಹಿಂದುಳಿದಿದೆ. ತಳ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಆಯೋಗ ರಚಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾದ ನ್ಯಾ. ಕಾಂತರಾಜು ನೇತೃತ್ವದಲ್ಲಿ ರಚಿಸಿ ಜಾತಿ ಗಣತಿ ವರದಿ ಜಾರಿಗೊಳಿಸಿ, ಅದರ ಅನ್ವಯ ಅಲೆಮಾರಿಗಳಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯ ಮಾಡಿದರು.
ಸರ್ಕಾರದ ಪಟ್ಟಿಯಲ್ಲಿ ಇರುವ 46 ಅಲೆಮಾರಿ, ಅರೆ ಅಲೆಮಾರಿ ಜನಾಂಗ ಪ್ರವರ್ಗ 1ರ ಹಿಂದುಳಿದ ಪಟ್ಟಿಯಿಂದ ಪ್ರತ್ಯೇಕಿಸಿ, ಈ ಸಮುದಾಯಕ್ಕೆ ಅಲೆಮಾರಿ ಬುಡಕಟ್ಟು ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಆಗ್ರಹ ಮಾಡಿದರು.ಅಲೆಮಾರಿ-ಅರೆಅಲೆಮಾರಿ ಜನರಿಗೆ ವಸತಿ ಸೌಲಭ್ಯ, ಶೇ. 3ರಷ್ಟು ಮೀಸಲು ಜಾರಿ, ಜಾತಿ ನಿಂದನೆ ಪ್ರಕರಣ ದಾಖಲಿಸಲು ಆದೇಶ, ಅಲೆಮಾರಿ ಜನಪದ ಕಲಾವಿದರಿಗೆ ಮಾಶಾಸನ, ಕಲಾಮೇಳ ನಡೆಸಲು ಆದೇಶ ಮಾಡುವಂತೆ ಒತ್ತಾಯಿಸಿದರು.ಅಲೆಮಾರಿ ಮಹಿಳೆಯರಿಗೆ ಕೌಶಲ್ಯ ತರಬೇತಿ, ಜಿಲ್ಲೆ-ತಾಲೂಕು ಕೇಂದ್ರದಲ್ಲಿ ಸಮುದಾಯ ಭವನ ನಿರ್ಮಾಣ ಸೇರಿ ವಿವಿಧ ಬೇಡಿಕೆ ಈಡೇರಿಸಲು ತಿಂಗಳ ಗಡುವು ನೀಡಿ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.